ಕೆಜಿಎಫ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
Team Udayavani, Jan 10, 2018, 10:42 AM IST
ಯಶ್ ಅಭಿನಯದ “ಕೆಜಿಎಫ್’ ಶುರುವಾಗಿದ್ದಷ್ಟೇ ಸುದ್ದಿ. ಆ ಬಳಿಕ ಎಷ್ಟೋ ದಿನಗಳ ಬಳಿ ಫಸ್ಟ್ಲುಕ್ ಬಿಡುಗಡೆಯಾಗಿದ್ದಷ್ಟೇ ಗೊತ್ತು. ಆಮೇಲೆ ಯಶ್ ಬರ್ತ್ಡೇಗೊಂದು ಟೀಸರ್ ಬಂತು. ಅದು ಬಿಟ್ಟರೆ, ಹೆಚ್ಚೇನೂ ಮಾಹಿತಿ ಇರಲಿಲ್ಲ. ಆ ಚಿತ್ರದ ಬಗ್ಗೆ ಯಾರೂ ಮಾತಿಗೆ ಸಿಕ್ಕಿರಲಿಲ್ಲ.
ಅದರಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಅವರಂತೂ ಚಿತ್ರೀಕರಣ ಶುರುವಾದಾಗಿನಿಂದ ಮಾತುಕತೆಗೆ ಸಿಕ್ಕಿರಲಿಲ್ಲ. ನೂರು ದಿನಗಳ ಕಾಲ ಯಶಸ್ವಿ ಚಿತ್ರೀಕರಣ ಮುಗಿಸಿರುವ ಪ್ರಶಾಂತ್ ನೀಲ್, “ಉದಯವಾಣಿ’ ಜತೆ ನಾಲ್ಕುವರೆ ನಿಮಿಷ ಮಾತಿಗೆ ಸಿಕ್ಕು, “ಕೆಜಿಎಫ್’ ಕುರಿತಾಗಿ ಒಂದಷ್ಟು ಮಾತು ಹಂಚಿಕೊಂಡಿದ್ದಾರೆ.
* ಆರಂಭದಲ್ಲಿ “ಕೆಜಿಎಫ್’ ಕನ್ನಡದಲ್ಲಿ ಮಾತ್ರ ಶುರುವಾಗಲಿದೆ ಎಂಬುದು ಗೊತ್ತಿತ್ತು. ಈಗ ಅದು ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ! ಅದಕ್ಕೆ ಕಾರಣ, ನಿರ್ಮಾಪಕರು. ಚಿತ್ರದ ವಿಷ್ಯುಯಲ್ಸ್ ನೋಡಿದ ಮೇಲೆ ನಿರ್ಮಾಪಕರು ಕನ್ನಡ ಚಿತ್ರ ಹೊರಗಡೆಯೂ ಹೋಗಬೇಕು. ಅಲ್ಲಿನವರಿಗೂ ನಮ್ಮ ಕನ್ನಡ ಸಿನಿಮಾ ಬಗ್ಗೆ ಇನ್ನಷ್ಟು ಗೊತ್ತಾಗಬೇಕು ಅಂತ ನಿರ್ಧರಿಸಿದ್ದರಿಂದ ನಾಲ್ಕು ಭಾಷೆಯಲ್ಲಿ ತಯಾರು ಮಾಡಲು ಸೂಚಿಸಿದರು.
ಅಲ್ಲದೆ, ಇದೊಂದು ಯೂನಿರ್ವಸಲ್ ಸಬ್ಜೆಕ್ಟ್. ಎಲ್ಲೆಡೆ ಗೊತ್ತಾಗಲಿ ಎಂಬ ಕಾರಣಕ್ಕೆ, ತಂಡದ ಜತೆ ಚರ್ಚಿಸಿ, ಅವರೇ ಈ ನಿರ್ಧಾರ ತೆಗೆದುಕೊಂಡರು. ಮಾರ್ಕೆಟ್ ದೃಷ್ಟಿಯಿಂದಲೂ ಇದು ಒಳ್ಳೆಯ ಬೆಳವಣಿಗೆ ಅಂತಂದುಕೊಂಡು ನಾಲ್ಕು ಭಾಷೆಯಲ್ಲಿ ಚಿತ್ರ ರೆಡಿಯಾಗುತ್ತಿದೆ.
