ಎಸ್ಟಿಪಿ ನೀರು ಬಳಕೆಗೆ ಮಡಿವಂತಿಕೆ
Team Udayavani, Jul 23, 2019, 3:09 AM IST
ಬೆಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ (ಎಸ್ಟಿಪಿ) ಸಂಸ್ಕರಿಸಿದ ನೀರನ್ನು ಕಾಮಗಾರಿಗಳಿಗೆ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡುವ ಜಲಮಂಡಳಿಯು ಇಂದಿಗೂ ತನ್ನ ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನು ಬಳಸುತ್ತಿಲ್ಲ. ಈ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರಿನ ವಿಚಾರದಲ್ಲಿ ಜಲಮಂಡಳಿಯ ನಡೆ “ಹಿತ್ತಲ ಗಿಡ ಮನೆಗೆ ಮದ್ದಲ್ಲ’ ಎಂಬಂತಾಗಿದೆ.
ದಿನೇ ದಿನೆ ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಯಷ್ಟು ನೀರನ್ನು ಪೂರೈಸಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಶುದ್ಧ ನೀರಿನ ಉಳಿಸುವ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಅಳವಡಿಕೆ ಹಾಗೂ ಎಸ್ಟಿಪಿ ನೀರನ್ನು ಬಳಸುವಂತೆ ಜಲಮಂಡಳಿಯೇ ಬಳಕೆದಾರರಿಗೆ ನಿಯಮ ಜಾರಿಗೊಳಿಸಿರುವುದಲ್ಲದೆ, ಪಾಲಿಸವರಿಗೆ ಸಾವಿರಾರು ರೂ. ದಂಡ ಸಹ ವಿಧಿಸುತ್ತಿದೆ.
ಆದರೆ, ಜಲಮಂಡಳಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಎಸ್ಟಿಪಿ ನೀರನ್ನೇ ಬಳಸಬೇಕು ಎಂಬ ಕುರಿತು ಮೂರು ವರ್ಷಗಳ ಹಿಂದೆಯೇ ಸುತ್ತೋಲೆ ಹೊರಡಿಸಿದ್ದರೂ, ಈವರೆಗೂ ಅದನ್ನು ಸಮರ್ಪಕವಾಗಿ ಪಾಲಿಸಲು ಮುಂದಾಗಿಲ್ಲ. ಇದರಿಂದಾಗಿ ಇಂದಿಗೂ ನಗರದ ವಿವಿಧೆಡೆ ಜಲಮಂಡಳಿ ಕೈಗೊಂಡಿರುವ ಕಾಮಗಾರಿಗಳಿಗೆ ನಿತ್ಯ ಸಾವಿರಾರು ಲೀ. ಶುದ್ಧ ನೀರು ಬಳಕೆಯಾಗುತ್ತಿದೆ.
2016ರಲ್ಲಿ ವಿಜಯ್ ಭಾಸ್ಕರ್ ಅವರು ಜಲಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಲಮಂಡಳಿಯ ಎಲ್ಲಾ ಕಾಮಗಾರಿಗಳಿಗೆ ಎಸ್ಟಿಪಿ ನೀರು ಬಳಸುವಂತೆ ಸೂಚನೆ ನೀಡಿದ್ದರು. ಈ ಕುರಿತು ಸುತ್ತೋಲೆ ಹೊರಡಿಸುವ ಜತೆಗೆ ಜಲಮಂಡಳಿಯೇ ತ್ಯಾಜ್ಯ ಸಂಸ್ಕರಣಾ ಘಟಕದ ನೀರನ್ನು ಬಳಸಿ ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದ್ದರು. ಆದರೆ, ಇಂದಿಗೂ ಜಲಮಂಡಳಿಯು ತನ್ನ ಕಾಮಗಾರಿಗಳಿಗೆ ಶುದ್ಧ ನೀರು