ರೌಡಿಶೀಟರ್ ಲಕ್ಷ್ಮಣನ ಭೀಕರ ಕೊಲೆ
Team Udayavani, Mar 8, 2019, 6:00 AM IST
ಬೆಂಗಳೂರು: ನಗರ ಹಾಗೂ ಹಳೇ ಮೈಸೂರು ಭಾಗದ ಕುಖ್ಯಾತ ರೌಡಿಶೀಟರ್ಗಳಾದ ರಾಮ-ಲಕ್ಷ್ಮಣ ಸೋದರರ ಪೈಕಿ ಲಕ್ಷ್ಮಣನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದ ಭೀಕರ ಘಟನೆ ಮಹಾಲಕ್ಷ್ಮೀ ಲೇಔಟ್ನ ಗೌತಮನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಇನೋವಾ ಕಾರನ್ನು ಒಬ್ಬನೇ ಚಾಲನೆ ಮಾಡಿಕೊಂಡು ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಹಿಂಭಾಗದ ಗೌತಮನಗರದ ರೆನೆಸಾನ್ಸ್ ಟೆಂಪಲ್ ಬೆಲ್ಸ್ ಅಪಾರ್ಟ್ಮೆಂಟ್ ಮುಂಭಾಗ ಹೋಗುತ್ತಿದ್ದ ಲಕ್ಷ್ಮಣನನ್ನು ಸ್ಕಾರ್ಪಿಯೋ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಇನೋವಾ ಕಾರಿನ ಗಾಜುಗಳನ್ನು ಧ್ವಂಸಗೊಳಿಸಿ ಚಾಲಕನ ಸೀಟ್ನಲ್ಲಿ ಕುಳಿತಿದ್ದ ಲಕ್ಷ್ಮಣನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ದಾಳಿಯಲ್ಲಿ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಲಕ್ಷ್ಮಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು, ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಒಬ್ಬನೇ ಬಂದಿದ್ದು ಯಾಕೆ?: ಕಳೆದ ಆರೇಳು ವರ್ಷಗಳಿಂದ ಭೂಗತ ಜಗತ್ತಿನಲ್ಲಿ ತನ್ನದೆ ಕೋಟೆ ಸೃಷ್ಟಿಸಿಕೊಂಡಿದ್ದ ಲಕ್ಷ್ಮಣ ಹಾಗೂ ಸಹೋದರ ರಾಮನಿಗೆ ಕೆಲ ರೌಡಿಶೀಟರ್ಗಳಿಂದ ಪ್ರಾಣ ಬೆದರಿಕೆ ಇತ್ತು. ಹೀಗಾಗಿ ಮನೆಯಿಂದ ಎಂದಿಗೂ ಒಬ್ಬನೇ ಹೊರಗಡೆ ಬರುತ್ತಿರಲಿಲ್ಲ. ಆದರೆ, ಗುರುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಒಬ್ಬನೇ ತನ್ನ ಕಾರನ್ನು ಚಾಲನೆ ಮಾಡಿಕೊಂಡು ಬಂದಿದ್ದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಇಸ್ಕಾನ್ ದೇವಾಲಯ ಸಮೀಪ ಇರುವ ಟೊಯೋಟಾ ಶೊರೂಂಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಂಗೇರಿ ಬಳಿಯಿರುವ ಮನೆಯಿಂದ ಹೊರಟ ಲಕ್ಷ್ಮಣ, ಮಾರ್ಗ ಮಧ್ಯೆ ಹೋಟೆಲ್ಗೆ ಹೋಗಿದ್ದ. ನಂತರ ಮಹಾಲಕ್ಷ್ಮೀ ಲೇಔಟ್ ಕಡೆ ಬರುತ್ತಿದ್ದ ಎಂದು ತಿಳಿದು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೇಮಂತ್ ಎಂಬಾತ ವಶಕ್ಕೆ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಲಕ್ಷ್ಮಣನ ಮನೆ ಸಮೀಪದ ನಿವಾಸಿ ಹೇಮಂತ್ ಎಂಬಾತ ಸ್ಥಳಕ್ಕೆ ಧಾವಿಸಿ ಜೋರಾಗಿ ಅಳಲಾರಂಭಿಸಿದ. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಲಕ್ಷ್ಮಣನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಕೊಲೆ ಬೆದರಿಕೆ, ಜಮೀನು ಕಬಳಕೆ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜ್ಞಾನಭಾರತಿ, ಕಾಮಾಕ್ಷಿಪಾಳ್ಯ, ಕೆಂಗೇರಿ ಠಾಣೆಗಳಲ್ಲಿ ರೌಟಿಪಟ್ಟಿ ಕೂಡ ತೆರೆಯಲಾಗಿತ್ತು. ಇತ್ತೀಚೆಗಷ್ಟೇ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಚಾಮರಾಜಪೇಟೆಯ ಸಿಸಿಬಿ ಕೇಂದ್ರ ಕಚೇರಿಯಲ್ಲಿ ನಡೆಸಿದ್ದ ರೌಡಿಗಳ ಪರೇಡ್ನಲ್ಲೂ ಲಕ್ಷ್ಮಣ ಪಾಲ್ಗೊಂಡಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿತ್ತು.
