ಪ್ರತಿಷ್ಠೆ ರಾಜಕೀಯಕ್ಕೆ ಕಾರಣವಾಯ್ತಾ ಕಬ್ಬು ಹೋರಾಟ
ಸಚಿವ ನಿರಾಣಿ ಹುಡುತ್ತಿರುವ ವ್ಯಕ್ತಿ ಯಾರು?; ರಾಜಕೀಯದವರಿಗೆ ಬಹಿರಂಗ ಸತ್ಯವಾದರೂ-ಮುಗ್ಧ ರೈತರಿಗೆ ಗೊತ್ತಿಲ್ಲ
Team Udayavani, Dec 6, 2022, 8:12 AM IST
ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ 2ನೇ ಸ್ಥಾನದಲ್ಲಿರುವ ಬಾಗಲಕೋಟೆಯಲ್ಲಿ, ಕಬ್ಬು ರಾಜಕೀಯವೂ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತದೆ ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ.
ಹೌದು, ಜಿಲ್ಲೆಯ ರಾಜಕೀಯ ನಾಯಕರ ಪ್ರತಿಷ್ಠೆಗೆ, ಈ ಕಬ್ಬು ರಾಜಕೀಯ ಕೂಡ ಸಾಕಷ್ಟು ಪ್ರತಿಷ್ಠೆಯಾಗಿರುತ್ತದೆ. ಇದು ಕಳೆದ 2006ರಿಂದ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಈ ರಾಜಕೀಯದ ವಾಸನೆಯೂ ಗೊತ್ತಿಲ್ಲದ ಮುಗ್ಧ ರೈತರು ಮಾತ್ರ, ಒಂದಷ್ಟು ಸಂಕಷ್ಟ-ಸಮಸ್ಯೆ-ಹಾನಿ ಅನುಭವಿಸುತ್ತಲೇ ಇರುತ್ತಾರೆ. ಇದೀಗ ಕಳೆದ ವಾರದ ಹಿಂದೆ ಕೊನೆಗೊಂಡ ಕಬ್ಬು ಹೋರಾಟ, ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರತಿಷ್ಠೆಯ ರಾಜಕೀಯಕ್ಕೆ ಕಾರಣವಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ನಿರಾಣಿ ಹುಡುಕುವ ನಾಯಕ ಯಾರು ?: ಕಳೆದ ಸುಮಾರು 8ರಿಂದ 9ವರ್ಷಗಳ ಬಳಿಕ ಸಚಿವ ನಿರಾಣಿ ಮತ್ತೂಂದು ಬಾರಿ ಪರೋಕ್ಷವಾಗಿ ಗುಡುಗಿದ್ದಾರೆ. ಕಬ್ಬು ಹೋರಾಟ ವಿಷಯದಲ್ಲಿ ಮುಧೋಳವನ್ನು ಏಕೆ ಗುರಿಯಾಗಿಸಲಾಗುತ್ತಿದೆ. ನಮ್ಮ ಕಾರ್ಖಾನೆಯಿಂದ ರೈತರಿಗೆ ಎಫ್ಆರ್ಪಿ ದರದ ಅನ್ವಯವೇ ಬಿಲ್ ಕೊಡುತ್ತೇವೆ. ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರದ್ದೂ ಯಾವುದೇ ತಕರಾರಿಲ್ಲ. ಆದರೆ, ಮುಧೋಳದಲ್ಲಿ ಮಾತ್ರ ಈ ಹೋರಾಟ ನಡೆಯುತ್ತದೆ. ಅದೇ ಜಮಖಂಡಿ, ಬೀಳಗಿ ಅಥವಾ ಬಾಗಲಕೋಟೆಯಲ್ಲಿ ಏಕೆ ನಡೆಯಲ್ಲ. ಅದರಲ್ಲೂ ನಿರಾಣಿ ಕಾರ್ಖಾನೆಯನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಹುಡುಕುತ್ತಿರುವೆ. ಅದು ಇಂದಲ್ಲ ನಾಳೆ ಬಹಿರಂಗಗೊಳ್ಳುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಆ ವ್ಯಕ್ತಿ ಯಾರು ಎಂಬ ಚರ್ಚೆ ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ.
