ಸಾಮಾಜಿಕ ಜಾಲತಾಣದಲ್ಲಿ ಶ್ರೀಮುರಳಿ “ಭರಾಟೆ’ ಹವಾ: Wach
Team Udayavani, Aug 16, 2018, 5:05 PM IST
ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ “ಕಿಸ್’ ಶ್ರೀಲೀಲಾ ಅಭಿನಯಿಸುತ್ತಿರುವ “ಭರಾಟೆ’ ಚಿತ್ರವು ಚಿತ್ರೀಕರಣದ ಹಂತದಲ್ಲಿದೆ. ಈಗಾಗಲೇ ಚಿತ್ರವು ತನ್ನ ಫಸ್ಟ್ ಲುಕ್ ನಿಂದ ಸುದ್ದಿ ಮಾಡಿತ್ತು. ಇದೀಗ ಚಿತ್ರತಂಡ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದೆ.
ಮೋಷನ್ ಪೋಸ್ಟರ್ ನಲ್ಲಿ ಶ್ರೀ ಮುರಳಿ ಹೇಳುವ ಡೈಲಾಗ್ಗಳು ಖಡಕ್ ಆಗಿ ಮೂಡಿ ಬಂದಿದ್ದು, “ತಾಕತ್ ಇದ್ದವ್ನು ಕೋಟೆ ಕಟ್ತಾನೆ, ದೌವಲತ್ತು ಇದ್ದವ್ನು ಅದರ ಮೇಲೆ ಒಂದು ಬಾವುಟ ನೆಡ್ತಾನೆ, ಛಲ ಇರೋವ್ನು ಹೋರಾಡ್ತಾನೆ, ಬಲ ಇರೋವ್ನು ಎದುರಿಸ್ತಾನೆ, ಆದ್ರೆ ಜೀವನದಲ್ಲಿ ಈ ನಾಲ್ಕು ಇದ್ದವ್ನದೇ ಭರಾಟೆ’ ಎನ್ನುವ ಮೂಲಕ ತನ್ನ ತಾಕತ್ತನ್ನು ತೋರಿಸಿದ್ದಾರೆ.
ಇನ್ನು ಚಿತ್ರಕ್ಕೆ “ಭರ್ಜರಿ’ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗಲೇ “ಭರ್ಜರಿ’, “ಬಹದ್ದೂರ್’ ಚಿತ್ರಗಳ ಮೂಲಕ ಸಿನಿ ಪ್ರಿಯರಿಗೆ ಭರ್ಜರಿ ರಸದೌತಣವನ್ನು ನೀಡಿದ್ದಾರೆ. ಅಲ್ಲದೇ ಈ ಚಿತ್ರದ ಮೂಲಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದು, ಈ ಬಾರಿಯೂ ‘ಭರ್ಜರಿ’ ಚಿತ್ರವನ್ನು ನೀಡುವ ಸೂಚನೆ ಕೊಟ್ಟಿದ್ದಾರೆ. ಹೀಗೆ ಮೋಷನ್ ಪೋಸ್ಟರ್ ನಲ್ಲಿರುವ ಮಾಸ್ ಡೈಲಾಗ್ಗಳು ಸಿನಿಪ್ರಿಯರನ್ನು ದಂಗು ಬಡಿಸುತ್ತಿದೆ.
ಇನ್ನು “ಭರಾಟೆ’ ಚಿತ್ರದ ಸ್ಕ್ರಿಪ್ಟ್ ಪೂಜೆ ಕಳೆದ ತಿಂಗಳು ನಡೆದಿದ್ದು, ಇತ್ತೀಚೆಗೆ ಚಿತ್ರತಂಡದವರು ರಾಜಸ್ತಾನಕ್ಕೆ ಹೋಗಿ ಅಲ್ಲಿ ಫೋಟೋ ಶೂಟ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿನ ಅರಮನೆಗಳಲ್ಲಿ, ಮರಳುಗಾಡಿನಲ್ಲಿ ಮುರಳಿ ಮತ್ತು ನಾಯಕಿ ಶ್ರೀಲೀಲಾ ಅವರ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಛಾಯಾಗ್ರಾಹಕ ಭುವನ್ ಗೌಡ.
ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡ ಸದ್ಯದಲ್ಲೇ ರಾಜಸ್ತಾನಕ್ಕೆ ಪ್ರಯಾಣ ಬೆಳೆಸಲಿದೆ. “ಬಹದ್ದೂರ್’ ಚೇತನ್ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ರಚಿಸಿದ್ದಾರೆ. ಇನ್ನು ಈ ಚಿತ್ರವನ್ನು ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.