ಸಮೂಹ ಸಾರಿಗೆ ಉತ್ತೇಜನಕ್ಕೆ ಬಸ್‌ ಪಥ


Team Udayavani, Oct 17, 2019, 3:08 AM IST

samooha

ಬೆಂಗಳೂರು: “ನಗರದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರದ ನಡುವೆ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಬಸ್‌ ಪಥವನ್ನು ಯಶಸ್ಸು ಮತ್ತು ವೈಫ‌ಲ್ಯಗಳ ದೃಷ್ಟಿಯಿಂದ ನೋಡುವುದಕ್ಕಿಂತ ಸಾರ್ವಜನಿಕ ಸಾರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಉತ್ತಮ ಪ್ರಯೋಗವೆಂದು ಪರಿಗಣಿಸುವ ಅವಶ್ಯಕತೆ ಇದೆ’ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು.

ನಗರದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕೇಂದ್ರ ಕಚೇರಿಯಲ್ಲಿ ಬುಧವಾರ ಬಿ-ಪ್ಯಾಕ್‌ ಸಂಸ್ಥೆಯು ಉಬರ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಬೆಂಗಳೂರಿಗಾಗಿ ಸುಸ್ಥಿರ ಸಾರಿಗೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಾಹನದಟ್ಟಣೆ ವಿಪರೀತ ಇರುವ ಬೆಂಗಳೂರಿನಂತಹ ನಗರದಲ್ಲಿ ಬಸ್‌ಗಾಗಿ ಪ್ರತ್ಯೇಕ ಪಥ ಯಶಸ್ಸು ಆಗುತ್ತದೆಯೇ? ವಿಫ‌ಲವಾದರೆ ಮುಂದೇನು? ಎಂಬ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಆದರೆ, ಇದು ಯಶಸ್ಸು ಅಥವಾ ವೈಫ‌ಲ್ಯದ ಪ್ರಶ್ನೆ ಅಲ್ಲ. ಸಮೂಹ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡುವ ಹಾಗೂ ಆ ಮೂಲಕ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನ. ಅದು 1 ಕಿ.ಮೀ. ಅಥವಾ ಎರಡು ಕಿ.ಮೀ. ಆಗಿರಬಹುದು. ಅಷ್ಟಕ್ಕೂ ಇದು ಅಂತ್ಯವಲ್ಲ; ಆರಂಭಿಕ ಹೆಜ್ಜೆ ಎಂದು ಪ್ರತಿಪಾದಿಸಿದರು.

ಪ್ರತ್ಯೇಕ ಬಸ್‌ ಪಥ ನಿರ್ಮಾಣ ಏಕಾಏಕಿ ಕೈಗೆತ್ತಿಕೊಂಡ ಯೋಜನೆ ಅಲ್ಲ. ಎಲ್ಲ ಅಗತ್ಯ ಸಿದ್ಧತೆಗಳು ಮಾಡಿಕೊಂಡು, ಸಾಕಷ್ಟು ಚರ್ಚೆ-ಸಭೆಗಳ ನಂತರ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಸೇವೆ ಸಲ್ಲಿಸುವ ಚಾಲಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಅಲ್ಲಿ ಕಾರ್ಯಾಚರಣೆ ಮಾಡುವ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ಗಳ ಮೂಲಕ ಟಿಕೆಟ್‌ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳಲ್ಲಿ ಹಾಗೂ ಮಾರ್ಗದುದ್ದಕ್ಕೂ ಸಿಸಿಟಿವಿಗಳನ್ನೂ ಹಾಕಲಾಗುತ್ತಿದೆ. ಹಾಗಾಗಿ, ತರಾತುರಿಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇವಲ ಬಿಎಂಟಿಸಿ ಬಸ್‌ಗಳಿಗೆ ಸೀಮಿತಗೊಳಿಸದೆ, ಇದೇ ಮಾರ್ಗದಲ್ಲಿ ಸಂಚರಿಸುವ 10 ಆಸನಗಳಿಗಿಂತ ಮೇಲ್ಪಟ್ಟ ವಾಹನಗಳ ಸಂಚಾರಕ್ಕೂ ಇಲ್ಲಿ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಹೊರವರ್ತುಲ ರಸ್ತೆ ಕಂಪನಿಗಳ ಸಂಘದ ನವೀನ್‌ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ. ಶಿಖಾ, “ಬಸ್‌ಗಾಗಿ ಪ್ರತ್ಯೇಕ ಪಥ ಮೀಸಲಿಟ್ಟಿರುವುದು ವಿಶೇಷವಾಗಿ ಕಾಣುತ್ತಿರಬಹುದು. ಆದರೆ, ವಾಸ್ತವವಾಗಿ ನಾಲ್ಕು ಪಥಗಳಲ್ಲಿ ಇನ್ಮುಂದೆ ಒಂದೇ ಪಥ ಲಭ್ಯವಾಗುತ್ತದೆ’ ಎಂದು ಚಟಾಕಿ ಹಾರಿಸಿದರು.