* ಇನ್ನು, ಚಿತ್ರವನ್ನು ಇಂಥಾ ಡೇಟ್ಗೆ ಬಿಡುಗಡೆ ಮಾಡಬೇಕು ಅಂತ ಒಂದು ಡೇಟ್ ನಿಗದಿಪಡಿಸಿದೆವು. ಆ ಡೇಟ್ ಒಳಗೆ ಸಿನಿಮಾ ಪೂರ್ಣಗೊಂಡರೆ ಬರೋಣ, ಇಲ್ಲವಾದರೆ ಬೇಡ, ಆದರೂ ಒಂದು ಪ್ರಯತ್ನ ಮಾಡೋಣ ಅಂತ ಡೇಟ್ ಅನೌನ್ಸ್ ಮಾಡಿದ್ದಾಯ್ತು. ಆದರೆ, ಆಗಲಿಲ್ಲ. ಇಂತಹ ಚಿತ್ರಗಳನ್ನು ಅವಸರ ಮಾಡಬಾರದು. ಕೆಲಸ ನೀಟ್ ಆಗಿ ನಡೆಯಲಿ. ಗುಣಮಟ್ಟ ಬಿಟ್ಟು ಅತ್ತಿತ್ತ ಹೋಗಬಾರದು. ನಿರ್ದೇಶಕರಿಗೆ ಇಷ್ಟವಾಗುವ ತನಕವೂ ಕೆಲಸ ಮಾಡಲಿ.
ಅವರಿಗೆ ತೃಪ್ತಿ ಆಗದಿದ್ದರೆ, ನಾವು ಬಿಡುಗಡೆಯ ದಿನವನ್ನು ಮುಂದಕ್ಕೆ ಹಾಕೋಣ ಅಂತ ನಿರ್ಮಾಪಕರೇ ಹೇಳಿದ್ದರಿಂದ, ನಾವು ಗುಣಮಟ್ಟ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದೇವೆ. ಆದರೂ, ಶೇ.85 ರಷ್ಟು ಚಿತ್ರ ಮುಗಿದಿದೆ. ಇನ್ನು ಶೇ.15 ರಷ್ಟು ಚಿತ್ರೀಕರಣ ಬಾಕಿ ಇದೆ. ಎರಡು ಹಾಡು, ಒಂದು ಫೈಟ್ ಚಿತ್ರೀಕರಿಸಿದರೆ, ಚಿತ್ರೀಕರಣ ಮುಗಿಯಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮಾರ್ಚ್ನಲ್ಲಿ ಕೆಜಿಎಫ್ ತೆರೆಗೆ ಬರಲಿದೆ. ವಕೌìಟ್ ಆಗದಿದ್ದರೆ, ಮುಂದಕ್ಕೆ ಹೋಗಬಹುದಷ್ಟೇ.
* ಯಶ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಿದ ಟೀಸರ್ ಅನ್ನು ನಾನು ಅವರ ಅಭಿಮಾನಿಯಾಗಿ ಕಟ್ ಮಾಡಿ ಬಿಟ್ಟಿದ್ದೇನಷ್ಟೇ. ಕೆಲವರಿಗೆ ಅದು “ಉಗ್ರಂ’ ಶೇಡ್ ಇದೆ ಅನಿಸಬಹುದು. ಅದೇ ಬೇರೆ, ಇದೇ ಬೇರೆ. ಈ ಚಿತ್ರದ ಟ್ರೀಟ್ ಬೇರೆ ಇದೆ. ಮುಖ್ಯವಾಗಿ ನಮಗೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಇರಲಿಲ್ಲ.
