2ನೇ ಹಂತಕ್ಕೆ 3,482 ನಾಮಪತ್ರ ಸಲ್ಲಿಕೆ
Team Udayavani, Dec 18, 2020, 7:26 PM IST
ದೇವನಹಳ್ಳಿ: ತಾಲೂಕು ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯ್ತಿಯ ಚುನಾವಣೆಯ ನಾಮಪತ್ರ ಸಲ್ಲಿಕೆಯು ಕೊನೆಯಾಗಿದ್ದು (ಡಿ.11ರಿಂದ 16ರವರೆಗೆ) ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನ ಒಟ್ಟು 45 ಗ್ರಾಮ ಪಂಚಾಯ್ತಿಯ 770 ಸ್ಥಾನಗಳಿಗೆ, ಒಟ್ಟು 3482 ನಾಮಪತ್ರಗಳು ಸಲ್ಲಿಕೆಯಾಗಿವೆ.
ಯಾವುದೇ ಸ್ಥಾನಗಳು ನಾಮಪತ್ರ ಸಲ್ಲಿಸದೆ ಖಾಲಿಉಳಿದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ತಾಲೂಕಿನ 25 ಗ್ರಾಪಂಗಳ 443 ಸ್ಥಾನಗಳಿಗೆ ಎಸ್ಸಿ482, ಎಸ್ಟಿ104, ಹಿಂದುಳಿದ ಎ ವರ್ಗ 211,ಹಿಂದುಳಿದ ಬಿ ವರ್ಗ 69, ಸಾಮಾನ್ಯ ವರ್ಗ 1086, ಒಟ್ಟು-1952 ನಾಮಪತ್ರ ಸಲ್ಲಿಕೆಯಾಗಿದ್ದು, ಯಾವುದೇಸ್ಥಾನಗಳು ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿಲ್ಲ. ದೇವನಹಳ್ಳಿ ತಾಲೂಕಿನ 20 ಗ್ರಾಮ ಪಂಚಾಯಿತಿಗಳ 327ಸ್ಥಾನಗಳಿಗೆ ಅನುಸೂಚಿತ ಜಾತಿ-422, ಅನುಸೂಚಿತ ಪಂಗಡ-146, ಹಿಂದುಳಿದ ಎ ವರ್ಗ-97, ಹಿಂದುಳಿದ ಬಿ ವರ್ಗ-16, ಸಾಮಾನ್ಯ ವರ್ಗ-849, ಒಟ್ಟು-1530 ನಾಮಪತ್ರ ಸಲ್ಲಿಕೆಯಾಗಿದ್ದು, ಯಾವುದೇ ಸ್ಥಾನಗಳುನಾಮಪತ್ರ ಸಲ್ಲಿಸದೆ ಖಾಲಿ ಉಳಿದಿಲ್ಲ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಿ :
ಹೊಸಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಗೆ ನಿಗದಿಪಡಿಸಿರುವ ನೀತಿ ಸಂಹಿತೆಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ವೀಕ್ಷಕ ಎಂ.ವಿ.ಚಂದ್ರಕಾಂತ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಚುನಾವಣಾಧಿಕಾರಿಗಳು, ಸಹಾಯಕಚುನಾವಣಾಧಿ ಕಾರಿಗಳು, ಪೊಲೀಸ್, ಅಬಕಾರಿ ಇಲಾಖಾಧಿಕಾರಿ ಗಳಿಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಹಾಗೂ ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು. ಶಾಂತಿಯುತವಾಗಿ ಚುನಾವಣೆ ನಡೆಸಲು ಸಹಕರಿಬೇಕೆಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸೂಚಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ವಿ.ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥ್ ಗೌಡ, ಪೊಲೀಸ್ ಉಪಅಧೀಕ್ಷಕ ಉಮಾಶಂಕರ್, ಚುನಾವಣಾ ತರಬೇತುದಾರರಾದ ಅಲ್ಲಾಭಕ್ಷ್ ಮಹೇಶ್, ಚುನಾವಣಾ ಶಿರಸ್ತೇದಾರ್ ಲಕ್ಷ್ಮೀನಾರಾಯಣ್ ಇನ್ನಿತರರು ಉಪಸ್ಥಿತರಿದ್ದರು. ಗ್ರಾಪಂ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.