ಅದೇನೇ ಇರಲಿ, ಸದ್ಯಕ್ಕೆ ಇಲ್ಲಿ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಲಾ ವಾಹನಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಾಧ್ಯ-ಅಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.

ಪ್ರತಿ 30 ಸೆಕೆಂಡ್‌ಗೆ ಒಂದು ಬಸ್‌!: ಪೀಕ್‌ ಅವರ್‌ನಲ್ಲಿ ಕೂಡ “ನಮ್ಮ ಮೆಟ್ರೋ’ಗಾಗಿ ಕನಿಷ್ಠ ಮೂರು ನಿಮಿಷ ಕಾಯಬೇಕು. ಆದರೆ, ಸಿಲ್ಕ್ ಬೋರ್ಡ್‌ ಜಂಕ್ಷನ್‌- ಕೆ.ಆರ್‌. ಪುರ ನಡುವೆ ಕೇವಲ 30 ಸೆಕೆಂಡ್‌ಗೊಂದು ಬಸ್‌ ಸೇವೆ ಲಭ್ಯ! ಹೌದು, ಈ ಮಾರ್ಗದಲ್ಲಿ ಪ್ರಸ್ತುತ 710 ಬಸ್‌ಗಳಿದ್ದು, ಈ ಪೈಕಿ 130 ಬಸ್‌ಗಳು ಬೆಳಿಗ್ಗೆ 9ರಿಂದ 11ರ ಅವಧಿಯಲ್ಲಿ ಸಂಚರಿಸುತ್ತವೆ. ಅವುಗಳ ಕಾರ್ಯಾಚರಣೆ ನಡುವಿನ ಅಂತರ ಕೇವಲ 30 ಸೆಕೆಂಡ್‌ಗಳು.

ಆದರೆ, ಸಂಚಾರದಟ್ಟಣೆಯಿಂದಾಗಿ ನಿಗದಿತ ಸ್ಥಳವನ್ನು ಸಕಾಲದಲ್ಲಿ ತಲುಪುತ್ತಿಲ್ಲ. ಈ ಮಧ್ಯೆ ಇನ್ನಷ್ಟು ಬಸ್‌ಗಳನ್ನು ಆ ಮಾರ್ಗದಲ್ಲಿ ನಿಯೋಜಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ. ಸದ್ಯದ ಸ್ಥಿತಿಯಲ್ಲಿ ಒಂದು ಬಸ್‌ ಕೂಡ ಹೆಚ್ಚುವರಿಯಾಗಿ ಹಾಕುವುದು ಅಲ್ಲಿ ಕಷ್ಟಸಾಧ್ಯ ಎಂದು ಶಿಖಾ ಸ್ಪಷ್ಟಪಡಿಸಿದರು. ಅಂದಹಾಗೆ ಉದ್ದೇಶಿತ ಮಾರ್ಗದಲ್ಲಿ ನಿತ್ಯ 30 ಸಾವಿರ ಜನ ಸಂಚರಿಸುತ್ತಾರೆ. ಆ ಪೈಕಿ ಅರ್ಧಕ್ಕರ್ಧ ಜನರನ್ನು ಬಿಎಂಟಿಸಿ ಬಸ್‌ ಕೊಂಡೊಯ್ಯುತ್ತದೆ ಎಂದೂ ಮಾಹಿತಿ ನೀಡಿದರು.

ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಎಲ್ಲಿದೆ?
ಬೆಂಗಳೂರು: ಬಸ್‌ ಅಥವಾ ಮೆಟ್ರೋದಲ್ಲಿ ಸಂಚರಿಸಲು ನಮಗೂ ಇಷ್ಟ. ಆದರೆ, ನಿಲ್ದಾಣಕ್ಕೆ ಬಂದಿಳಿದ ನಂತರ ಮನೆ ತಲುಪುವುದು ಹೇಗೆ? ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಎಲ್ಲಿದೆ? -ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಬೆಂಗಳೂರಿಗಾಗಿ ಸುಸ್ಥಿರ ಸಾರಿಗೆ’ ಕುರಿತ ಸಂವಾದದಲ್ಲಿ ತಜ್ಞರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ನಗರ ಸಾರಿಗೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರ ಮುಂದಿಟ್ಟ ಪ್ರಶ್ನೆ ಇದು.

ನಗರದ ವಾಹನ ದಟ್ಟಣೆಯಲ್ಲಿ ಗಂಟೆಗಟ್ಟಲೆ ವಾಹನ ಚಾಲನೆ ಮಾಡಲು ಯಾರೂ ಇಷ್ಟಪಡುವುದಿಲ್ಲ. ಇನ್ನು ಪೀಕ್‌ ಅವರ್‌ನಲ್ಲಿ ಆ್ಯಪ್‌ ಆಧಾರಿತ ಕ್ಯಾಬ್‌ ಬುಕಿಂಗ್‌ ಮಾಡಿದಾಗ, ಅರ್ಧಗಂಟೆವರೆಗೂ ಕಾಯುವ ಸ್ಥಿತಿ ಇರುತ್ತದೆ. ಹಾಗಾಗಿ, ವೋಲ್ವೋ ಅಥವಾ ಮೆಟ್ರೋದಂತಹ ಹವಾನಿಯಂತ್ರಿತ ಸಮೂಹ ಸಾರಿಗೆಗಳಲ್ಲಿ ಸಂಚರಿಸುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಇದಕ್ಕೆ ನಾವೂ ಹೊರತಾಗಿಲ್ಲ. ಆದರೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಕೊರತೆಯು ಸಮೂಹ ಸಾರಿಗೆಗೆ ಹಿಂದೇಟು ಹಾಕುವಂತೆ ಮಾಡುತ್ತಿದೆ ಎಂದು ವಿವಿಧ ಸಂಘಟನೆಗಳ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಆರಂಭದಲ್ಲಿ ಬಿ-ಪ್ಯಾಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್‌ ಮಾತನಾಡಿ, ಪ್ರತ್ಯೇಕ ಪಥ ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ನಗರದಲ್ಲಿ ದಟ್ಟಣೆ ಶುಲ್ಕ, ಪಾರ್ಕಿಂಗ್‌ ಶುಲ್ಕ ವಿಧಿಸಬೇಕು. ಇದರಿಂದ ಸಂಚಾರದಟ್ಟಣೆ ತಗ್ಗಲಿದೆ. ಜತೆಗೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಕಲ್ಪಿಸಬೇಕು. ಎಲ್ಲ ಸಮೂಹ ಸಾರಿಗೆ ವ್ಯವಸ್ಥೆಗೆ ಒಂದೇ ಮಾದರಿಯ ಕಾರ್ಡ್‌ ಪರಿಚಯಿಸಬೇಕು. ಹಾಗೂ ಇವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವೈಟ್‌ಫೀಲ್ಡ್‌ ರೈಸಿಂಗ್‌ ಸದಸ್ಯರೊಬ್ಬರು ಮಾತನಾಡಿ, “ವೈಟ್‌ಫೀಲ್ಡ್‌ನಿಂದ ಮೆಜೆಸ್ಟಿಕ್‌ ಮೂಲಕ ಕೆಲವು ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಆದರೆ, ವೈಟ್‌ಫೀಲ್ಡ್‌ ಸುತ್ತಮುತ್ತ ನಿರೀಕ್ಷಿತ ಮಟ್ಟದಲ್ಲಿ ಬಸ್‌ ಸೇವೆ ಇಲ್ಲ. ಸಾಕಷ್ಟು ಒತ್ತಾಯ ಮಾಡಿದ ನಂತರ ಚಕ್ರ ಸೇವೆಗಳನ್ನು ಪರಿಚಯಿಸಲಾಗಿದೆ. ಅವುಗಳೂ ತುಂಬಿತುಳುಕುತ್ತಿರುತ್ತವೆ. ಶೆಡ್ಯುಲ್‌ಗ‌ಳು ಕೂಡ ತುಂಬಾ ಕಡಿಮೆ ಎಂದು ಅಲವತ್ತುಕೊಂಡರು.

ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿ ಆಂಡ್‌ ಟೌನ್‌ಶಿಪ್‌ ಅಥಾರಿಟಿ (ಇಎಲ್‌ಸಿಐಟಿಎ) ಸದಸ್ಯರು, “ಎಲೆಕ್ಟ್ರಾನಿಕ್‌ ಸಿಟಿಗೆ ಬಸ್‌ಗಳ ಸೇವೆ ತುಂಬಾ ಕಡಿಮೆ. ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯಂತೂ ದೊಡ್ಡ ಸಮಸ್ಯೆಯಾಗಿದೆ. ಇದರ ಲಾಭ ಟ್ಯಾಕ್ಸಿಗಳು, ಆಟೋ, ಮಿನಿ ವ್ಯಾನ್‌ಗಳಿಗೆ ಆಗುತ್ತಿದೆ. ಈಗಾಗಲೇ ವೈಟ್‌ಫೀಲ್ಡ್‌ ನಿವಾಸಿಗಳು ತಮ್ಮ ವ್ಯಾಪ್ತಿಯಲ್ಲೇ ಶೆಟಲ್‌ ಸರ್ವಿಸ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಬಿಎಂಟಿಸಿ ಕೂಡ ಕ್ರಮ ಕೈಗೊಳ್ಳಬೇಕು’ ಎಂದರು

ಮಿಡಿ ಬಸ್‌ ಮೂಲಕ ಸಂಪರ್ಕ: ಬಿಎಂಆರ್‌ಸಿಎಲ್‌ ಕಾರ್ಯನಿರ್ವಹಣಾ ನಿರ್ದೇಶಕಿ ಕಲ್ಪನಾ ಕಟಾರಿಯಾ ಮಾತನಾಡಿ, “ಫ‌ಸ್ಟ್‌ ಮತ್ತು ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ (ಮನೆಯಿಂದ ಹತ್ತಿರದ ನಿಲ್ದಾಣಕ್ಕೆ ಹಾಗೂ ಕಚೇರಿಯಿಂದ ಹತ್ತಿರದ ನಿಲ್ದಾಣಕ್ಕೆ ಸಂಪರ್ಕ)ಗೆ ಸಂಬಂಧಿಸಿದಂತೆ ಬಿಎಂಟಿಸಿಯೊಂದಿಗೆ ಮಾತುಕತೆ ನಡೆದಿದ್ದು, ಮಿಡಿ ಬಸ್‌ಗಳ ಸೇವೆ ಆರಂಭಿಸುವಂತೆ ಮನವಿ ಮಾಡಲಾಗಿದೆ.

ಅಲ್ಲದೆ, ಮೆಟ್ರೋ ಎರಡನೇ ಹಂತದಲ್ಲಿ ನಿಲ್ದಾಣಗಳಲ್ಲಿ ಬಸ್‌ ಬೇಗಳನ್ನು ನಿರ್ಮಿಸಲಾಗುತ್ತಿದೆ. ಮೆಟ್ರೋ ರೈಲುಗಳಲ್ಲಿ ಮುಂದಿನ ಬಸ್‌ ಸೇವೆಯ ಮಾಹಿತಿ ಕೂಡ ಬಿತ್ತರಿಸುವ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು. ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಲ್ಲಿಕಾರ್ಜುನ್‌, ಸಹಾಯಕ ಪೊಲೀಸ್‌ ಆಯುಕ್ತ (ಸಂಚಾರ ಮತ್ತು ಯೋಜನೆ)ರಾದ ಎಂ.ಸಿ. ಕವಿತಾ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.