42 ಸಾವಿರ ವಿದ್ಯಾರ್ಥಿಗಳಿಗಿಂದು ಪದವಿ
Team Udayavani, Jan 27, 2017, 11:09 AM IST
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದ 52ನೇ ಘಟಿಕೋತ್ಸವ ಶುಕ್ರವಾರ (ಜ.27) ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ಒಟ್ಟಾರೆ 42,245 ವಿದ್ಯಾ ರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು 84 ವಿದ್ಯಾರ್ಥಿಗಳು ಪಿಎಚ್ಡಿ ಪದವಿ ಪಡೆಯಲಿದ್ದಾರೆ ಬೆಂಗಳೂರು ವಿವಿ ಕುಲಪತಿ ಡಾ.ಬಿ.ತಿಮ್ಮೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಘಟಿಕೋತ್ಸವದ ಕುರಿತು ವಿವರಣೆ ನೀಡಿದ ಅವರು, ಘಟಿಕೋತ್ಸದಲ್ಲಿ ರಾಷ್ಟ್ರೀಯ ಮೌಲಿಕರಣ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಪ್ರೊ.ಧೀರೇಂದ್ರಪಾಲ್ ಸಿಂಗ್ ಅತಿಥಿಯಾಗಿ ಭಾಗವಹಿಸಲಿ ದ್ದಾರೆ. ಅಲ್ಲದೆ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಬಡವರಾಜ ರಾಯ ರೆಡ್ಡಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಸ್ವೀಕರಿ ಸಲು ಒಟ್ಟು 42,245 ವಿದ್ಯಾರ್ಥಿಗಳು (18,453 ವಿದ್ಯಾರ್ಥಿಗಳು, 23,793 ವಿದ್ಯಾರ್ಥಿನಿಯರು) ಅರ್ಹರಾಗಿ ದ್ದಾರೆ. ಅಲ್ಲದೆ, 84 ವಿದ್ಯಾರ್ಥಿಗಳು (58 ವಿದ್ಯಾರ್ಥಿಗಳು, 26 ವಿದ್ಯಾರ್ಥಿ ನಿಯರು) ಪಿಎಚ್ಡಿ ಪಡೆಯಲಿದ್ದಾರೆ ಎಂದರು ಹೇಳಿದರು.
203 ಚಿನ್ನದ ಪದಕ ಪ್ರದಾನ: ವಿವಿಧ ಪದವಿ(ಒಟ್ಟಾರೆ ಫಲಿ ತಾಂಶ) ಹಾಗೂ ಸ್ನಾತಕೋತ್ತರ ಪದವಿ(ವಿಷಯವಾರು ಫಲಿತಾಂಶ)ಗಳಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಘಟಿಕೋತ್ಸವದಲ್ಲಿ ಒಟ್ಟು 203 ಚಿನ್ನದ ಪದಕ ಮತ್ತು 74 ನಗದು ಬಹುಮಾನ ನೀಡಲಿದ್ದಾರೆ. ಚಿನ್ನದ ಪದಕ ಪಡೆದವರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರು 145 ಚಿನ್ನದ ಪದಕ ಪಡೆದಿದ್ದರೆ, ವಿದ್ಯಾರ್ಥಿಗಳು 58 ಚಿನ್ನದ ಪದಕ ಪಡೆದಿದ್ದಾರೆ ಎಂದರು.
8 ಚಿನ್ನ ಪಡೆದ ಸೌಜನ್ಯಗೆ ಐಎಎಸ್ ಆಸೆ
ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎ ಕನ್ನಡ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಎಸ್.ಕೆ.ಸೌಜನ್ಯ ಒಟ್ಟು 8 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆಯುತ್ತಿರುವ “ಚಿನ್ನದ ಹುಡುಗಿ’ ಎನಿಸಿಕೊಳ್ಳುತ್ತಿದ್ದಾರೆ.
ಹೊಸಕೋಟೆ ತಾಲೂಕಿನ ಕೇಸತ್ಯವಾರ ದವರಾದ ಸೌಜನ್ಯ ಎಸ್ಸೆಸ್ಸೆಲ್ಸಿಯಲ್ಲೇ ತಂದೆ ಯನ್ನು ಕಳೆದುಕೊಂಡರೂ ತಾಯಿಯ ಶ್ರಮ ಹಾಗೂ ಪ್ರೋತ್ಸಾಹದಿಂದ ಉನ್ನತ ಶಿಕ್ಷಣದ ಮೆಟ್ಟಿಲೇರಿ ಉತ್ತಮ ಸಾಧನೆ ಮಾಡಿದ್ದಾರೆ. 8 ಚಿನ್ನದ ಪದಕ ಪಡೆಯುತ್ತಿರುವ ಸಾಧನೆ ಬಗ್ಗೆ “ಉದಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಅವರು, “ತುಂಬಾ ಖುಷಿಯಾಗುತ್ತಿದೆ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ್ತಿದೆ. ಇದೆಲ್ಲವೂ ನನ್ನ ತಾಯಿ ಸುನಂದಮ್ಮನ ಶ್ರಮ ಮತ್ತು ಸಹಕಾರದಿಂದ ಸಾಧ್ಯವಾದದ್ದು,” ಎಂದು ಹೇಳಿದರು.
“ನಮ್ಮದು ಬಡ ಕುಟುಂಬ, ನಾನು ಎಸ್ಸೆಸ್ಸೆಲ್ಸಿ ಓದುತ್ತಿರುವಾಗಲೇ ತಂದೆಯನ್ನು ಕಳೆದುಕೊಂಡೆ. ನಂತರ ದಿನಗೂಲಿ ಮಾಡಿಕೊಂಡೇ ಸಂಸಾರ ನಿಬಾಯಿಸಿದ ತಾಯಿ ನನ್ನ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯಲ್ಲೂ ನೆರವಾದರು. ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ ಓದು ಮುಂದುವರಿಸಿದೆ. ಅಣ್ಣ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಆಗಿದ್ದಾನೆ. ಮುಂದೆ ಪಿಎಚ್ಡಿ ಮಾಡುತ್ತೇನೆ. ಐಎಎಸ್ ಮಾಡುವುದು ನನ್ನ ಗುರಿ. ಬೋಧನಾ ಕ್ಷೇತ್ರ ನನ್ನ ಎರಡನೇ ಆಯ್ಕೆ,” ಎಂದು ಸೌಜನ್ಯ ಹೇಳಿದರು.
ಅದೇ ರೀತಿ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ರ್ಯಾಂಕ್ ವಿದ್ಯಾರ್ಥಿ ನಾಗರಾಜ 6 ಚಿನ್ನದ ಪದಕ ಪಡೆಯುವ ಮೂಲಕ 2ನೇ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿ ಎನಿಸಿದ್ದಾರೆ. ನಾಗರಾಜ್ 5 ವಿವಿಧ ನಗದು ಬಹುಮಾನಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.