ನೊಂದು ಬೆಂದವರ ನೋವು-ನಲಿವು
ಚಿತ್ರ ವಿಮರ್ಶೆ
Team Udayavani, Jan 26, 2020, 7:01 AM IST
-ಈ ದುಡ್ನ ನಾವ್ ಹಂಚ್ಕೊಳ್ಳೋಣ. ಸಾಯೋ ತನಕ ದುಡಿದ್ರೂ ಇದ್ರಲ್ಲಿ ಅರ್ಧ ದುಡಿಯೋಲ್ಲ.
– ಬೇಡ ಕಣ್ರೋ ನಾವ್ ತಪ್ ಮಾಡ್ತಾ ಇದೀವಿ. ನಮಗ್ಯಾಕೆ ಕಂಡೋರ ದುಡ್ಡು
– ಸಿಕ್ಕಿರೋ ದುಡ್ನಲ್ಲಿ ಎರಡು ಕಾರ್ ಗ್ಯಾರೇಜ್ ಮಾಡೋಣ
– ಕಾರ್ ಗ್ಯಾರೇಜಾ.. ಬೇಡ ಎರಡು ಬಾರ್ ಓಪನ್ ಮಾಡೋಣ…
ಇದು “ಹಾಫ್ ಬಾಯಿಲ್ಡ್ ಹುಡುಗರ ಮಾತುಕತೆ! ಹೌದು, ನಾಲ್ವರು ಗೆಳೆಯರಿಗೆ ಆಕಸ್ಮಿಕವಾಗಿ ಕಾರೊಂದರಲ್ಲಿ ಲಕ್ಷಾಂತರ ರುಪಾಯಿ ತುಂಬಿದ ಬ್ಯಾಗ್ವೊಂದು ಸಿಕ್ಕಿಬಿಡುತ್ತೆ. ತಮ್ಮ ಕಾರ್ನಲ್ಲಿ ಆ ಹಣದ ಬ್ಯಾಗ್ ಹಿಡಿದು ಹೇಗೆಲ್ಲಾ ಕನಸು ಕಾಣಾ¤ರೆ, ಹೆಂಗೆಲ್ಲಾ ಅಲೆದಾಡ್ತಾರೆ ಅನ್ನೋದೇ ಒನ್ಲೈನ್ ಸ್ಟೋರಿ. ಹಣದ ಹಿಂದೆ ಹೋದವರ ಗತಿ ಏನಾಗುತ್ತೆ ಎಂಬುದನ್ನು ಇಲ್ಲಿ ಅಷ್ಟೇ ಸೊಗಸಾಗಿ ತೋರಿಸುವುದರ ಜೊತೆಗೆ ಅಲ್ಲಲ್ಲಿ ಮಾನವೀಯ ಮೌಲ್ಯಕ್ಕೂ ಜಾಗವಿದೆ. ಮಂದಗತಿಯಲ್ಲೇ ಸಾಗುವ ಮೊದಲರ್ಧ ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಷಯವೇನಿಲ್ಲ.
ದ್ವಿತಿಯಾರ್ಧದಲ್ಲಿ ಕಥೆ ಮೆಲ್ಲನೆ ಬಿಚ್ಚಿಕೊಳ್ಳುತ್ತಲೇ ನೋಡುಗರನ್ನು ತಕ್ಕಮಟ್ಟಿಗೆ ಕೂರಿಸುವ ಪ್ರಯತ್ನ ಮಾಡುತ್ತದೆ. ದ್ವಿತಿಯಾರ್ಧದಲ್ಲಿನ ಹಿಡಿತ ಮೊದಲರ್ಧದಲೂ ಇದ್ದಿದ್ದರೆ, ಎಲ್ರೂ ಹಾಫ್ ಬಾಯಿಲ್ಡ್ ರುಚಿಯನ್ನು ಗುಣಗಾನ ಮಾಡಬಹುದಿತ್ತು. ಆದರೆ, ಆ ಅವಕಾಶ ಇಲ್ಲಿಲ್ಲ. ಕಥೆಗೆ ಪೂರಕವಾಗಿರುವ ಹಾಸ್ಯ ಇಲ್ಲಿಲ್ಲ. ಬದಲಾಗಿ ಹಾಸ್ಯಕ್ಕಾಗಿಯೇ ಒಂದಷ್ಟು ದೃಶ್ಯಗಳನ್ನು ಮಾಡಿಕೊಂಡಂತಿದೆ. ಕೆಲವು ಕಡೆ ಡಬ್ಬಲ್ ಮೀನಿಂಗ್ ಮಾತುಗಳ ಮೂಲಕ ಚಿತ್ರದ ವೇಗ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆಯಾದರೂ, ಅದು ಅಷ್ಟಾಗಿ ರುಚಿಸಿಲ್ಲ.
