“ಸರ್ಕಾರ ಬಿದ್ದರೂ ಬಿಎಸ್ವೈ ಸಿಎಂ ಆಗಲ್ಲ’
Team Udayavani, Sep 18, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಂಡರೂ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ
ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎಂದು ನಾನು ಹೇಳುತ್ತಿರುವುದಲ್ಲ, ರಾಜ್ಯ ಬಿಜೆಪಿಯ ಪ್ರಮುಖ ನಾಯಕರೇ ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ಕೆಲವು ಮಧ್ಯವರ್ತಿಗಳ ಮರುಳು ಮಾಡುವ ಮಾತುಗಳಿಂದ ಯಡಿಯೂರಪ್ಪ ದಾರಿ ತಪ್ಪುತ್ತಿದ್ದಾರೆ. ಒಂದು ವೇಳೆ ಸರ್ಕಾರ ಪತನ ಸನ್ನಿವೇಶ ನಿರ್ಮಾಣವಾದರೆ ಕೇಂದ್ರ ಸರ್ಕಾರ, ಕರ್ನಾಟಕದಲ್ಲಿ ತಕ್ಷಣವೇ ರಾಷ್ಟ್ರಪತಿ ಆಡಳಿತ ಹೇರಿ ನಂತರ ಲೋಕಸಭೆ ಜತೆಯಲ್ಲೇ ವಿಧಾನಸಭೆಗೂ ಚುನಾವಣೆ ನಡೆಸಲಿದೆ ಎಂದರು.
ದೇವರ ಆಶೀರ್ವಾದದಿಂದ ಈ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಂಪೂರ್ಣ ಸಹಕಾರ
ನೀಡುತ್ತಿದ್ದಾರೆ, ನಮ್ಮ ಮತ್ತು ಅವರ ನಡುವಿನ ಸಂಬಂಧ ಬಹಳ ಚೆನ್ನಾಗಿದೆ ಎಂದರು.