ಖಾಸಗಿ ಬಸ್-ಕ್ರೂಸರ್ ಡಿಕ್ಕಿ: ನಾಲ್ವರ ಸಾವು
Team Udayavani, Aug 14, 2017, 10:19 AM IST
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕು ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದಾಪುರ ಗ್ರಾಮದ ಬಳಿ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, 7ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಸೋಮವಾರ ನಸುಕಿನ ಜಾವ ಸಂಭವಿಸಿದೆ.
ಮೃತಪಟ್ಟವರೆಲ್ಲರೂ ಬಾದಾಮಿ ತಾಲೂಕು ಕೆರೂರ ಪಟ್ಟಣದವರಾಗಿದ್ದು, ಅವರು ಕ್ರೂಸರ್ ವಾಹನದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಿಳೇಗಾವಿ ಗ್ರಾಮದ ಬಸವಣ್ಣ ದೇವಸ್ಥಾನಕ್ಕೆ ಹೊರಟಿದ್ದರು. ಮೃತಪಟ್ಟವರಲ್ಲಿ ಮೂವರ ಹೆಸರು ಸದ್ಯಕ್ಕೆ ತಿಳಿದು ಬಂದಿದ್ದು, ಕೆರೂರ ಪಟ್ಟಣದ ನೇಕಾರರ ಕುಟುಂಬದ ಲಕ್ಷ್ಮಿಬಾಯಿ ಬಸವರಾಜ ಗಿಡ್ಡನಂದಿ (45), ಮಂಜವ್ವ ರಮೇಶ ಸಂಪಡ್ಡಿ (32), ಭಾರತಿ ಗಿಡ್ಡನಂದಿ ಎಂದು ಗುರುತಿಸಲಾಗಿದೆ. ಇದರಲ್ಲಿ 1 ಮಗು ಸೇರಿ 4 ಜನ ಮಹಿಳೆಯರು ಸೇರಿದ್ದಾರೆ.
ಜಮಖಂಡಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸ್ಆರ್ ಎಸ್ ಖಾಸಗಿ ಬಸ್, ಮುಧೋಳ ತಾಲೂಕು ಮುದ್ದಾಪುರ ಕ್ರಾಸ್ ಬಳಿ ಕ್ರೂಸರ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 7ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮುಧೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.