120 ಮಕ್ಕಳು ಪಾಸ್ ಆಗಿದ್ದರೆ ರಾಜ್ಯಕ್ಕೆ ನಂ.1
ಎಸ್ಸೆಸ್ಸೆಲ್ಸಿಯಲ್ಲಿ 3ನೇ ಸ್ಥಾನ ಪಡೆದ ಬೆಂ.ಗ್ರಾಮಾಂತರ ಜಿಲ್ಲೆ ಶಿಕ್ಷಕರಿಗೆ ಸನ್ಮಾನ • ಈ ವರ್ಷ ಪ್ರಥಮ ಸ್ಥಾನದ ಗುರಿ: ಸಿಇಒ
Team Udayavani, May 21, 2019, 7:47 AM IST
ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗ್ರಾಮಾಂತರ ಜಿಲ್ಲೆ ಮೂರನೇ ಸ್ಥಾನ ಬಂದಿರುವುದು ಸಂತಸ ತಂದಿದೆ. ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಮಕ್ಕಳ ಪರಿಶ್ರಮದಿಂದ ಈ ಫಲಿತಾಂಶ ಬಂದಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್.ಲತಾ ಶ್ಲಾಘಿಸಿದರು.
ತಾಲೂಕಿನ ಕಸಬಾ ಹೋಬಳಿ ಆವತಿ ಅನಂತ ವಿಧ್ಯಾನಿಕೇತನ ಶಾಲೆಯ ಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಫ್ರೌಡಶಾಲಾ ಶಿಕ್ಷಕರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ರಾಜ್ಯದ ಫಲಿತಾಂಶದಲ್ಲಿ ಜಿಲ್ಲೆಯು ಮೂರನೇ ಸ್ಥಾನ, ಜಿಲ್ಲೆಯಲ್ಲಿ ದೇವನಹಳ್ಳಿ ತಾಲೂಕು ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದ ಗುಣಾತ್ಮಕ ಫಲಿತಾಂಶದಲ್ಲಿ 5ನೇ ಸ್ಥಾನ ಪಡೆದಿದ್ದಕ್ಕಾಗಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ ಮುಖ್ಯಶಿಕ್ಷಕ, ಶಿಕ್ಷಕಿಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿನಂದನೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಜಿಲ್ಲೆಯ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 2ನೇ ಸ್ಥಾನಕ್ಕೆ ಬರುತ್ತಿದ್ದೇವು. 120 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ವೊದಲನೇ ಸ್ಥಾನಕ್ಕೆ ಬರುತ್ತಿದ್ದೇವು. ಮಕ್ಕಳಲ್ಲಿ ಉತ್ತಮ ಪ್ರತಿಭೆಗಳು ಇವೆ. ಅವುಗಳನ್ನು ಹೊರ ಹಾಕಲು ಈ ಪರೀಕ್ಷೆಯು ಅತ್ಯಂತ ಅನುಕೂಲವಾಗಿದೆ ಎಂದರು.
ಅಭಿನಂದನೆ ಕಾರ್ಯಕ್ರಮ: ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ಮುಖ್ಯ ಶಿಕ್ಷಕರಿಗೆ ಅಭಿನಂದಿಸುವ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಆಗಿನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಮಾಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಅವರು ಹೇಳಿದರು.
ಶೇ.93 ಫಲಿತಾಂಶ: ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ವಿಶೇಷವಾಗಿ ಆಸಕ್ತಿ ವಹಿಸಿ ದೇವನಹಳ್ಳಿ ತಾಲೂಕಿನಲ್ಲಿ ದಾಖಲೆ ಮಾಡಿದ್ದಾರೆ. ಶೇ.93.93 ಉತ್ತಮ ಫಲಿತಾಂಶ ಗಳಿಸಿದ್ದು ರಾಜ್ಯದಲ್ಲಿ ದೇವನಹಳ್ಳಿ ತಾಲೂಕು 5 ನೇ ಸ್ಥಾನಕ್ಕೆ ಬಂದಿದೆ. ಮಕ್ಕಳ ನಿರಂತರ ಅಭ್ಯಾಸದಿಂದ ಈ ಸಾಧನೆ ಮಾಡಲು ಅನುಕೂಲವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯಿಂದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರ ಪಡೆದು ಕೊಳ್ಳಲಾಗಿತ್ತು. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಎಲ್ಲಾ ರೀತಿಯ ಯೋಜನೆಗಳನ್ನು ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸುಧಾರಣೆ: ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಸ್ಥಾನ, ರಾಜ್ಯದಲ್ಲಿ ಗುಣಾತ್ಮಕದಲ್ಲಿ 5ನೇ ಸ್ಥಾನ ಪಡೆಯಲಾಗಿದೆ. ಸಿಇಒ ಲತಾ ಮಾರ್ಗದರ್ಶನದಂತೆ ಡಿಡಿಪಿಐ ಉಸ್ತುವಾರಿಯಲ್ಲಿ ಸತತ ಕಾರ್ಯಕ್ರಮಗಳ ಹಾಗೂ ವಿಶೇಷ ತರಗತಿಗಳ ಪರಿಣಾಮವಾಗಿ ಫಲಿತಾಂಶ ಸುಧಾರಣೆ ಆಗಿದೆ. ಮುಂದಿನ ಫಲಿತಾಂಶದಲ್ಲಿ ಮೊದಲ ಸ್ಥಾನದ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ವಿಶೇಷ ತರಗತಿ: ಡಿಡಿಪಿಐ ಕೃಷ್ಣ ಮೂರ್ತಿ ಮಾತನಾಡಿ, ರಾಜ್ಯ ಮಟ್ಟದಲ್ಲಿ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ದೇವನಹಳ್ಳಿ ತಾಲೂಕು 5ನೇ ಸ್ಥಾನ ಪಡೆದಿರುವುದು ಸುಲಭದ ವಿಷಯವಲ್ಲ. ಇದೊಂದು ಕಠಿಣ ಪರಿಶ್ರಮವಾಗಿದೆ. 33 ಕೇಂದ್ರಗಳನ್ನು ಮಾಡಿ 35 ಅಂಕಕ್ಕಿಂತ ಕಡಿಮೆ ಪಡೆದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಲಾಯಿತು ಎಂದು ಹೇಳಿದರು.
ಈ ವೇಳೆ ಅನಂತ ವಿದ್ಯಾನಿಕೇತನ ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಕೆಂಪೇಗೌಡ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ಅಧಿಕಾರಿ ಹೇಮಂತ್ ಮಾದೇಗೌಡ, ಮೋಹನ್ ಆರಾಧ್ಯ, ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾ ರಾಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್, ವಿಷಯ ಪರಿವೀಕ್ಷಕರಾದ ಶ್ರೀನಿವಾಸ್, ಶ್ರೀಕಂಠ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣ ಮೂರ್ತಿ, ತಾಲೂಕು ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಅನಂತ ವಿದ್ಯಾನಿಕೇತನ ಪ್ರಾಂಶುಪಾಲ ಪದ್ಮಜ ಇತರರಿದ್ದರು.