BSYಗೆ ಸೆಡ್ಡು; ಈಶ್ವರಪ್ಪ ಬ್ರಿಗೇಡ್ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ?
Team Udayavani, Jan 26, 2017, 1:23 PM IST
ಬಾಗಲಕೋಟೆ:ರಾಯಣ್ಣ ಬಲಿದಾನ ದಿವಸ್ ಅಂಗವಾಗಿ ಬಿಜೆಪಿ ನಾಯಕ, ಬ್ರಿಗೇಡ್ ರೂವಾರಿ ಕೆಎಸ್ ಈಶ್ವರಪ್ಪ ಬಾಗಲಕೋಟೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಜನರು ನಿರೀಕ್ಷಿತ ಮಟ್ಟದಲ್ಲಿ ಭಾಗವಹಿಸದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕೂಡಲಸಂಗಮದಲ್ಲಿ ಇಂದಿನಿಂದ ಬ್ರಿಗೇಡ್ ಸಮಾವೇಶ ಆರಂಭವಾಗಿದ್ದು, ಸುಮಾರು 50 ಸಾವಿರ ಜನರು ಭಾಗವಹಿಸುತ್ತಾರೆಂದು ನಿರೀಕ್ಷಿಸಿ ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ ಬ್ರಿಗೇಡ್ ಸಮಾವೇಶ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿತ್ತು. ಸಮಯ 12.30 ಆದರೂ ಜನರು ಬಾರದೇ ಸಮಾವೇಶದಲ್ಲಿ ಖಾಲಿ, ಖಾಲಿ ಕುರ್ಚಿಗಳೇ ಕಂಡುಬಂದಿದ್ದವು.
ಸಮಾವೇಶದಲ್ಲಿ ಕೆಎಸ್ ಈಶ್ವರಪ್ಪ, ಕಾಗಿನೆಲೆಯ ನಿರಂಜನಾಪುರಿ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬ್ರಿಗೇಡ್ ಸಮಾವೇಶದಲ್ಲಿ 25 ಸಾವಿರ ಜನರಷ್ಟೇ ಭಾಗವಹಿಸಿದ್ದಾರೆಂದು ಮಾಧ್ಯಮದ ವರದಿ ವಿವರಿಸಿದೆ. ಸಮಾವೇಶಕ್ಕೂ ಮುನ್ನ ಬೃಹತ್ ಮೆರವಣಿಗೆ ನಡೆಯಿತು. ಆನೆ ಮೇಲೆ ಕನಕದಾಸರ ಭಾವಚಿತ್ರ ಇಟ್ಟು ಮೆರವಣಿಗೆಯಲ್ಲಿ ಸಮಾವೇಶದ ವೇದಿಕೆಯತ್ತ ತರಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬಹಿರಂಗವಾಗಿಯೇ ಸೆಡ್ಡು ಹೊಡೆದಿರುವ ಕೆಎಸ್ ಈಶ್ವರಪ್ಪ ತೀವ್ರ ವಿರೋಧದ ನಡುವೆಯೇ ರಾಯಣ್ಣ ಬ್ರಿಗೇಡ್ ಗೆ ಚಾಲನೆ ನೀಡಿದ್ದರು. ಇದೀಗ ಬ್ರಿಗೇಡ್ ಜಟಾಪಟಿ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಜನವರಿ 27ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ. ಶಾ ಮಧ್ಯಸ್ಥಿಕೆಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ನಡುವಿನ ಜಂಗೀಕುಸ್ತಿಗೆ ಪರಿಹಾರ ದೊರಕುತ್ತೋ ಅಥವಾ ಭಿನ್ನಮತ ಸ್ಫೋಟಗೊಳ್ಳೊತ್ತೊ ಎಂಬುದನ್ನು ಕಾದು ನೋಡಬೇಕಾಗಿದೆ.