ಆಮೆಗತಿಯಲ್ಲಿ “ಹೃದಯ’ ಕಾಮಗಾರಿ
Team Udayavani, Dec 9, 2019, 12:57 PM IST
ಬಾದಾಮಿ: ಚಾಲುಕ್ಯರ ರಾಜಧಾನಿ ಐತಿಹಾಸಿಕ ಬಾದಾಮಿ ಹಾಗೂ ಸುತ್ತಲಿನ ಪರಿಸರದ ಅಭಿವೃದ್ಧಿಗೆ ಕೇಂದ್ರ ಸರಕಾರದ ಪುರಸ್ಕೃತ ಹೃದಯ ಯೋಜನೆಯಡಿ 22.26 ಕೋಟಿ ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ.
ಹೃದಯ ಯೋಜನೆ 2018ರಲ್ಲಿ ಕಾಮಗಾರಿ ಆರಂಭವಾಗಿದೆ. ವರ್ಷವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೃದಯ ಯೋಜನೆಯಡಿ ಪ್ರವಾಸಿ ತಾಣಗಳ ರಸ್ತೆಯಲ್ಲಿ ಮತ್ತು ಸ್ಮಾರಕಗಳ ಸಮೀಪ 1.39 ಕೋಟಿ ವೆಚ್ಚದಲ್ಲಿ 193 ಸೂಚನಾಫಲಕಗಳ ಅಳವಡಿಸಲಾಗುತ್ತಿದೆ. ಪುಲಿಕೇಶಿ ಮತ್ತು ಬಸವೇಶ್ವರ ವೃತ್ತಗಳ ಅಭಿವೃದ್ಧಿಗೆ 41.91 ಲಕ್ಷ, ಆರು ಪಾರಂಪರಿಕ ಪ್ರವೇಶ ದ್ವಾರ (ಕಮಾನು) ಕ್ಕೆ ರೂ.3.38 ಕೋಟಿ, ಕಮಾನುಗಳ ಸಿಮೆಂಟ್ ಕಾಮಗಾರಿ ಮತ್ತು ಹೈಟೆಕ್ ಶೌಚಾಲಯಕ್ಕೆ 1.33 ಕೋಟಿ ರೂ. ವ್ಯಯಿಸಲಾಗುತ್ತಿದೆ. ದೆಹಲಿಯ ಸೃಷ್ಟಿ ಮತ್ತು ಕುನಾಲ್ ಸಂಸ್ಥೆ ಗುತ್ತಿಗೆ ಪಡೆದಿದೆ.
ಕಮಾನು ಮತ್ತು ಶೌಚಾಲಯ ಕಾಮಗಾರಿ ಹಾಗೂ ಎರಡು ವೃತ್ತಗಳ ಕಾಮಗಾರಿ ನಿಗದಿಯಂತೆ ಕಳೆದ ಡಿಸೆಂಬರ್–ಜನವರಿಗೆ ಮುಗಿಯಬೇಕಿತ್ತು. ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದುವರೆಗೆ 80 ಸೂಚನಾ ಫಲಕಗಳ ಹಾಕಿದ್ದು, ಅವುಗಳ ಮೇಲೆ ಮಾಹಿತಿ ಬರೆಯುವ ಮುನ್ನವೇ ಅವು ನೆಲಕಚ್ಚಿವೆ. ಕುಟಕನಕೇರಿ ವೃತ್ತದ ರಸ್ತೆಯ ಬದಿಗೆ ಫಲಕದ ಮೇಲಿರುವ ಚಾಲುಕ್ಯರ ಲಾಂಛನ ರಸ್ತೆಯ ಬದಿಯಲ್ಲಿ ಬಿದ್ದಿದೆ. ಪ್ರವೇಶದ್ವಾರದ ಕಮಾನಿನಲ್ಲಿ ಎಡಕ್ಕೆ ಇರುವ ವರಾಹ ಬಲಕ್ಕೆ ಬಂದಿದೆ. ಎಲ್ಲ ಸ್ತಂಭವನ್ನು ಹಾಗೆಯೇ ಕೆತ್ತಲಾಗಿದೆ. ಲಾಂಛನವನ್ನು ಸರಿಯಾಗಿ ರೂಪಿಸಿಲ್ಲ. ಬೇಕಾಬಿಟ್ಟಿಯಾಗಿ ಲಾಂಛನ ಕೆತ್ತನೆ ಮಾಡಲಾಗಿದೆ. ಕಳಪೆ ಕಾಮಗಾರಿ ಹಾಗೂ ವಿಳಂಬ ಧೋರಣೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಹಿರೇಹಾಳ, ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರವೇಶ ದ್ವಾರದ ಕಮಾನು ಮತ್ತು ಚಾಲುಕ್ಯರ ಸ್ಮಾರಕಗಳ ಮೂರ್ತಿ ಶಿಲ್ಪಗಳ ಬಗ್ಗೆ ಸ್ಥಳೀಯ ಕಲಾವಿದರನ್ನು ಮತ್ತು ಇತಿಹಾಸ ಸಂಶೋಧಕರ ಸಲಹೆ ಪಡೆದು ಡಿಪಿಆರ್ ಮಾಡಬೇಕಿತ್ತು. ಕಲಾವಿದರನ್ನು ದೂರವಿಟ್ಟು ಚಾಲುಕ್ಯರ ಸ್ಮಾರಕಗಳ ಬಗ್ಗೆ ಮಾಹಿತಿ ಇಲ್ಲದವರಿಂದ ಮಾಡಿಸಲಾಗಿದೆ ಎನ್ನುತ್ತಾರೆ.
-ಶಶಿಧರ ವಸ್ತ್ರದ