ಖಾತೆ ಬದಲಾವಣೆಗೆ ಒಪ್ಪಿದರೂ ಬಗ್ಗದ ಜಿಟಿಡಿ
Team Udayavani, Jun 12, 2018, 6:00 AM IST
ಬೆಂಗಳೂರು: ತಮಗೆ ಸಿಕ್ಕಿದ ಉನ್ನತ ಶಿಕ್ಷಣ ಖಾತೆಯಿಂದ ಅಸಮಾಧಾನಗೊಂಡಿದ್ದ ಜೆಡಿಎಸ್ನ ಜಿ.ಟಿ.ದೇವೇಗೌಡ ಅವರ ಖಾತೆ ಬದಲಾವಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒಪ್ಪಿದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಉನ್ನತ ಶಿಕ್ಷಣ ಖಾತೆಯಿಂದ ಅಸಮಾಧಾನಗೊಂಡಿದ್ದ ಸಚಿವ ಜಿ.ಟಿ.ದೇವೇಗೌಡ ಅವರನ್ನು ಸೋಮವಾರ
ಪದ್ಮನಾಭನಗರದ ನಗರದ ನಿವಾಸಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ
ಕರೆಸಿಕೊಂಡಿದ್ದರು. ಈ ವೇಳೆ ಸಚಿವ ಎಚ್.ಡಿ.ರೇವಣ್ಣ ಕೂಡ ಇದ್ದರು. ನಂತರ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ
ಸಮಾಲೋಚನೆ ನಡೆಸಿ ಖಾತೆ ಬದಲಾವಣೆಗೆ ಒಪ್ಪಿಕೊಂಡಿದ್ದಾರೆ.
ಆದರೆ, ಜಿ.ಟಿ.ದೇವೇಗೌಡ ಮಾತ್ರ ತಮಗೆ ಜನರಿಗೆ ಹತ್ತಿರವಿರುವ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅಲ್ಲದೆ, ಜೆಡಿಎಸ್ ಪಾಲಿಗೆ ಬಂದಿರುವ ಖಾತೆಗಳಲ್ಲಿ ಹಂಚಿಕೆಯಾಗಿ ಉಳಿದಿರುವ ಉತ್ತಮವಾದ ಖಾತೆ ನೀಡಬಹುದು ಎನ್ನುವ ಮೂಲಕ ತಮಗೆ ಇಂಧನ ಖಾತೆ ಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಅದು ಸಾಧ್ಯವಾಗದಿದ್ದರೆ ಈಗಾಗಲೇ ಬಂಡೆಪ್ಪ ಕಾಶೆಂಪೂರ ಅವರಿಗೆ ನೀಡಿರುವ ಸಹಕಾರ ಖಾತೆ ಬೇಕು ಎಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಜಿ.ಟಿ.ದೇವೇಗೌಡ ಶುಕ್ರವಾರವೇ ಸರ್ಕಾರ ನೀಡಿದ್ದ ಕಾರನ್ನು ವಾಪಸ್ ಮಾಡಿದ್ದರು. ಅಲ್ಲದೆ, ನೀಡುವುದಾದರೆ ಒಳ್ಳೆಯ ಖಾತೆ ನೀಡಿ. ಇಲ್ಲದಿದ್ದರೆ ಶಾಸಕನಾಗಿಯೇ ಇರುತ್ತೇನೆ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡ ಅವರು ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಿ.ಟಿ.ದೇವೇಗೌಡರನ್ನು ಕರೆಸಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಖಾತೆ ಬದಲಾವಣೆಗೆ ಮುಖ್ಯಮಂತ್ರಿಗಳೂ ಒಪ್ಪಿಕೊಂಡಿದ್ದಾರೆ.
ರೈತರಿಗೆ ಹತ್ತಿರವಾದ ಖಾತೆ ಬೇಕು: ಈ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಖಾತೆ ನಿರ್ವಹಿಸುವ ಸಾಮರ್ಥ್ಯ ನನಗಿದೆ. ಆದರೆ, ರೈತರಿಗೆ ಹತ್ತಿರವಾಗುವ ಖಾತೆ ತೆಗೆದುಕೊಳ್ಳುವಂತೆ ಕ್ಷೇತ್ರದ ಮತದಾರರು ಒತ್ತಾಯಿಸಿದ್ದರಿಂದ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ. ಈ ಕುರಿತು ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರೊಂಂದಿಗೆ ಮಾತನಾಡಿದ್ದೇನೆ ಎಂದರು.
ಖಾತೆ ಬದಲಾವಣೆಗೆ ಅವರು ಒಪ್ಪಿದ್ದು, ಮೊದಲು ಅಬಕಾರಿ ಖಾತೆ ತೆಗೆದುಕೊಳ್ಳುವಂತೆ ಹೇಳಿದರು. ಆದರೆ, ಈ ಖಾತೆ ಬೇಡ. ರೈತರಿಗೆ ಹತ್ತಿರವಾಗಿರುವ ಖಾತೆ ಕೊಡಿ ಎಂದು ಕೇಳಿದ್ದೇನೆ. ಹಾಗಾಗಿ ಜೆಡಿಎಸ್ ಪಾಲಿಗೆ ಬಂದಿರುವ ಖಾತೆಗಳಲ್ಲಿ ಹಂಚಿಕೆಯಾಗಿ ಉಳಿದಿರುವ ಉತ್ತಮವಾದ ಖಾತೆ ನೀಡಬಹುದು ಎಂದು ಹೇಳಿದರು. ಪ್ರಸ್ತುತ ಜೆಡಿಎಸ್ಗೆ ಲಭ್ಯವಾದ ಖಾತೆಗಳ ಪೈಕಿ ಸಚಿವರಿಗೆ ಹಂಚಿಕೆಯಾಗಿ ಹಣಕಾಸು, ಅಬಕಾರಿ, ಇಂಧನ, ಸಣ್ಣ ಉಳಿತಾಯ ಮತ್ತು ಲಾಟರಿ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಯೋಜನೆ ಮತ್ತು ಸಾಂಖೀÂಕ, ಮೂಲಸೌಕರ್ಯ, ಜವಳಿ ಖಾತೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಉಳಿದುಕೊಂಡಿದೆ. ಈ ಪೈಕಿ ರೈತರಿಗೆ ಹತ್ತಿರವಾಗಿರುವ ಖಾತೆ ಎಂದರೆ ಅದು ಇಂಧನ ಮಾತ್ರ. ಹೀಗಾಗಿ ಜಿ.ಟಿ.ದೇವೇಗೌಡ ಅವರು ಇಂಧನ ಖಾತೆ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ.
ಬಗೆಹರಿದ ಪುಟ್ಟರಾಜು ಮುನಿಸು: ಈ ಮಧ್ಯೆ ಸಾರಿಗೆ ಖಾತೆ ಮೇಲೆ ಕಣ್ಣಿಟ್ಟಿದ್ದ ತಮಗೆ ಸಣ್ಣ ನೀರಾವರಿ ಖಾತೆ ಸಿಕ್ಕಿದ್ದರಿಂದ ಅಸಮಾಧಾನಗೊಂಡಿದ್ದ ಮತ್ತೂಬ್ಬ ಸಚಿವ ಸಿ.ಎಸ್.ಪುಟ್ಟರಾಜು ಅವರ ಅತೃಪ್ತಿ ಶಮನವಾಗಿದೆ. ಸಣ್ಣ ನೀರಾವರಿ ಜತೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರಿಂದ ಪುಟ್ಟರಾಜು ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.