ರಾಜ್ಯಕ್ಕೆ 5 ಹೊಸ ಇಎಸ್ಐ ಆಸ್ಪತ್ರೆ: ಬಂಡಾರು ದತ್ತಾತ್ರೇಯ
Team Udayavani, May 17, 2017, 11:01 AM IST
ಬೆಂಗಳೂರು: ಕರ್ನಾಟಕದಲ್ಲಿ ಹೊಸದಾಗಿ ಐದು ಇಎಸ್ಐ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ. ಇಂದಿರಾನಗರದಲ್ಲಿರುವ ಕಾರ್ಮಿಕ ರಾಜ್ಯ ವಿಮಾ ನಿಗಮದ (ಇಎಸ್ಐಸಿ) ನರ್ಸಿಂಗ್ ಕಾಲೇಜು ಮತ್ತು ನೂತನ ಸಭಾಂಗಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಬೊಮ್ಮಸಂದ್ರದಲ್ಲಿ 200 ಹಾಸಿಗೆ ಹಾಗೂ ಶಿವಮೊಗ್ಗ, ಹಾರೋಹಳ್ಳಿ, ನರಸಾಪುರ ಮತ್ತು ಬಳ್ಳಾರಿಯಲ್ಲಿ ತಲಾ 100 ಹಾಸಿಗೆಯ ಇಎಸ್ಐ ಆಸ್ಪತ್ರೆ ಆರಂಭಿಸುವುದಾಗಿ ಘೋಷಿಸಿದರು. ಬೆಂಗಳೂರಿನ ಬೊಮ್ಮಸಂದ್ರದಲ್ಲಿ (ಬೊಮ್ಮನಹಳ್ಳಿ) 200 ಬೆಡ್ ಇಎಸ್ಐ ಆಸ್ಪತ್ರೆಗೆ 150 ಕೋಟಿ ರೂ. ಮಂಜೂರು ಮಾಡಲಾಗುವುದು. ಹಾಗೆಯೇ ಹುಬ್ಬಳ್ಳಿ ಮತ್ತು ದಾವಣಗೆರೆಯ 50 ಹಾಸಿಗೆಯ ಇಎಸ್ಐ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ದೇಶದ 1500 ಇಎಸ್ಐ ಔಷಧಾಲಯಗಳಲ್ಲಿ 500 ಔಷಧಾಲಯವನ್ನು ಆರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲಾಗುತ್ತಿದೆ. ಈ ದಿಶೆಯಲ್ಲಿ ರಾಜ್ಯದ 71 ಇಎಸ್ಐ ಔಷಧಾಲಯಗಳ ಪೈಕಿ ಬಸವನಗುಡಿ, ಬೊಮ್ಮಸಂದ್ರ, ಕೆ.ಆರ್.ಪುರಂ, ರಸಲ್ ಮಾರ್ಕೇಟ್, ರಾಮನಗರದ ಚೆನ್ನಪಟ್ಟಣ, ಮೈಸೂರಿನ ಎನ್.ಆರ್.ಮೌಲಾ, ನಂಜನಗೂಡು, ಬಳ್ಳಾರಿ, ಕೋಲಾರಿ, ಹಾಸನ, ಕಲಬುರಗಿ ಸೇರಿದಂತೆ ಒಟ್ಟು 12 ಇಎಸ್ಐ ಔಷಧಾಲಯವನ್ನು 6 ಹಾಸಿಗೆಯ ಆಸ್ಪತ್ರೆಯಾಗಿ ಮಾಡಲಿದ್ದೇವೆ ಮತ್ತು ಇದಕ್ಕಾಗಿ 100 ಕೋಟಿ ಮಂಜೂರು ಮಾಡಲಾಗುತ್ತದೆ. ಈ ಎಲ್ಲಾ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಶೀಘ್ರವೇ ನೆರವೇರಿಸಲಿದ್ದೇವೆ ಎಂದರು.