ಇನ್ನು, ಚಿತ್ರದುದ್ದಕ್ಕೂ ಒಂದಷ್ಟು ತಪ್ಪುಗಳು ಕಾಣುತ್ತಾ ಹೋಗುತ್ತವೆ. ಆದರೂ, ಹೊಸಬರ ಪ್ರಯತ್ನವಾಗಿರುವುದರಿಂದ ಆ ತಪ್ಪನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ, ಹಣ ಅನ್ನೋದು ಹೇಗೆ ಬೇಕಾದರೂ ಆಡಿಸುತ್ತದೆ ಎಂಬ ಅಂಶವನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಮೊದಲರ್ಧದಲ್ಲಿ ಬರುವ ಕೆಲವು ದೃಶ್ಯಗಳು ನೋಡುಗರ ತಾಳ್ಮೆ ಪರೀಕ್ಷಿಸುವ ಸಂದರ್ಭದಲ್ಲೇ “ಅಮ್ಮ ಹೇಳಿದ್ರು ತುಂಬ ಓದು ಅಂತ, ಅಪ್ಪ ಹೇಳಿದ್ರು ಬೇಗ ದುಡಿ ಅಂತ…’ ಎಂಬ ಹಾಡು ಕಾಣಿಸಿಕೊಂಡು ತಕ್ಕಮಟ್ಟಿಗೆ ಸಮಾಧಾನಿಸುತ್ತದೆ. ಇದೊಂದು ಜರ್ನಿ ಕಥೆ ಆಗಿರುವುದರಿಂದ ಅಲ್ಲಲ್ಲಿ ಕಾರು ಜರ್ಕ್ ಹೊಡೆದಂಗೆ, ಕಥೆ, ಚಿತ್ರಕಥೆಯಲ್ಲೂ ಆ ಜರ್ಕ್ ಕಾಣಸಿಗುತ್ತದೆ.
ದ್ವಿತಿಯಾರ್ಧದಲ್ಲಿ ಇಡೀ ಚಿತ್ರದ ಕಲರ್ ಚೇಂಜ್ ಆಗುತ್ತೆ. ಆ ಬದಲಾವಣೆ ಏನು ಎಂಬ ಸಣ್ಣ ಕುತೂಹಲವಿದ್ದರೆ ಎಲ್ರೂ ಹಾಫ್ ಬಾಯಿಲ್ಡ್ ರುಚಿಸಲ್ಲಡ್ಡಿಯಿಲ್ಲ. ಸಿದ್ದ, ರಂಗ, ಮಂಜ ಮತ್ತು ಕೃಷ್ಣ ಈ ನಾಲ್ವರು ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಅಪ್ಪಟ ಗೆಳೆಯರು. ಒಬ್ಬ ಗ್ಯಾರೇಜ್ನಲ್ಲಿ ಕೆಲಸ ಮಾಡಿದರೆ, ಮತ್ತೂಬ್ಬ ಓದಿಕೊಂಡು ಕೆಲಸಕ್ಕೆ ಹುಡುಕಾಟ ನಡೆಸುವಾತ. ಇನ್ನಿಬ್ಬರು ಸಿಕ್ಕ ಕಡೆ ಕುಡಿದು, ತಿಂದು ಕಾಲ ಕಳೆಯುವ ಸೋಮಾರಿಗಳು. ಈ ನಾಲ್ವರದು ಒಂದೊಂದು ಕಥೆ ಮತ್ತು ವ್ಯಥೆ ಇದೆ. ಗ್ಯಾರೇಜ್ನಲ್ಲಿ ಕೆಲಸ ಮಾಡುವ ರಂಗನಿಗೆ ಆ ಮಾಲೀಕನ ಮಗಳನ್ನು ಪ್ರೀತಿ ಮಾಡಿದಂತೆ ಸದಾ ಬೀಳುವ ಕನಸು.
