ಉಂಡ ಮನೆಗೆ ಸಹ ಜೀವನ ಜೋಡಿ ಕನ್ನ!
ಕದ್ದ ಹಣದಲ್ಲಿ ಸಾಲ ತೀರಿಸಿದ ಬಳಿಕ ಗೋವಾಕ್ಕೆ ತೆರಳಿ ಮೋಜು
Team Udayavani, Jul 1, 2023, 1:55 PM IST
ಬೆಂಗಳೂರು: ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿಯೊಂದು ತಾವು ಬಾಡಿಗೆಗಿದ್ದ ಮನೆಯಲ್ಲೇ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
ಶಿವಮೊಗ್ಗ ಮೂಲದ ಸುಮಂತ್ (27) ಹಾಗೂ ಆತನ ಪ್ರೇಯಸಿ ಲಿಖಿತಾ (20) ಬಂಧಿತರು.
ಸುಮಂತ್ ಎಂಜಿನಿಯರಿಂಗ್ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಫಿಸಿಯೋ ಥೆರಪಿ ಕೋರ್ಸ್ಗೆ ಸೇರಿಕೊಂಡಿದ್ದ. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಲಿಖಿತಾ ಪರಿಚಯವಾಗಿತ್ತು. ಒಂದೇ ಊರಿನವರಾದ ಕಾರಣ ಇಬ್ಬರು ಆತ್ಮೀಯತೆ ಬೆಳೆಸಿಕೊಂಡು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಬಳಿಕ ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಜತೆಗೆ ವಾಸಿಸುತ್ತಿದ್ದರು.
ಕಳೆದ 6 ತಿಂಗಳ ಹಿಂದೆ ಸುಬ್ರಹ್ಮಣ್ಯಪುರದ ಎಜಿಎಸ್ ಲೇಔಟ್ ಅರೆಹಳ್ಳಿ ಎಂಬಲ್ಲಿ ಪ್ರೇಮಲತಾ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗಿದ್ದರು. ಆ ವೇಳೆ ಮನೆ ಮಾಲೀಕರ ನಂಬಿಕೆ ಗಿಟ್ಟಿಸಿಕೊಂಡು ಆಗಾಗ ಅವರ ಮನೆಗೆ ಭೇಟಿ ಕೊಡುತ್ತಿದ್ದರು. ಪ್ರೇಮಲತಾ ತಮ್ಮ ಮನೆಯಲ್ಲಿ ಚಿನ್ನಾಭರಣ ಇಡುತ್ತಿದ್ದ ಸ್ಥಳವನ್ನು ಪ್ರೇಮಿಗಳು ಗಮನಿಸಿದ್ದರು. ಇತ್ತೀಚೆಗೆ ಇವರ ಮನೆ ಖಾಲಿ ಮಾಡಿ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತ ಊರಿನಲ್ಲಿ ಪರಿಚಿತರ ಬಳಿ ಮಾಡಿದ್ದ 2.50 ಲಕ್ಷ ಸಾಲ ತೀರಿಸಲು ಸುಮಂತ್ ಚಿಂತಿಸುತ್ತಿದ್ದ. ಜತೆಗೆ ಇಬ್ಬರಿಗೂ ಮೋಜು-ಮಸ್ತಿಗೆ ದುಡ್ಡಿನ ಅಗತ್ಯತೆ ಇತ್ತು. ಯಾವುದೇ ಕೆಲಸ ಮಾಡದೇ ದುಡ್ಡು ಸಂಪಾದಿಸುವುದು ಹೇಗೆ ಎಂದು ಚಿಂತಿಸುತ್ತಿದ್ದಾಗ ಇವರಿಗೆ ಹೊಳೆದಿದ್ದು ಪ್ರೇಮಲತಾ ಮನೆಗೆ ಕನ್ನ ಹಾಕಿ ಚಿನ್ನ ಲಪಟಾಯಿಸುವುದು.
ಕದ್ದ ಚಿನ್ನ ಅಡವಿಟ್ಟು ಮೋಜು-ಮಸ್ತಿ: ಪ್ರತಿದಿನ ಮುಂಜಾನೆ ಪ್ರೇಮಲತಾ ಪುತ್ರ ಮನೆಯ ಹಿಂಬದಿ ಬಾಗಿಲು ತೆರೆದುಕೊಂಡು ಕೆಲಸಕ್ಕೆ ಹೋಗುವುದನ್ನು ಅರಿತಿದ್ದ ಪ್ರೇಮಿಗಳು ಕೆಲ ದಿನಗಳ ಹಿಂದೆ ಮುಂಜಾನೆ ಇಲ್ಲಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕಾಂಪೌಂಡ್ ಜಿಗಿದು ಮನೆಯೊಳಗೆ ಪ್ರವೇಶಿಸಿ ಬೀರುವಿನಲಿಟ್ಟಿದ್ದ 4 ಲಕ್ಷ ರೂ. ಒಡವೆ ದೋಚಿದ್ದರು. ಕದ್ದ ಚಿನ್ನವನ್ನು ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಅಡವಿಟ್ಟು ದುಡ್ಡು ಪಡೆದಿದ್ದರು. ಬಂದ ದುಡ್ಡಿನಲ್ಲಿ 2.50 ಲಕ್ಷ ರೂ. ಸಾಲ ತೀರಿಸಿದ್ದರು. ಉಳಿದ ಹಣದಲ್ಲಿ ಬೆಂಗಳೂರಿನಿಂದ ಗೋವಾ, ಶಿವಮೊಗ್ಗದಲ್ಲಿ ಸುತ್ತಾಡಿ ಮೋಜು-ಮಸ್ತಿ ಮಾಡಿದ್ದರು.
ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ: ಮನೆ ಮಾಲೀಕರಾದ ಪ್ರೇಮಲತಾ ಕೆಲ ದಿನಗಳ ಹಿಂದೆ ಒಡವೆ ಪರಿಶೀಲಿಸಿದಾಗ ಕಾಣಿಸಿರಲಿಲ್ಲ. ಆತಂಕಗೊಂಡು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು, ಕೃತ್ಯ ನಡೆದ ಮನೆಯ ಸುತ್ತ-ಮುತ್ತಲಿನ ಸಿಸಿ ಕ್ಯಾಮರಾ ಪರಿಶೀಲಿಸಿದ್ದರು. ಆ ವೇಳೆ ಮನೆಯ ಹಿಂಬಾಗದ ರಸ್ತೆಯೊಂದರಲ್ಲಿ ಆರೋಪಿಗಳು ಓಡಿ ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಅನುಮಾನದ ಮೇರೆಗೆ ಶಿವಮೊಗ್ಗದಲ್ಲಿದ್ದ ಇಬ್ಬರನ್ನೂ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತೂಂದು ಅಪರಾಧ ಕೃತ್ಯವೆಸಗಲು ಸಂಚು ರೂಪಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.