ಇಂತಹ ಮಾತುಗಳು ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಜೋರಾಗಿ ಕೇಳಿ ಬಂದಿದ್ದವು. ಆಗ ಚುನಾವಣೆಗೆ ನಿಂತಿದ್ದ ಬಿಜೆಪಿಯ ಅಭ್ಯರ್ಥಿಗಳು, ತಾವು ಗೆಲ್ಲುವುದಕ್ಕಿಂತ, ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಪ್ರತಿಷ್ಠೆ ಮಾಡಿಕೊಂಡಿದ್ದರು. ಅದರ ಫಲವಾಗಿ, ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ, ಆರು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಸೋತ ಬಳಿಕ, ಅದೇ ಅಭ್ಯರ್ಥಿಗಳು- ಪಕ್ಷದ ಹಿರಿಯರು ಆತ್ಮಾವಲೋಕನ ಮಾಡಿಕೊಂಡರು. ಹೀಗಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ, ನಾವು ಯಾರೂ, ಒಬ್ಬರಿಗೊಬ್ಬರು ಸೋಲಿಸಲು ಪ್ರಯತ್ನಿಸಲ್ಲ. ನಮ್ಮ ನಮ್ಮ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೈಕಮಾಂಡ್ ಎದುರು ಹೇಳಿ ಬಂದಿದ್ದರು. ಆಗ ಬಿಜೆಪಿ ಹೈಕಮಾಂಡ್ ಕೂಡ, ಹೊಸ ಪ್ರಯೋಗ ಮಾಡದೇ, ಹಳಬರಿಗೆ ಟಿಕೆಟ್ ನೀಡಿತ್ತು ಎಂದು, ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.
ಆಗ ಜಿಲ್ಲೆಯ ಬಿಜೆಪಿ ನಾಯಕರು (ಅಭ್ಯರ್ಥಿಗಳು), ಹೈಕಮಾಂಡ್ಗೆ ಮಾತು ಕೊಟ್ಟಂತೆ, ತಮ್ಮದೇ ಪಕ್ಷದವರನ್ನು ಸೋಲಿಸುವ ಗೋಜಿಗೆ ಹೋಗದೇ, ತಮ್ಮ ಕ್ಷೇತ್ರದಲ್ಲಿ ತಾವು ಗೆಲ್ಲಲು ಶತಪ್ರಯತ್ನ ಮಾಡಿದರು. ಫಲವಾಗಿ ಏಳು ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತಾಯಿತು.
14 ದಿನಕ್ಕೊಮ್ಮೆ ಬಿಲ್ ಕೊಡಬೇಕು: ಕಬ್ಬಿನ ದರ ನಿಗದಿ ಮಾಡಿ ಕಾರ್ಖಾನೆ ಆರಂಭಿಸಿ ಎಂದು ರೈತ ಸಂಘಟನೆಗಳ ನೇತೃತ್ವದಲ್ಲಿ ಒಂದೆಡೆ ಹೋರಾಟ ನಡೆದರೆ, ನಮಗೆ ನಷ್ಟವಾಗುತ್ತದೆ. ಕೂಡಲೇ ಕಾರ್ಖಾನೆ ಆರಂಭಿಸಿ ಎಂದು ಇನ್ನೂ ಹಲವು ರೈತರು ಹೋರಾಟ ನಡೆಸಿದ್ದರು. ಬೆಲೆ ನಿಗದಿಗಾಗಿ ಸ್ವತಃ ಸಕ್ಕರೆ ಸಚಿವರು, ಉಸ್ತುವಾರಿ ಸಚುವರು, ಓರ್ವ ಹಿರಿಯ ಸಚಿವರು, ಮಧ್ಯಾಹ್ನದಿಂದ ಸಂಜೆ 7ರವರೆಗೆ ಸಭೆ ನಡೆಸಿದರೂ, ಬೆಲೆ ಮಾತ್ರ ನಿಗದಿ ಮಾಡಲು ಆಗಲಿಲ್ಲ. ಸ್ವತಃ ಮುಖ್ಯಮಂತ್ರಿಗಳ ಮಧ್ಯ ಪ್ರವೇಶವೂ ಫಲಪ್ರದವಾಗಲಿಲ್ಲ. ಕೊನೆಗೆ ಸಕ್ಕರೆ ಆಯುಕ್ತರು ಪ್ರತಿಟನ್ ಕಬ್ಬಿಗೆ 2850 ರೂ. ನೀಡಬೇಕು ಎಂದು ಕಾರ್ಖಾನೆಗಳಿಗೆ ನಿರ್ದೇಶನ ಕೊಟ್ಟರು. ಈ ಬೆಲೆಯನ್ನು ಕಾರ್ಖಾನೆ ಮಾಲೀಕರು ಒಪ್ಪಿಕೊಂಡ ಬಗ್ಗೆ ಸ್ಪಷ್ಟವೇ ಆಗಲಿಲ್ಲ. ಆದರೂ, ಮುಧೋಳದಲ್ಲಿ ನಿರಂತರವಾಗಿ ನಡೆದಿದ್ದ ಹೋರಾಟ ಕೊನೆಗೊಂಡಿತು. 14 ದಿನಗಳಲ್ಲಿ ಕಬ್ಬಿನ ಬಿಲ್ ಕೊಡಬೇಕೆಂಬ ಷರತ್ತು ಇದ್ದರೂ ಮೊದಲ ಕಂತಿನ ಬಿಲ್ ಅನ್ನು 14 ದಿನಗಳ ಬಳಿಕವೂ ಎಷ್ಟೋ ಕಾರ್ಖಾನೆಗಳು ಪಾವತಿಸಿಲ್ಲ.