ಆ ಕನಸಲ್ಲೇ ಖುಷಿಪಡುವ ರಂಗನಿಗೆ ಮಾಲೀಕ ಶಿರಸಿಯಿಂದ ಒಂದು ಕಾರನ್ನು ಇಲ್ಲಿಗೆ ತರಬೇಕು ಅಂತ ಕಳುಹಿಸುತ್ತಾನೆ. ರಂಗನ ಜೊತೆ ಮೂವರು ಗೆಳೆಯರು ಸಾಥ್ ಕೊಡುತ್ತಾರೆ. ಆ ಕಾರು ಒಬ್ಬ ಕಾಮಿಡಿ ರೌಡಿಯದ್ದು. ಆ ಕಾರಲ್ಲಿ ಲಕ್ಷಾಂತರ ರುಪಾಯಿ ಇರುವ ವಿಷಯ ಗೊತ್ತಾಗುತ್ತಿದ್ದಂತೆಯೇ, ನಾಲ್ವರು ಗೆಳೆಯರಲ್ಲಿ ಆಸೆ ಹುಟ್ಟುತ್ತೆ. ಅವರವರಲ್ಲೇ ಗೊಂದಲ ಶುರುವಾಗುತ್ತೆ. ಹಣ ಬೇಡ, ಬೇಕು ಹೀಗೆ ಚರ್ಚೆ ನಡೆದು, ಕೊನೆಗೆ ನಾವೇ ಅನುಭವಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಆ ಹಣ ಹಿಡಿದು ಕಾರೊಂದಿಗೆ ಸಾಗುವ ನಾಲ್ವರು ಗೆಳೆಯರು ಎಂಜಾಯ್ ಮಾಡ್ತಾರೆ.
ಅಷ್ಟೊತ್ತಿಗೆ ಒಂದು ಟ್ವಿಸ್ಟು ಬರುತ್ತೆ. ಕೊನೆಗೆ ಆ ಹಣ ಅವರ ಕೈ ಸೇರುತ್ತಾ ಇಲ್ಲವಾ, ಅದರ ಹಿಂದೆ ಏನೆಲ್ಲಾ ಇದೆ ಅನ್ನೋದು ಸಸ್ಪೆನ್ಸ್. ಚಿತ್ರದಲ್ಲಿ ವಿಜೇತ್ ಕೃಷ್ಣ ಸಂಗೀತ ಹೈಲೈಟ್. “ಧೂಳಾರೆ ಪಾರ್ಟಿ ಶಿಷ್ಯ..’ ಹಾಡುಗಳು ಚೆನ್ನಾಗಿದೆ. ಹಿನ್ನೆಲೆ ಸಂಗೀತ ಹೊಸತಾಗಿದೆ. ಕುಶೇಂದರ್ ರೆಡ್ಡಿ ಅವರ ಕ್ಯಾಮೆರಾ ಕೆಲಸ ಅಲ್ಲಲ್ಲಿ ಮಬ್ಟಾದಂತೆ ಭಾಸವಾಗುತ್ತದೆ. ಇನ್ನು, ಹೊಸ ಪ್ರತಿಭೆಗಳಾದ ಸುನೀಲ್ಕುಮಾರ್, ದೀಪಕ್, ಮಂಜುಬದ್ರೀ, ಹಂಪೇಶ್, ಮಾತಂಗಿ ಪ್ರಸನ್ನ, ವಿನ್ಯಾಶೆಟ್ಟಿ ತಮ್ಮ ಪಾತ್ರವನ್ನು ನೀಟ್ ಆಗಿ ನಿರ್ವಹಿಸಿದ್ದಾರೆ. ದೇವದಾಸ್ ಕಾಪಿಕಾಡು ಸ್ವಲ್ಪ ಸಮಯ ಕಾಣಿಸಿಕೊಂಡರೂ ಕಚಗುಳಿ ಇಡುತ್ತಾರೆ. ಎಂದಿನಂತೆ ತಬಲಾನಾಣಿ ಹಾಸ್ಯ ಇಲ್ಲಿ ಮೇಳೈಸಿದೆ.
ಚಿತ್ರ: ನಾವೆಲ್ರೂ ಹಾಫ್ ಬಾಯಿಲ್ಡ್
ನಿರ್ಮಾಣ: ಕೆ.ಅಮೀರ್ ಅಹಮದ್
ನಿರ್ದೇಶನ: ಬಿ.ಶಿವರಾಜ್ ವೆಂಕಟಾಚ್ಚ
ತಾರಾಗಣ: ಸುನೀಲ್ಕುಮಾರ್, ದೀಪಕ್, ಮಂಜುಬದ್ರಿ, ಹಂಪೇಶ್, ಮಾತಂಗಿ ಪ್ರಸನ್ನ, ದೇವದಾಸ್ ಕಾಪಿಕಾಡು, ತಬಲಾನಾಣಿ, ವಿನ್ಯಾಶೆಟ್ಟಿ ಇತರರು.
* ವಿಭ