ಸಾಮಾಜಿಕ ತಾಣಗಳಲ್ಲಿ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಟೀಸರ್ ಅಂತ ಸುದ್ದಿ ಸುತ್ತುತ್ತಲೇ ಇತ್ತು. ಕೊನೆಗೆ ಅವರಿಗಾಗಿಯೇ ನಾನು ನೂರು ದಿನದ ಕೆಲಸದಲ್ಲಿ ಒಂದು ದಿನದ ಕೆಲಸದ ಮೇಕಿಂಗ್ ಸೇರಿಸಿ, ಟೀಸರ್ ಕಟ್ ಮಾಡಿದ್ದೇನೆ. ತಯಾರಿಲ್ಲದೆಯೇ ಮಾಡಿದ ಟೀಸರ್ ಅದು. ನೋಡಿದವರು ಒಂದೊಂದು ಮಾತು ಹೇಳುತ್ತಾರೆ. ಅದನ್ನೆಲ್ಲಾ ಕಾಂಪ್ಲಿಮೆಂಟ್ ಅಂದುಕೊಳ್ಳುತ್ತೇನೆ.
* ಕೆಜಿಎಫ್ ಚಿತ್ರವನ್ನು ನಾನು ಅಂದುಕೊಂಡಂತೆ ಮಾಡುತ್ತಿದ್ದೇನೆ. ಇಲ್ಲಿ ಎಲ್ಲವೂ ಪ್ಲಾನ್ ಪ್ರಕಾರವೇ ಆಗುತ್ತಿದೆ. ಆದರೆ, ಟೈಮ್ ಸಾಲುತ್ತಿಲ್ಲವಷ್ಟೇ. ಬಿಗ್ ಸಿನಿಮಾ, ಬಿಗ್ ಬಜೆಟ್, 70 ರ ದಶಕದ ಕಥೆ, ಹಳೆಕಾಲದ ಸೆಟ್ಟು, ಆಗಿನ ಕಾರುಗಳು, ಕಾಸ್ಟೂéಮ್ಸ್ ಎಲ್ಲವನ್ನೂ ಹೊಂದಿಸಿಕೊಳ್ಳಬೇಕು. ಇದೆಲ್ಲದ್ದಕ್ಕೂ ಸಮಯ ಬೇಕು. ಎಷ್ಟೇ ತಯಾರು ಮಾಡಿಕೊಂಡರೂ, ಸಮಯ ಸಾಲುತ್ತಿರಲಿಲ್ಲ.
ಆದರೂ, ಯಶ್ ಅವರ ಸಹಕಾರ, ನಿರ್ಮಾಪಕರ ಪ್ರೋತ್ಸಾಹದಿಂದ ಟಫ್ ಆಗಿರುವಂತಹ ಕೆಜಿಎಫ್ ಚಿತ್ರವನ್ನು ಒಳ್ಳೆಯ ತಂಡ ಕಟ್ಟಿಕೊಂಡು ಮಾಡುತ್ತಿದ್ದೇನೆ. ಇಂತಹ ಚಿತ್ರಕ್ಕೆ ನಿರ್ಮಾಪಕರ ಧೈರ್ಯ ಮುಖ್ಯ. ಬಜೆಟ್ ವಿಷಯದಲ್ಲಂತೂ ಅವರು ಎಂದೂ ತಲೆಕೆಡಿಸಿಕೊಂಡಿಲ್ಲ. ಚಿತ್ರಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ಆ ಕಾರಣದಿಂದಾನೂ ಚಿತ್ರ ನಿರೀಕ್ಷೆ ಮೀರಿ ಮೂಡುತ್ತಿದೆ.
