ಕೋವಿಡ್ ಸಂಕಷ್ಟದಲ್ಲಿ ಸಿಲುಕಿದವರಿಗೆ ಆಸರೆ
ಹಸಿದವರಿಗೆ ಆಸರೆ ತಂಡದಿಂದ ಸಾಮಾಜಿಕ ಸೇವೆ! ಆಹಾರ ಪೊಟ್ಟಣ ವಿತರಣೆ-ಆಸ್ಪತ್ರೆಗೆ ತೆರಳಲು ವಾಹನದ ವ್ಯವಸ್ಥೆ
Team Udayavani, May 12, 2021, 11:41 AM IST
ಹುನಗುಂದ: ಕೊರೊನಾ ಸೋಂಕು ಹತ್ತಿಕ್ಕಲು ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿದ ಹಿನ್ನೆಲೆಯಲ್ಲಿ ವ್ಯಾಪಾರ, ವಾಣಿಜ್ಯ, ವಹಿವಾಟುಗಳ ಜತೆ ಸಣ್ಣ ಪುಟ್ಟ ಕೆಲಸಗಳು ನಿಂತು ಹೋಗಿ ಜನರ ಕಂಗಾಲಾಗಿದ್ದಾರೆ. ಇಂತಹವರಿಗೆ ಆಸರೆಯಾಗಲು ಹಸಿದವರಿಗೆ ಆಸರೆ ಎನ್ನುವ ನೂತನ ತಂಡ ಕಟ್ಟಿಕೊಂಡ ಪಟ್ಟಣದ ಯುವಕರ ತಂಡವು ಭಿಕ್ಷುಕರು, ವೃದ್ಧರು, ಅನಾಥರು ಹಾಗೂ ರೋಗಿಗಳಿಗೆ ಮತ್ತು ಹಸಿವಿನಿಂದ ಬಳಲುತ್ತಿರುವ ಜನರಿಗೆ ಅನ್ನ ನೀಡುವ ಸಮಾಜ ಸೇವಾ ಕಾರ್ಯ ಆರಂಭಿಸಿದೆ.
ಕೊರೊನಾ ಕರ್ಫ್ಯೂದಿಂದ ಕೆಲಸ ಕಳೆದುಕೊಂಡು ಬದುಕು ನಡೆಸಲು ಹೆಣಗಾಡುತ್ತಿರುವ ಅದೆಷ್ಟೋ ಕುಟುಂಬಗಳಿಗೆ ಈ ಯುವಕರ ತಂಡ ಅಂತಹ ಕುಟುಂಬಗಳನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಆಹಾರದ ಪೊಟ್ಟಣ ನೀಡುವ ಮೂಲಕ ನೊಂದವರ, ಅನಾಥರ ಕುಟುಂಬಗಳ ಪಾಲಿಗೆ ಕಾಮಧೇನು ಆಗಿದ್ದಾರೆ. ತಂಡದಲ್ಲಿ 6ರಿಂದ 8 ಜನ ಯುವಕರಿದ್ದಾರೆ. ತಮ್ಮ ಸ್ವಂತ ಹಣವನ್ನು ಕ್ರೋಢಿಕರಿಸಿ ನಿತ್ಯ ಹಸಿವಿನಿಂದ ಬಳಲುವ ಜನರ ಹಸಿವು ನೀಗಿಸುವ ಕಾರ್ಯ ಮಾಡಬೇಕು ಎನ್ನುವ ಉದ್ದೇಶದಿಂದ ನಿತ್ಯ ಮಧ್ಯಾಹ್ನ 12ರಿಂದ 3ರವರೆಗೆ ಗುಣಮಟ್ಟದ ಆಹಾರ ತಯಾರಿಸಿ ಹಸಿವು ಎಂದವರಿಗೆ ಆಹಾರದ ಪೊಟ್ಟಣ ನೀಡಿ ಸಂತೈಸುವ ಕಾರ್ಯವನ್ನು ಮಾಡುತ್ತಿದೆ. ಆಹಾರ ವಿತರಿಸುವುದರ ಜತೆಗೆ ಆನಾರೋಗ್ಯದಿಂದ ಬಳಲಿ ಆಸ್ಪತ್ರೆಗೆ ಹೋಗಲು ವಾಹನದ ವ್ಯವಸ್ಥೆಯಿಲ್ಲದೇ ಪರದಾಡುತ್ತಿರುವ ಜನರಿಗೆ ಉಚಿತವಾಗಿ ಆಸ್ಪತ್ರೆಗೆ ಕರೆದ್ಯೊಯಲು ವಾಹನ ಸೇವೆ ಒದಗಿಸುವುದು ಮತ್ತು ಆನಾರೋಗ್ಯದಿಂದ ಬಳಲುವ ರೋಗಿಗಳಿಗೆ ಕಾಯಿಲೆಯ ಕುರಿತು ತಿಳಿ ಹೇಳುವ ಮೂಲಕ ಅವರಿಗೆ ರೋಗದ ಭಯ ಹೊಡೆದೊಡಿಸಿ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದೆ.
ಈ ಯುವಕರಿಗೆ ಪಡೆಗೆ ಸಹಾಯ ಸಹಕಾರದ ಅಗತ್ಯ ಮುಖ್ಯವಾಗಿದೆ. ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿವಿನಿಂದ ಯಾರಾದರು ಬಳಲುತ್ತಿದ್ದರೆ ಇಲ್ಲವೇ ಯಾರಿಗಾದರು ಆಹಾರ ಅವಶ್ಯಕತೆಯಿದ್ದರೆ ಅನಿಲ ಕುಲಕರ್ಣಿ, ಶ್ರೀಧರ ಪತ್ತಾರ, ಸುಮಂತ ಒಬಳೆಪ್ಪನವರ, ರಾಘು ಮುದಗಲ್ಲ, ಶಮ್ಮುಶುದ್ದಿನ ಖತೀಬ, ಸದಾಶಿವ ಸಂಕಿನಮಠ, ಇಮಿ¤ಯಾಜ್ ಖತೀಬ (ಮೊಬೈಲ್: 7026274666 ಅಥವಾ 9902385117 ) ಅವರನ್ನು ಸಂಪರ್ಕಿಸಬಹುದು.