ಪ್ರತಿಷ್ಠೆಯ ರಾಜಕೀಯ, ಕಬ್ಬು ರಾಜಕೀಯ ಅದೇನೇ ಇದ್ದರೂ, ಕೊನೆಗೆ ಹೈರಾಣಾಗುವುದು ಮಾತ್ರ ಅನ್ನದಾತ. ಗುಡಿಸಲಿಗೆ ಬೆಂಕಿ ಹತ್ತಿದಾಗ, ಮೆಕ್ಕೆತೆನೆ ಸುಟ್ಟುಕೊಳ್ಳುವ ತಂತ್ರಗಾರಿಕೆಯ ರಾಜಕೀಯ ಜಿಲ್ಲೆಯಲ್ಲಿ ನಡೆಯುತ್ತಲೇ ಇದೆ. ಇದು ಕೊನೆಗೊಳ್ಳಬೇಕು. ಕಷ್ಟಪಟ್ಟು ರೈತರು ಬೆಳೆಯುವ ಕಬ್ಬಿಗೆ ಯೋಗ್ಯ ಬೆಲೆ ನೀಡಲು ಸ್ಪಷ್ಟ ಕಾನೂನು ರೂಪಿಸಬೇಕು. ಕಾನೂನು ಉಲ್ಲಂಘಿಸುವ ಕಾರ್ಖಾನೆಗೆ ದಂಡ ವಿಧಿಸುವ ಹಕ್ಕು ರಾಜ್ಯ ಸರ್ಕಾರಕ್ಕಿರಬೇಕು ಎಂಬುದು ಪ್ರಜ್ಞಾವಂತ ರೈತರ ಒತ್ತಾಯ.
ಮುಗ್ದ ರೈತರಿಗೆ ಹಾನಿ
ರೈತರು ತಾವು ಕಷ್ಟಪಟ್ಟು ಬೆಳೆದ ಯಾವುದೇ ಬೆಳೆಗೆ ಸ್ವತಃ ತಾವೇ ಬೆಲೆ (ದರ) ಕಟ್ಟುವ ಹಕ್ಕಿಲ್ಲ ಎಂಬುದು ಸತ್ಯ. ಆದರೆ, ಕಬ್ಬಿನ ವಿಷಯದಲ್ಲಿ ಕಾರ್ಖಾನೆ ಮತ್ತು ರೈತರಿಬ್ಬರೂ ಸಕ್ಕರೆ ಉದ್ಯಮದ ಎರಡು ಕಣ್ಣು ಇದ್ದಂತೆ. ಇಲ್ಲಿ ಪರಸ್ಪರ ಒಪ್ಪಂದ, ವಿಶ್ವಾಸ ಹಾಗೂ ನಂಬಿಕೆ ಇದ್ದರೆ ಮಾತ್ರ, ಇಬ್ಬರಿಗೂ ಅನುಕೂಲ. ಆದರೆ, ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತರ ಮಧ್ಯೆ ಭಿನ್ನಾಭಿಪ್ರಾಯ ಶುರುವಾದರೆ, ಕಾರ್ಖಾನೆ ಮಾಲಿಕರಿಗಿಂತ ರೈತರಿಗೆ ನಷ್ಟವಾಗುವುದೇ ಹೆಚ್ಚು. ಸಕ್ಕರೆ ಕಾರ್ಖಾನೆಗಳು, ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು, ಬರೋಬ್ಬರà 52 ದಿನ ತಡವಾಯಿತು. ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಕಬ್ಬು ಕಡಿಯಲು ಬಂದಿದ್ದ ಕಬ್ಬು ಕಟಾವು ಗ್ಯಾಂಗ್ಗಳು, ಕೆಲಸವಿಲ್ಲದೇ ಹಲವರು ಮರಳಿ ಹೋದರು. ಇನ್ನು ಕೆಲವ ಗ್ಯಾಂಗ್ ಗಳಿಗೆ 52 ದಿನಗಳ ಕಾಲ, ರೈತರೇ ನಿತ್ಯ ಊಟ, ವಸತಿಗೆ ಖರ್ಚುವೆಚ್ಚ ಕೊಟ್ಟು ಸಾಕಷ್ಟು ಹಣ ವ್ಯಯಿಸಬೇಕಾಯಿತು. ಇದೆಲ್ಲದರ ಮಧ್ಯೆ 13ರಿಂದ 14 ತಿಂಗಳು ಪೂರೈಸಿದ ಕಬ್ಬಿನ ಇಳುವರಿಯೂ ಕಡಿಮೆ ಆಯ್ತು. ಇದರಿಂದ ರೈತರಿಗೇ ಅತಿಹೆಚ್ಚು ನಷ್ಟ ಉಂಟಾಯಿತು.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?