* ಇಲ್ಲಿ “ಉಗ್ರಂ’ ಯಶಸ್ಸಿನ ಬಳಿಕ ಮಾಡುತ್ತಿರುವ ಚಿತ್ರವಾದ್ದರಿಂದ ಸಹಜವಾಗಿಯೇ ನಿರೀಕ್ಷೆ ಇರುತ್ತೆ. ಅದರಲ್ಲೂ ಯಶ್ ಕಾಂಬಿನೇಷನ್ ಅನ್ನೋದು ಇನ್ನೊಂದು ಮುಖ್ಯವಾದ ಅಂಶ. ಅದೇನೆ ಇದ್ದರೂ, ಇಲ್ಲಿ ದೊಡ್ಡ ಕ್ಯಾನ್ವಾಸ್ನ ಚಿತ್ರ, ಹೈ ಬಜೆಟ್ನ ಸಿನಿಮಾ ಅನ್ನೋದು ಅಷ್ಟೇ ಮುಖ್ಯವಾಗುತ್ತೆ.
ಇಂತಹ ಚಿತ್ರಗಳ ಕಥೆಯನ್ನು ಒಂದೇ ಏಟಿಗೆ ಹೇಳುವುದಕ್ಕಾಗಲ್ಲ. ಹಾಗಾಗಿ, ಇದು ಮುಂದುವರೆದ ಭಾಗ ಬರುತ್ತೆ ಅನ್ನೋ ಬಗ್ಗೆ ನಾನು ಈಗಲೇ ಏನನ್ನೂ ಹೇಳಲ್ಲ. ಇನ್ನಷ್ಟು ಕೆಲಸವಿದೆ. ಆದಷ್ಟು ಬೇಗ ಮುಗಿಸಿ, ಪ್ರೇಕ್ಷಕರ ಮುಂದೆ ಬರುವ ಪ್ರಯತ್ನ ನಡೆಯುತ್ತಿದೆ.
* ಇದುವರೆಗೆ ನೂರು ದಿನ ಚಿತ್ರೀಕರಣ ನಡೆದಿದೆ. ಇಷ್ಟು ದಿನಗಳ ಚಿತ್ರೀಕರಣದಲ್ಲಿ ಮರೆಯದ ಅನುಭವ ಅಂದರೆ, ಅದು ಒಂದೇ, ನಿರ್ಮಾಪಕರ ಸಹಕಾರ. ಎಷ್ಟೇ ದಿನ ಮಾಡಿದರೂ, ಮಾಡಿ ಅನ್ನುವ ಪ್ರೋತ್ಸಾಹ, ಸೆಟ್ ಬಿದ್ದರೂ, ನಮ್ಮ ಮೇಲೆ ಒಂದಷ್ಟೂ ಒತ್ತಡ ಬರದಂತೆ ನೋಡಿಕೊಂಡು, ಏನೂ ಆಗಲ್ಲ, ನೀವು ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸ ನೀವು ಮಾಡಿ ಅಂತ ಧೈರ್ಯ ಕೊಟ್ಟಿದ್ದನ್ನು ಮರೆಯೋವಂತಿಲ್ಲ.
ಚಿತ್ರಕ್ಕೇನೂ ಕೊರತೆ ಆಗದಂತೆ, ಮೂವರು ಮ್ಯಾನೇಜರನ್ನು ಕೊಟ್ಟಿದ್ದಾರೆ. ಬಜೆಟ್ ಬಗ್ಗೆಯಾಗಲಿ, ಟೈಮ್ ಬಗ್ಗೆಯಾಗಲಿ ಕೇಳದೆ, ಒಳ್ಳೆಯ ಚಿತ್ರ ಕೊಡಿ ಅಷ್ಟೇ ಅನ್ನುವ ನಿರ್ಮಾಪಕರು ಸರಳ. ಹಾಗಾಗಿ ಕೆಜಿಎಫ್ನಲ್ಲಿ ಮರೆಯದ ಸಂಗತಿ ಅಂದರೆ, ನಿರ್ಮಾಪಕರ ಸಹಕಾರ ಮತ್ತು ಪ್ರೋತ್ಸಾಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್