ಬಳಸಿ, ಸಾರ್ವಜನಿಕರಿಗೆ ಮಾತ್ರ ಬಳಸುವಂತೆ ಹೇಳುತ್ತಿದೆ. ಜಲಮಂಡಳಿಯ ಈ ನಡೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಇನ್ನು ಮುಂದೆ ಕಡ್ಡಾಯ ಬಳಕೆಗೆ ಕ್ರಮ: “ಜಲಮಂಡಳಿ ಕಾಮಗಾರಿಗೆ ಕಡ್ಡಾಯವಾಗಿ ಎಸ್ಟಿಪಿ ನೀರು ಬಳಸಬೇಕು ಎಂಬ ನಿಯಮ ಇದೆ. ಆದರೆ, ಕಾಮಗಾರಿ ಸ್ಥಳಗಳಿಗೆ ಎಸ್ಟಿಪಿ ನೀರು ಪೂರೈಸಲು ಸೂಕ್ತ ಸೌಲಭ್ಯವಿರಲಿಲ್ಲ. ಸ್ವಂತ ವಾಹನ ಬಳಸಿ ನೀರನ್ನು ತರಿಸಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದರು. ಸದ್ಯ ಜಲಮಂಡಳಿಯೇ ನೀರು ಪೂರೈಸಲು ವಾಹನ ಸೌಲಭ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಎಸ್ಟಿಪಿ ನೀರನ್ನು ಬಳಸಲು ಕ್ರಮ ಕೈಗೊಳ್ಳಲಿದೆ. ಉಳಿದಂತೆ ಎಸ್ಟಿಪಿ ಇದ್ದ ಕಡೆ ನಡೆದ ಕಾಮಗಾರಿಯಲ್ಲಿ ಎಸ್ಟಿಪಿ ನೀರನ್ನೇ ಬಳಸಿದ್ದೇವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ.
ಗುತ್ತಿಗೆ ಕಂಪನಿ ಹಿಂದೇಟು: ಎಸ್ಟಿಪಿ ನೀರನ್ನು ಬಳಸಲು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. “ಮೂರು ವರ್ಷಗಳ ಹಿಂದೆ ಕಾಮಗಾರಿಗೆ ಎಸ್ಟಿಪಿ ನೀರನ್ನೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಆ ಕಾಮಗಾರಿಗಳಿಗೆ ಎಸ್ಟಿಪಿ ನೀರನ್ನು ನೀಡಲು ನಿರ್ಧರಿಸಿದ್ದರು. ಆದರೆ, ಆ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಾಗೂ ಗುತ್ತಿಗೆದಾರರು ಎಸ್ಟಿಪಿ ನೀರನ್ನು ಬಳಸಲು ಹಿಂದೇಟು ಹಾಕಿದ್ದರು.
ಜತೆಗೆ ಎಸ್ಟಿಪಿ ನೀರನ್ನು ಕಾಮಗಾರಿ ಸ್ಥಳಕ್ಕೆ ಪೂರೈಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಅಂದು ಎಸ್ಟಿಪಿ ನೀರು ಬಳಸುಲು ಸಾಧ್ಯವಾಗಿರಲಿಲ್ಲ. ಹೊಸ ಕಾಮಗಾರಿ ಆರಂಭಿಸುವ ವೇಳೆ ಗುತ್ತಿಗೆ ನೀಡುವ ಕಂಪನಿ ಜತೆ ಎಸ್ಟಿಪಿ ನೀರನ್ನೇ ಕಾಮಗಾರಿಗೆ ಕಡ್ಡಾಯವಾಗಿ ಬಳಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು’ ಎಂದು ಜಲಮಂಡಳಿ ನಿವೃತ್ತ ಮುಖ್ಯ ಎಂಜಿನಿಯರ್ಗಳು ಹೇಳುತ್ತಾರೆ. ಆದರೆ, ನಂತರದ ದಿನಗಳಲ್ಲಿ ಹೊಸ ಕಾಮಗಾರಿ ವೇಳೆ ಯಾವುದೇ ಒಪ್ಪಂದ ಮಾಡಿಕೊಳ್ಳುವಲ್ಲಿ ಜಲಮಂಡಳಿ ವಿಫಲವಾಗಿದೆ.
