ಬಾಗಲಕೋಟೆ ಲಾಕ್ಡೌನ್ ಮಾಡಲು ಆಗ್ರಹಿಸಿ ಮನವಿ
Team Udayavani, Jul 17, 2020, 1:49 PM IST
ಮಹಾಲಿಂಗಪುರ: ತಂಬಾಕು, ಗುಟಕಾ, ಮಾವಾ, ಮದ್ಯಪಾನ ನಿಷೇಧ ಹಾಗೂ ಕೋವಿಡ್ ಹೆಚ್ಚಳವಾಗುತ್ತಿರುವ ಕಾರಣ ಬಾಗಲಕೋಟೆ ಜಿಲ್ಲೆಯನ್ನು ಲಾಕ್ಡೌನ್ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಅಸ್ಲಂ ಕೌಜಲಗಿ ನೇತೃತ್ವದಲ್ಲಿ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ಕಮತಗಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕಾ ಅಧ್ಯಕ್ಷ ಅಸ್ಲಂ ಕೌಜಲಗಿ ಮಾತನಾಡಿ, ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಇಲ್ಲಿಯ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸುರಕ್ಷಿತ ಕ್ರಮವಾಗಿ ಕೆಲ ಜಿಲ್ಲೆಗಳು ಲಾಕ್ ಡೌನ್ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯನ್ನು ಕೂಡಾ ಲಾಕ್ಡೌನ್ ಮಾಡಬೇಕು. ಸುರಿಯುತ್ತಿರುವ ಮಳೆಯಿಂದಾಗಿ ಕೊರೊನಾ ಹೆಚ್ಚುವ ಸಂಭವವಿದೆ ಎಂದರು.
ತಂಬಾಕು, ಮಾವಾ, ಗುಟಕಾ, ಮದ್ಯಪಾನ ಸೇವನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಉಗಿಯುವುದರಿಂದ ಕೊರೊನಾದಂತ ಸಾಂಕ್ರಾಮಿಕ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಹರಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ತಂಬಾಕು, ಮಾವಾ, ಗುಟಕಾ, ಮದ್ಯಪಾನ ಮಾರಾಟ ಸಂಪೂರ್ಣ ನಿಷೇಧ ಮಾಡಬೇಕು ಎಂದರು.
ಕನಸೇ ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಪ್ರಶಾಂತ ಹಟ್ಟಿ, ಮಹಾಲಿಂಗ ಲಾತೂರ, ಶಾನೂರ ಜಂಬಗಿ, ಸೈಯದ್ ಪಕಾಲಿ, ಆನಂದ ಹುಣಶ್ಯಾಳ, ವಸೀಂ ಅಜರೇಕರ, ಇಸ್ಮಾಯಿಲ್ ನದಾಫ, ರಜಾಕ ನದಾಫ್, ನಿಜಗುಣ ಮುರಗೋಡ ಇದ್ದರು.