ಸೇವಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ದಿನಸಿ ವಿತರಿಸಿದ ನಟ ಶ್ರೀಮುರಳಿ ಫ್ಯಾನ್ಸ್
ಅವರು ಆಶ್ರಮದ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಸಹಾಯ ಮಾಡಿದ್ದಾರೆ.
Team Udayavani, Apr 10, 2020, 3:08 PM IST
ಬೆಂಗಳೂರು: ಕೋವಿಡ್ ಎಂಬ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿದ್ದು ಗೊತ್ತೇ ಇದೆ. ಇದರಿಂದ ಸಾಕಷ್ಟು ಜನರು ತತ್ತರಿಸಿದ್ದಾರೆ. ಅದರಲ್ಲೂ ದಿನಗೂಲಿ ನೌಕರರ ಸಮಸ್ಯೆ ಹೇಳತೀರದು. ಅಂತಹವರನ್ನು ಗುರುತಿಸುತ್ತಿರುವ ಚಿತ್ರರಂಗದ ಅನೇಕ ಸಂಘ, ಸಂಸ್ಥೆಗಳು, ನಟ, ನಟಿಯರು, ಅವರ ಅಭಿಮಾನಿಗಳು ಹಾಗೂ ನಿರ್ಮಾಪಕರುಗಳು ಆಹಾರ ಸಾಮಗ್ರಿ ವಿತರಿಸುವ ಮೂಲಕ ಅವರ ಸಹಾಯಕ್ಕೆ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ನಟ ಶ್ರೀಮುರಳಿ ಅವರ ಅಭಿಮಾನಿ ಬಳಗ ಕೂಡ ಸಹಾಯಕ್ಕೆ ಮುಂದಾಗಿದ್ದು, ಅವರು ಆಶ್ರಮದ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಸಹಾಯ ಮಾಡಿದ್ದಾರೆ.
ಹೌದು, ತುಮಕೂರು ತಾಲೂಕಿನ ಕೊಂಡನಾಯಕನಹಳ್ಳಿಯಲ್ಲಿರುವ ಶಿವ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು, ಅಲ್ಲಿರುವ ಶಿವಾಶ್ರಮ ಹಿರಿಯ ಪ್ರಾಥಮಿಕ ವಸತಿ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಶ್ರೀಮುರಳಿ ಅಭಿಮಾನಿ ಬಳಗ ಅಕ್ಕಿ, ಬೇಳೆ, ಎಣ್ಣೆ, ಸೋಪು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಿದೆ.
ಅದೇ ಊರಿನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮಕ್ಕೂ ಭೇಟಿ ನೀಡಿರುವ ಶ್ರೀಮುರಳಿ ಅಭಿಮಾನಿ ಬಳಗದವರು ಅಲ್ಲೂ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಶ್ರೀಮುರಳಿ ಅವರ ಅಭಿಮಾನಿಗಳ ಈ ಮಾನವೀಯತೆ ಕೆಲಸಕ್ಕೆ ಸೇವಾಶ್ರಮದ ಮಕ್ಕಳು ಹಾಗು ಸಾಯಿಬಾಬಾ ವೃದ್ಧಾಶ್ರಮದ ಹಿರಿಯರು ಧನ್ಯವಾದ ಅರ್ಪಿಸಿದ್ದಾರೆ.