ಸಂಸ್ಕರಿತ ನೀರು ಮಾರಾಟ ಆರಂಭ: ಎಸ್ಟಿಪಿ ನೀರಿನ ಬಳಕೆ ಪ್ರೋತಾಹಿಸುವ ಉದ್ದೇಶದಿಂದ ಸದ್ಯ ನೀರು ಸರಬರಾಜು ಮಾಡಲು ಜಲಮಂಡಳಿಯಲ್ಲಿ ಲಭ್ಯವಿರುವ 68 ವಾಹನಗಳ ಪೈಕಿ 10 ವಾಹನಗಳನ್ನು ಬಳಸಲು ಜಲಮಂಡಳಿ ನಿರ್ಧರಿಸಿದೆ. “ಈ ನೀರನ್ನು ಕುಡಿಯಲು ಬಳಸಬಾರದು ಎಂದು ತಿಳಿಯಲು ಕೆಂಪು ಅಥವಾ ಹಸಿರು ಬಣ್ಣದ ಸಾಗಣೆ ವಾಹನ ಬಳಸಲಾಗುತ್ತದೆ. ಸದ್ಯ ನಾಲ್ಕು ವಾಹನ ಬಳಸಲಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. 6,000 ಲೀ. ಸಾಮರ್ಥ್ಯದ ಒಂದು ಟ್ಯಾಂಕರ್ಗೆ 350 ರೂ. ದರ ನಿಗದಿ ಪಡಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಎಸ್ಟಿಪಿ ಕಾಮಗಾರಿಗೂ ಶುದ್ಧ ನೀರು: ಸದ್ಯ ಜಲಮಂಡಳಿಯ ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ಉದ್ದೇಶಿಸಿ ನಗರದ 9 ಪ್ರದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್ಟಿಪಿ) ನಿರ್ಮಿಸುತ್ತಿದೆ. ಒಂದು ವರ್ಷದಿಂದ ಕಾಮಗಾರಿಗಳು ನಡೆಯುತ್ತಿದ್ದು, ಇಲ್ಲೆಲ್ಲಾ ಶುದ್ಧ ನೀರನ್ನೇ ಬಳಸಲಾಗುತ್ತಿದೆ.
ಪ್ರಮುಖವಾಗಿ ಸಾರಕಿ ಕೆರೆ, ಚಿಕ್ಕಬೇಗೂರು, ಉಳಿಮಾವು, ಅಗರ ಕೆರೆ, ಹೆಬ್ಬಳ ಬಳಿ ನಿರ್ಮಿಸಲಾಗುತ್ತಿರುವ ಎಸ್ಟಿಪಿ ಕಾಮಗಾರಿಗಳಿಗೆ ಶುದ್ಧ ನೀರನ್ನೇ ಬಳಸಲಾಗಿದೆ. ಉಳಿದಂತೆ ವೃಷಭಾವತಿ, ದೊಡ್ಡಬೆಲೆ, ಕೆ.ಆರ್.ಪುರದಲ್ಲಿ ನಿರ್ಮಾಣವಾಗುತ್ತಿರುವ ಎಸ್ಟಿಪಿ ಕಾಮಗಾರಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಎಸ್ಟಿಪಿ ನೀದು ಬಳಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. “ಒಂದು ಎಸ್ಟಿಪಿ ಕಾಮಗಾರಿಗೆ ನಿತ್ಯ ಕನಿಷ್ಠ ಒಂದು ಸಾವಿರ ಲೀ. ನೀರು ಬೇಕಾಗುತ್ತದೆ. ಇಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ನೀರು ಬಳಸಿದರೆ ನಿತ್ಯ ಅಂದಾಜು 10 ಸಾವಿರ ಲೀ. ಶುದ್ಧ ನೀರನ್ನು ಉಳಿಸಬಹುದಿತ್ತು’ ಎನ್ನುವುದು ಜಲತಜ್ಞರ ಅಭಿಪ್ರಾಯ.
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್