ಈ ಮಧ್ಯೆ ಪ್ರಾಣ ಬೆದರಿಕೆ ಹಾಕಿ ಭೂಮಿ ಕಬಳಿಸಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಮಿರ್ಲೆ ವರದರಾಜ್, ಆತನ ಸಹಚರ ಲಕ್ಷ್ಮಣ ಹಾಗೂ ತಂಡದ ಹಲವರನ್ನು ಕೋಕಾ ಕಾಯ್ದೆ ಅಡಿ ಬಂಧಿಸಲಾಗಿತ್ತು. ಜನವರಿಯಲ್ಲಿ ಜಾಮೀನು ಪಡೆದು ಹೊರಬಂದ ಲಕ್ಷ್ಮಣ ಮತ್ತೆ ತನ್ನ ಅವ್ಯವಹಾರಗಳಲ್ಲಿ ತೊಡಗಿದ್ದ ಎಂದು ಪೊಲೀಸರು ಹೇಳಿದರು.
ರಾಜಕೀಯ ಹಿನ್ನೆಲೆ: ರಿಯಲ್ ಎಸ್ಟೇಟ್ ದಂಧೆ ಜತೆಗೆ ರಾಜಕೀಯದಲ್ಲೂ ಲಕ್ಷ್ಮಣ ಗುರುತಿಸಿಕೊಂಡಿದ್ದ. ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಆತ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಕೂಡ ಆಗಿದ್ದ. ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದ. ಪಕ್ಷ ಟಿಕೆಟ್ ಕೊಟ್ಟಿರಲಿಲ್ಲ. ಆದರೆ, ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದ. ಕೊನೆಗೆ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ನಂತರ ಬೆಂಗಳೂರಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜತೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ಹೇಳಿದರು.
ಸಹೋದರರ ದರ್ಬಾರು: ಹುಲಿಯೂರು ದುರ್ಗ ಮೂಲದ ರಾಮ ಮತ್ತು ಲಕ್ಷ್ಮಣ ಸಹೋದರ 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಬಳಿಕ ರೌಡಿಶೀಟರ್ ಮುಲಾಮನ ಜತೆ ಗುರುತಿಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿದ್ದರು. ಈ ಮಧ್ಯೆ 2006ರಲ್ಲಿ ಕೊರಂಗು ಕೃಷ್ಣನ ಸಹಚರ ಮಚ್ಚ ಅಲಿಯಾಸ್ ಮಂಜನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಲಕ್ಷ್ಮಣ ಪ್ರಮುಖ ಆರೋಪಿಯಾಗಿದ್ದ.
ಈ ಮೂಲಕ ಬೆಂಗಳೂರಿನ ಭೂಗತ ಜಗತ್ತಿಗೆ ಕಾಲಿಟ್ಟ ಸಹೋದರು, ತಮ್ಮದೆ ಭದ್ರಕೋಟೆ ಕಟ್ಟಿಕೊಂಡಿದ್ದರು. ಆದರೆ, ಲಕ್ಷ್ಮಣನ ವಿರುದ್ಧ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಜತೆಗೆ ರಾಜಕೀಯ ಮುಖಂಡರ ಜತೆ ಆತ್ಮೀಯತೆ ಹೊಂದಿದ್ದ ಲಕ್ಷ್ಮಣ, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮೈಸೂರು,ಮದ್ದೂರು ಸೇರಿ ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿದ್ದ. ಹೀಗಾಗಿ ಆತನ ಹತ್ಯೆಗೆ ಟ್ಯಾಮಿ ಜಗ್ಗಿ, ಪಾಯನ್ಸ್ ರಾಮ, ಕುರುಪು ಲೋಕಿ, ಮಚ್ಚ ಅಲಿಯಾಸ್ ಮಂಜನ ಸಹಚರರು ಸೇರಿ ಕೆಲ ರೌಡಿಶೀಟರ್ಗಳ ಗುಂಪು ಹೊಂಚು ಹಾಕುತ್ತಿತ್ತು.
