ಎಲ್ಲರೂ ಕಾನೂನು ಗೌರವಿಸಿ: ವಡಿಗೇರಿ
ಮಹಿಳಾ-ಮಕ್ಕಳ ದೌರ್ಜನ್ಯ ತಡೆಗೆ ಮುಂದಾಗಿ
Team Udayavani, Apr 1, 2022, 12:23 PM IST
ಮಹಾಲಿಂಗಪುರ: ಸಮಾಜದಲ್ಲಿರುವ ಪ್ರತಿಯೊಬ್ಬರು ಕಾನೂನಿಗೆ ತಲೆಬಾಗಬೇಕು, ಗೌರವಿಸಬೇಕು. ಸತ್ಯ ಮತ್ತು ಪ್ರಾಮಾಣಿಕರಾಗಿದ್ದರು ಕಾನೂನು ಖಂಡಿತವಾಗಿಯೂ ನಿಮ್ಮನ್ನು ರಕ್ಷಿಸುತ್ತದೆ ಎಂದು ಬನಹಟ್ಟಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ಡಿ. ವಡಿಗೇರಿ ಹೇಳಿದರು.
ಪಟ್ಟಣದ ಪೊಲೀಸ್ಠಾಣೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ಜರುಗಿದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ವಿಷಯದ ಕುರಿತು ತಾಲೂಕು ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಅಧಿಕವಾಗುತ್ತಿರುವುದು ವಿಷಾದನೀಯ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಾನೂನುಗಳಿರುವುದರಿಂದ ಅವುಗಳ ಮೂಲಕ ರಕ್ಷಣೆ ಪಡೆಯಬೇಕು. ಸಮಸ್ಯೆಗಳಿದ್ದರೆ ತಾಲೂಕು ಕಾನೂನು ಸೇವಾ ಸಮಿತಿ ಸಂಪರ್ಕಿಸಿ. 2 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಬಡವರಾಗಿದ್ದರೇ ನುರಿತ ವಕೀಲರನ್ನು ನೇಮಕಗೊಳಿಸಿ, ಉಚಿತವಾಗಿ ಕಾನೂನು ಸೇವೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಅನಾವಶ್ಯಕವಾಗಿ ಮಕ್ಕಳ ಭವಿಷ್ಯ ಹಾಳು ಮಾಡದೇ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ಉತ್ತಮ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿ. ಸಹೋದರ- ಸಹೋದರಿಯರ ಭಾವನೆಯೊಂದಿಗೆ ನಮ್ಮ ದೇಶದ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸೋಣ ಎಂದರು.
ಇನ್ನೊರ್ವ ದಿವಾಣಿ ನ್ಯಾಯಾಧಿಧೀಶರಾದ ಸುಷ್ಮಾ ಟಿ.ಸಿ ಅವರು ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತಾಗಿರುವ ಕಾನೂನುಗಳ ಕುರಿತು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬನಹಟ್ಟಿ ಸಿಪಿಆಯ್ ಜೆ.ಕರುಣೇಶಗೌಡ ಮಾತನಾಡಿದರು. ನ್ಯಾಯವಾದಿ ಐ.ಸಿ.ಭೂತಿ ಅವರು ಮಹಿಳೆ ಮತ್ತು ಮಕ್ಕಳ ಮಾರಾಟ ತಡೆ ಕಾಯ್ದೆ, ಜಮಖಂಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧಾ ಬಿ.ಹಾದಿಮನಿ ಅವರು ಲೈಂಗಿಕ ದೌರ್ಜನ್ಯದಿಂದ ಮಹಿಳೆ ಮತ್ತು ಮಕ್ಕಳ ರಕ್ಷಣೆ, ಮಹಾಲಿಂಗಪುರ ಠಾಣಾಧಿಕಾರಿ ವಿಜಯಕುಮಾರ ಕಾಂಬಳೆ ಅವರು ಮಹಿಳೆ ಮತ್ತು ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಕುರಿತು ಮಾತನಾಡಿದರು.
ತೇರದಾಳ ಉಪತಹಶೀಲ್ದಾರ್ ಎಸ್ .ಬಿ.ಮಾಯನ್ನವರ, ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಜಿ.ಕುಲಕರ್ಣಿ, ಕಾರ್ಯದರ್ಶಿ ಮಹಾಂತೇಶ ಸಿ.ಮಸಳಿ, ವಕೀಲರ ಸಂಘದ ಉಪಾಧ್ಯಕ್ಷ ಆರ್.ಎ.ಗೂಗಾಡ, ವಕೀಲರಾದ ಎಲ್.ಎ.ಬನಾಜ, ಎಸ್.ಎ.ಮಡಿವಾಳರ, ಮಂಜುನಾಥ ಕೌಜಲಗಿ, ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಸಂಜು ಹಿಪ್ಪರಗಿ, ಬನಹಟ್ಟಿ ಪಿಎಸ್ಐ ಸುರೇಶ ಮಂಟೂರ, ತೇರದಾಳ ಪಿಎಸ್ಐ ಆರ್.ವೈ.ಬೀಳಗಿ ಇದ್ದರು.