ಪಾಲಿಕೆಯಿಂದ ಪ್ರತ್ಯೇಕ ಹಸಿ ಕಸ ಸಂಗ್ರಹಕ್ಕೆ ಬದ್ಧ
Team Udayavani, Aug 8, 2020, 9:08 AM IST
ಬೆಂಗಳೂರು: ನಗರದಲ್ಲಿ ಮನೆ- ಮನೆಗಳಿಂದ ಪ್ರತ್ಯೇಕ ಹಸಿಕಸ ಸಂಗ್ರಹ ಮಾಡುವ ಟೆಂಡರ್ಗೆ ಪಾಲಿಕೆ ಸಮ್ಮತಿ ನೀಡಿದ್ದು, ಈ ಸಂಬಂಧ 45 ಟೆಂಡರ್ದಾರರಿಗೆ ಕಾರ್ಯಾದೇಶ ನೀಡುವಂತೆ ಮೇಯರ್ ಎಂ.ಗೌತಮ್ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಹೈಕೋರ್ಟ್ನಲ್ಲಿ ಕಸ ವಿಲೇವಾರಿ ಟೆಂಡರ್ ವಿಚಾರವಾಗಿ ಆ.12ರಂದು ವಿಚಾರಣೆ ನಡೆಯಲಿದ್ದು, ಈಗಾಗಲೇ ಕೋರ್ಟ್ ಆದೇಶ ಪಾಲನೆಯಾಗಿಲ್ಲ ಎಂದು ಕೋರ್ಟ್ ಪಾಲಿಕೆಗೆ ನ್ಯಾಯಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.ಈ ಸಂಬಂಧ ಮೇಯರ್ ಎಂ.ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಷ್ಟೇ ಈ ಸಭೆಗೆ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಟೆಂಡರ್ದಾರರಿಗೆ ತುರ್ತಾಗಿ ಕಾರ್ಯಾದೇಶ ನೀಡಬೇಕಾಗಿದೆ ಎಂದು ಮೇಯರ್ ಅವರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಬಿಬಿಎಂಪಿಯ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.
700 ಕೋಟಿ ವೆಚ್ಚ : ಇದೀಗ ಮನೆ ಮನೆ ಪ್ರತ್ಯೇಕ ಹಸಿಕಸ ಸಂಗ್ರಹ ಮಾಡುವ ಟೆಂಡರ್ಗೆ ಬಿಬಿಎಂಪಿ ಅನುಮೋದನೆ ನೀಡದೆ, ಇಂದೋರ್ ಮಾದರಿಗೆ ಮೊರೆ ಹೋಗಿದ್ದರೆ ಪಾಲಿಕೆಗೆ ವಾರ್ಷಿಕ 700 ಕೋಟಿ ರೂ. ವೆಚ್ಚವಾಗುತ್ತಿತ್ತು. ಇದೀಗ ಹಸಿಕಸ ಸಂಗ್ರಹ ಟೆಂಡರ್ಗೆ ಅನುಮೋದನೆ ನೀಡುವುದರಿಂದ ವಾರ್ಷಿಕ 350 ಕೋಟಿ ರೂ. ಅಷ್ಟೇ ವೆಚ್ಚವಾಗಲಿದೆ. ಅಲ್ಲದೆ, ಈ ಟೆಂಡರ್ಗೆ ಅನುಮೋದನೆ ನೀಡುವುದರಿಂದಾಗಿ ಒಣಕಸ ಸಂಗ್ರಹ ಮಾಡಿದರೆ ಗುತ್ತಿಗೆದಾರರಿಗೆ ಹಣ ನೀಡಬೇಕಾಗಿಲ್ಲ.