Crime: ಮದುವೆಗೆ ಒಪ್ಪದ 2 ಮಕ್ಕಳ ತಾಯಿಯ ಹತ್ಯೆ
Team Udayavani, Mar 31, 2024, 1:03 PM IST
ಬೆಂಗಳೂರು: ಮದುವೆಗೆ ನಿರಾಕರಿಸಿದ ಪ್ರೇಯಸಿ ಯನ್ನು ಪ್ರಿಯಕರನೇ ಸಾರ್ವಜನಿಕವಾಗಿ ಮೈದಾನದಲ್ಲಿ ಕತ್ತು ಸೀಳಿ ಕೊಲೆಗೈದಿರುವ ಘಟನೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಕೋಲ್ಕತ್ತ ಮೂಲದ ಫರೀದಾ ಖಾನಂ (42) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ, ಜಯನಗರ ನಿವಾಸಿ ಗಿರೀಶ್ ಅಲಿಯಾಸ್ ರಿಯಾನ್ ಖಾನ್ (35) ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ.
ಫರೀದಾ ಖಾನಂ ಪತಿ ನಿಧನರಾಗಿದ್ದು ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಮತ್ತೂಂದೆಡೆ 2011ರಲ್ಲಿ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಗಿರೀಶ್, ತನ್ನ ಹೆಸರನ್ನು ರಿಯಾನ್ ಖಾನ್ ಎಂದು ಬದಲಿಸಿಕೊಂಡು ನಗರದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಈ ಮಧ್ಯೆ 2022ರಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ ಫರೀದಾ ಖಾನಂ ಜಯನಗರದ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸ್ಪಾಗೆ ಬಂದಿದ್ದ ಆರೋಪಿ ಆಕೆ ಯನ್ನು ಪರಿಚಯಿಸಿಕೊಂಡಿದ್ದು ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾ.3ರಂದು ಕಾರ್ಯನಿಮಿತ್ತ ಕೋಲ್ಕತ್ತಾಗೆ ಹೋಗಿದ್ದ ಫರೀದಾ ಖಾನಂ, ಪ್ರಿಯಕರನ ಜನ್ಮದಿನದ ಹಿನ್ನೆಲೆಯಲ್ಲಿ ಮಾ.28ರಂದು ಬೆಂಗಳೂರಿಗೆ ಬಂದು ಜೆ.ಪಿ.ನಗರದಲ್ಲಿರುವ ಹೋಟೆಲ್ವೊಂದರಲ್ಲಿ ರೂಮ್ ಬಾಡಿಗೆ ಪಡೆದುಕೊಂಡು ವಾಸವಾಗಿದ್ದಳು.
ಮಾ.29ರಂದು ಪ್ರಿಯಕರ ರಿಯಾನ್ ಖಾನ್ ಜನ್ಮದಿನದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಸಿನಿಮಾ ಪಾರ್ಕ್, ಶಾಪಿಂಗ್ ಮಾಲ್, ಹೋಟೆಲ್, ಪಾರ್ಕ್ ಗಳಲ್ಲಿ ಸುತ್ತಾಡಿದ್ದಾರೆ. ಈ ವೇಳೆಯೇ ಆರೋಪಿ, ಆಕೆಗೆ ಕೆಲಸ ಬಿಟ್ಟು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಆಕೆ ಜತೆ ಜಗಳ ಮಾಡಿಕೊಂಡು ರಾತ್ರಿ ರೂಮ್ಗೆ ಬಿಟ್ಟು ಹೋಗಿದ್ದಾನೆ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮತ್ತೆ ರೂಮ್ ಬಳಿ ಬಂದು ಪ್ರೇಯಸಿಯನ್ನು ಕರೆದೊಯ್ದು, ಹೋಟೆಲ್ನಲ್ಲಿ ತಿಂಡಿ ತಿಂದು, ಬಳಿಕ ಮಾಲ್ಗೆ ಕರೆದೊಯ್ದಿದ್ದಾನೆ. ಮಧ್ಯಾಹ್ನವೂ ಹೋಟೆಲ್ನಲ್ಲಿ ಊಟ ಮಾಡಿ, ಜಯನಗರ, ಜೆ.ಪಿ.ನಗರದ ನಾಲ್ಕೈದು ಪಾರ್ಕ್ಗಳಲ್ಲಿ ಸುತ್ತಾಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಜಯನಗರದ ಶಾಲಿನಿ ಪಾರ್ಕ್ಗೆ ಕರೆದೊಯ್ದಿದ್ದಾನೆ. ಈ ವೇಳೆ ಮತ್ತೂಮ್ಮೆ, ಕೆಲಸ ಬಿಟ್ಟು, ತನ್ನೊಂದಿಗೆ ಮದುವೆಯಾಗು. ಪ್ರತ್ಯೇಕ ಜೀವನ ಆರಂಭಿಸೋಣ ಎಂದಿದ್ದಾನೆ. ಆಗ ಆಕೆ, ಕೆಲಸ ಬಿಡಲು ಸಾಧ್ಯವಿಲ್ಲ ಎಂದಿದ್ದಾಳೆ. ಈ ವಿಚಾರಕ್ಕೆ ಕೋಪಗೊಂಡ ಆರೋಪಿ ಕೊಲೆಗೈಯಲೆಂದೆ ತಂದಿದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆಗೈದಿದ್ದಾನೆ.
ಬಳಿಕ ಆತನೇ ಚಾಕು ಸಮೇತ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.