“ಕುರುಕ್ಷೇತ್ರ’ಕ್ಕೆ ಯು/ಎ: ಜನವರಿಯಲ್ಲಿ ತೆರೆಗೆ?
Team Udayavani, Dec 19, 2018, 5:28 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್, ದುರ್ಯೋಧನನಾಗಿ ಅಭಿನಯಿಸುತ್ತಿರುವ ಮುನಿರತ್ನ ನಿರ್ಮಾಣದ ಬಹುಕೋಟಿ ಬಜೆಟಿನ ನಿರೀಕ್ಷಿತ ಚಿತ್ರ “ಕುರುಕ್ಷೇತ್ರ’ಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಚಿತ್ರ “ಕುರುಕ್ಷೇತ್ರ’ವಾಗಿದ್ದು ಪ್ರಾದೇಶಿಕ ಸೆನ್ಸಾರ್ ಮಂಡಳಿಂದ ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಒಟ್ಟಾರೆ ಚಿತ್ರ 3 ಗಂಟೆ 5 ನಿಮಿಷ ಇರಲಿದ್ದು, 2ಡಿ ವರ್ಷನ್ ಸೆನ್ಸಾರ್ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಅಲ್ಲದೇ 3ಡಿ ವರ್ಷನ್ ಸಿನಿಮಾದ ಕೆಲಸ ಬಾಕಿ ಇದ್ದು, ಚಿತ್ರದಲ್ಲಿ ಕಳೆದ ತಿಂಗಳಲ್ಲಿ ನಮ್ಮನ್ನು ಅಗಲಿದ ರೆಬಲ್ ಸ್ಟಾರ್ ಅಂಬರೀಶ್ ಭೀಷ್ಮನ ಪಾತ್ರ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಕೃಷ್ಣನಾಗಿ ರವಿಚಂದ್ರನ್, ಅರ್ಜುನ್ ಸರ್ಜಾ ಕರ್ಣನಾಗಿ, ಭಾನುಮತಿಯಾಗಿ ಮೇಘನಾ ರಾಜ್, ಅರ್ಜುನನ ಪಾತ್ರದಲ್ಲಿ ಸೋನುಸೂದ್, ಅಭಿಮನ್ಯುವಾಗಿ ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಂಡರೆ ಶಕುನಿಯಾಗಿ ರವಿಶಂಕರ್ ನಟಿಸಿದ್ದಾರೆ.
ಇನ್ನು ಈ ಹಿಂದೆ ಕುರುಕ್ಷೇತ್ರ ಚಿತ್ರತಂಡ ದುರ್ಯೋಧನ ಹಾಗೂ ಅಭಿಮನ್ಯುವಿನ ಟೀಸರ್ ಬಿಡುಗಡೆ ಮಾಡಿ ಸಿನಿಪ್ರಿಯರಿಂದ ಮೆಚ್ಚುಗೆ ಪಡೆದಿತ್ತು. ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್ ವಿನ್ಸೆಂಟ್ ಛಾಯಾಗ್ರಹಣ, “ಕಿಂಗ್ ಸಾಲೋಮನ್’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.