“ಮದಗಜ’ನಿಗಾಗಿ ಶ್ರೀಮುರಳಿ ನ್ಯೂ ಲುಕ್
ನವೆಂಬರ್ 1 ಕ್ಕೆ ಮುಹೂರ್ತ, 4 ರಿಂದ ಶೂಟಿಂಗ್ ಶುರು
Team Udayavani, Sep 23, 2019, 3:03 AM IST
ಶ್ರೀಮುರಳಿ ಅವರು “ಭರಾಟೆ’ ಚಿತ್ರದ ನಂತರ “ಮದಗಜ’ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ “ಭರಾಟೆ’ ಜಪದಲ್ಲಿರುವ ಅವರು, ಆ ಚಿತ್ರ ಮುಗಿಸಿದ ಬಳಿಕ “ಮದಗಜ’ ಚಿತ್ರೀಕರಣಕ್ಕೆ ಅಣಿಯಾಗಲಿದ್ದಾರೆ. ಸದ್ಯಕ್ಕೀಗ ಶ್ರೀಮುರಳಿ ಅವರು “ಮದಗಜ’ ಚಿತ್ರದ ಪಾತ್ರಕ್ಕಾಗಿಯೇ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಈ ಚಿತ್ರದಲ್ಲಿ ಅವರು ನ್ಯೂ ಲುಕ್ನಲ್ಲಿ ಮಿಂಚಲಿದ್ದಾರೆ. ಈಗಾಗಲೇ ಅವರು ಗಡ್ಡ ಬಿಡಲು ಶುರುಮಾಡಿದ್ದಾರೆ. ಹಾಗೆಯೇ, ತಮ್ಮ ತಲೆಯ ಕೂದಲನ್ನೂ ಉದ್ದ ಬಿಡುತ್ತಿದ್ದಾರೆ.
ಹೊಸ ಗೆಟಪ್ ಮೂಲಕ “ಮದಗಜ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೀಗ , ಅವರ ಹೊಸ ಲುಕ್ ಇಲ್ಲಿದೆ. ಚಿತ್ರ ಶುರುವಾಗುವ ಹೊತ್ತಿಗೆ ಇನ್ನಷ್ಟು ಹೊಸ ಲುಕ್ ಮೂಲಕ ಎಂಟ್ರಿಯಾಗಲಿದ್ದಾರೆ. ಇನ್ನು, ಅಕ್ಟೋಬರ್ 18 ರಂದು “ಭರಾಟೆ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ಚೇತನ್ಕುಮಾರ್, ನಿರ್ಮಾಪಕ ಸುಪ್ರೀತ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ಬಳಿಕ “ಮದಗಜ’ ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ಮುಹೂರ್ತ ಮಾಡಿಕೊಳ್ಳಲಿದೆ. ನವೆಂಬರ್ 4 ರಿಂದ ಚಿತ್ರೀಕರಣಕ್ಕೆ ಹೊರಡಲಿದೆ.
ಸದ್ಯಕ್ಕೆ ಮೊದಲ ಹಂತದಲ್ಲಿ ಮೈಸೂರು, ಕೊಳ್ಳೆಗಾಲ ಇತರೆಡೆ ಚಿತ್ರೀಕರಣ ಮಾಡಲು ನಿರ್ದೇಶಕ ಮಹೇಶ್ ತಯಾರು ಮಾಡಿಕೊಂಡಿದ್ದಾರೆ. ಶ್ರೀಮುರಳಿ ಅವರ ಜೊತೆ “ಮದಗಜ’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ತೆಲುಗು, ತಮಿಳು ಚಿತ್ರರಂಗದ ಹಿರಿಯ ನಟ,ನಟಿಯರೂ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿದ್ದು, ಇಷ್ಟರಲ್ಲೇ ಪಕ್ಕಾ ಆಗಲಿದೆ ಎಂಬುದು ನಿರ್ದೇಶಕರ ಮಾತು. ಚಿತ್ರಕ್ಕೆ “ಮಫ್ತಿ’ ನವೀನ್ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.