ಸಿದ್ದರಾಮಯ್ಯ ಕ್ಷೇತ್ರದ ಅನುದಾನ ಲ್ಯಾಪ್ಸ್!
•ಅಧಿಕಾರಿಯ ಬೇಜವಾಬ್ದಾರಿ ಆರೋಪ•ಓರ್ವ ಅಧಿಕಾರಿಗೆ ನಾಲ್ಕು ಇಲಾಖೆ ಜವಾಬ್ದಾರಿ
Team Udayavani, Jul 20, 2019, 10:42 AM IST
ಬಾಗಲಕೋಟೆ: ಶಾದಿ ಮಹಲ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿರುವ ಕುರಿತು ಸಿದ್ದರಾಮಯ್ಯ ಮತ್ತು ಸಚಿವ ಜಮೀರಅಹ್ಮದ ಖಾನ್ ಅವರು ಬಾದಾಮಿಯಲ್ಲಿ ಅಲ್ಪ ಸಂಖ್ಯಾತರ ಪ್ರಮುಖರಿಗೆ ಆದೇಶಪತ್ರ ವಿತರಿಸಿದ್ದರು. (ಸಂಗ್ರಹ ಚಿತ್ರ)
ಬಾಗಲಕೋಟೆ: ಅಧಿಕಾರಿಯೊಬ್ಬರ ಬೇಜವಾಬ್ದಾರಿ ಹಾಗೂ ಕಾರ್ಯಭಾರ ಒತ್ತಡದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಕೋಟಿ-ಕೋಟಿ ಅನುದಾನ ಲ್ಯಾಪ್ಸ್ ಆಗಿದ್ದು, ತಡವಾಗಿ ಬಹಿರಂಗಗೊಂಡಿದೆ. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ ಅವರು, ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಶಾಸಕರಾದ ಬಳಿಕ 13 ತಿಂಗಳಲ್ಲಿ ಸುಮಾರು 921 ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ. ಈ ಅನುದಾನ ಸರಿಯಾಗಿ ಬಳಕೆ ಮಾಡುವುದು ಒಂದೆಡೆಯಾದರೆ, ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸುವ ಕೆಲಸವೂ ಸ್ವತಃ ಸಿದ್ದರಾಮಯ್ಯ ಅವರೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದೆ.
ಬಾದಾಮಿ ಕ್ಷೇತ್ರದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 2.46 ಕೋಟಿ ವಿಶೇಷ ಅನುದಾನ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ತಂದಿದ್ದರು. ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡದಲ್ಲಿ ಶಾದಿ ಮಹಲ್ ನಿರ್ಮಾಣ, ಅಲ್ಪ ಸಂಖ್ಯಾತರ ಸಮುದಾಯ ಭವನ ಹೀಗೆ ವಿವಿಧ ಕಾರ್ಯಗಳಿಗೆ ಈ ಯೋಜನೆ ಮಂಜೂರು ಮಾಡಿಸುವ ಜತೆಗೆ, ಸ್ವತಃ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ ಅಹ್ಮದ ಖಾನ್ ಅವರನ್ನೇ ಬಾದಾಮಿಗೆ ಕರೆಸಿ, ಈ ಯೋಜನೆಗಳ ಅನುದಾನ ಘೋಷಣೆ ಮಾಡಿಸಿ, ಬಿಡುಗಡೆಯೂ ಮಾಡಿಸಿದ್ದರು. ಆದರೆ, ಕಳೆದ ಮೇ ನಲ್ಲಿ ನಡೆದ ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ, 2.46 ಕೋಟಿ ಅನುದಾನ ಬಳಕೆ ಮಾಡದೇ, ಸರ್ಕಾರಕ್ಕೆ ಹೋಗುವಂತೆ ಮಾಡಿದ್ದು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಾಧನೆ ಎಂದು ಕೆಲವರು ಟೀಕಿಸಿದ್ದಾರೆ.
ಒಬ್ಬ ಅಧಿಕಾರಿಗೆ ನಾಲ್ಕು ಹುದ್ದೆ: ಈ ಅನುದಾನ ಲ್ಯಾಪ್ಸ್ ಆಗಲು ಪ್ರಮುಖ ಕಾರಣ, ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಯ ನಿಷ್ಕಾಳಜಿ ಎಂಬ ಆರೋಪ ಬಲವಾಗಿ ಕೇಳಿ ಬಂದರೆ, ಇನ್ನೊಂದೆಡೆ ಅವರಿಗಿರುವ ಇಲಾಖೆಗಳ ಹೆಚ್ಚುವರಿ ಕಾರ್ಯಭಾರ ಎಂದು ಹೇಳಲಾಗಿದೆ. ಒಬ್ಬ ಅಧಿಕಾರಿಗೆ ಸಾಮಾನ್ಯವಾಗಿ ಒಂದು ಅಥವಾ ಎರಡು ಇಲಾಖೆಗಳ ಪ್ರಭಾರ ಇರುತ್ತದೆ. ಆದರೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಿರುವ ಎಂ.ಎನ್. ಮೇಲಿನಮನಿ ಅವರಿಗೆ ಬರೋಬ್ಬರಿ ನಾಲ್ಕು ಇಲಾಖೆಗಳ ಪ್ರಭಾರ ನೀಡಲಾಗಿದೆ. ಹೀಗಾಗಿ ಕೆಲಸದ ಒತ್ತಡ ಹೆಚ್ಚಾಗಿ, ಅನುದಾನ ಬಳಕೆಯಲ್ಲಿ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹೀಗೆ ಒಟ್ಟು ನಾಲ್ಕು ಹುದ್ದೆಗಳಿಗೆ ಮೇಲಿನಮನಿ ಅವರೇ ಮುಖ್ಯಸ್ಥರಾಗಿದ್ದಾರೆ. ಜಿಲ್ಲೆಯ ನಾಲ್ಕು ಇಲಾಖೆಗಳ ಜತೆಗೆ ಗದಗ ಜಿಲ್ಲೆಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಭಾರ ಹುದ್ದೆಯೂ ಅವರಿಗೇ ಕೊಡಲಾಗಿತ್ತು. ಕಳೆದ ವಾರವಷ್ಟೇ ಗದಗ ಜಿಲ್ಲೆಯ ಪ್ರಭಾರವನ್ನು ಹಿಂಪಡೆಯಲಾಗಿದೆ.
ಯಾವ ಅಧಿಕಾರಿಗೂ ಇಷ್ಟು ಪ್ರಭಾರವಿಲ್ಲ: ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಬಿಟ್ಟರೆ ಯಾವುದೇ ಇಲಾಖೆ, ಯಾವ ಅಧಿಕಾರಿಗೂ ಇಲ್ಲದಷ್ಟು ಇಲಾಖೆಗಳ ಪ್ರಭಾರ ಹಾಗೂ ಜವಾಬ್ದಾರಿ ಮೇಲಿನಮನಿ ಅವರಿಗೆ ಕೊಡಲಾಗಿದೆ. ಇದಕ್ಕೆ ಕೆಲ ಕಾರಣಗಳಿವೆ ಎಂದು ಹೇಳುವವರೂ ಇದ್ದಾರೆ. 1 ವರ್ಷದಿಂದ ಇವರೇ ಕೆಲ ಇಲಾಖೆಗಳ ಜವಾಬ್ದಾರಿ ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