ಒಂದು ಕಾಲದಲ್ಲಿ ಬೆಂಗಳೂರನ್ನೆ ಬೆಚ್ಚಿಬೀಳಿಸಿದ ರೌಡಿ ಲಕ್ಷ್ಮಣನ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮರಣೋತ್ತರ ಪರೀûಾ ಕೊಠಡಿಯಲ್ಲಿ ಇಡಲಾಗಿತ್ತು. ದುಷ್ಕರ್ಮಿಗಳ ಮಾರಕಾಸ್ತ್ರಗಳ ಏಟಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರನ ಕಂಡು ರಾಮ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಪತಿಯ ನೆನೆದು ಪತ್ನಿ ರೋಧಿಸುತ್ತಿದ್ದರು. ಅಪ್ಪನ ನೆನೆಯುತ್ತಿದ್ದ ಪುತ್ರಿಯ ಆಕ್ರಂದನ ಮುಗಿಲುಮುrಟ್ಟಿತ್ತು. ರಾತ್ರಿ 7.30ರ ಸುಮಾರಿಗೆ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ಪೊಲೀಸ್ ಭದ್ರತೆ: ಆಸ್ಪತ್ರೆ ಮುಂಭಾಗದ ಸೇರಿದ್ದ ಲಕ್ಷ್ಮಣದ 300ಕ್ಕೂ ಹೆಚ್ಚು ಬೆಂಬಲಿಗರನ್ನು ಕಂಡ ಪೊಲೀಸರು ಒಂದು ಕ್ಷಣ ಅಚ್ಚರಿಗೊಂಡರು. ಹೀಗಾಗಿ ಕೆಲ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿದ್ದು, ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಿದ್ದರು. ಅಲ್ಲದೆ, ಭದ್ರತೆ ಕೂಡ ನೀಡಲಾಗಿತ್ತು. ಕೆಂಗೇರಿಯ ಆತನ ಮನೆ ಬಳಿಯೂ ಪೊಲೀಸ್ ಭದ್ರತೆ ನೀಡಿರುವುದಾಗಿ ಪೊಲೀಸರು ಹೇಳಿದರು.
ಸಾರ್ವಜನಿಕರಲ್ಲಿ ಆತಂಕ: ಮಧ್ಯಾಹ್ನದ ಸುಡು ಬಿಸಿಲು. ಸಾರ್ವಜನಿಕರು ಅಂತಿಂದಿತ್ತ ಓಡಾಡುತ್ತಿದ್ದರು. ಇದೇ ವೇಳೆ ಸಿನಿಮಿಯ ರೀತಿಯಲ್ಲಿ ಲಕ್ಷ್ಮಣನ ಕಾರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳನ್ನು ಬೀಸಿ, ಲಕ್ಷ್ಮಣನನ್ನು ಕೊಲೆಗೈದು ಕ್ಷಣಾರ್ಧದಲ್ಲಿ ಪರಾರಿಯಾದರು. ಘಟನೆಯನ್ನು ಕಣ್ಣೆದುರೆ ಕಂಡ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮತ್ತೂಂದೆಡೆ ದಾರಿಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಭಯಗೊಂಡು ಓಡಲು ಆರಂಭಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ನಾಕಾಬಂದಿ ಹಾಕಿ ಸ್ಕಾರ್ಪಿಯೋ ಕಾರು ಪತ್ತೆಗೆ ಮುಂದಾದರು. ಅಲ್ಲದೆ ಘಟನಾ ಸ್ಥಳ, ಲಕ್ಷ್ಮಣ ಬಂದ ಮಾರ್ಗದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಈ ಮಧ್ಯೆ ಘಟನೆ ನಡೆದ ಅಪಾರ್ಟ್ಮೆಂಟ್ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಇದ್ದ ಡಿವಿಆರ್ ಅನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗ್ಗೆ ಮನೆಯಿಂದ ಹೊರಟ ಲಕ್ಷ್ಮಣ, ಎರಡು ದಿನ ಇರುವುದಿಲ್ಲ ಎಂದು ಪತ್ನಿಗೆ ಹೇಳಿ ಹೋಗಿದ್ದಾನೆ. ಆದರೆ, ಎಲ್ಲಿಗೆ ಎಂಬುದು ಗೊತ್ತಿಲ್ಲ. ಹೀಗಾಗಿ ಲಕ್ಷ್ಮಣ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸಿಸಿಬಿ ಅಧಿಕಾರಿಗಳಿಂದಲೂ ಮಾಹಿತಿ ತರಿಸಿಕೊಳ್ಳಲಾಗಿದೆ.
-ಎನ್.ಶಶಿಕುಮಾರ್, ಉತ್ತರ ವಿಭಾಗದ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