ದೇಶ ಅಭಿವೃದ್ಧಿಗೆ ಮೋದಿ ಶ್ರಮ: ಸಂಸದ
Team Udayavani, Jun 10, 2020, 6:55 AM IST
ಆನೇಕಲ್: ಸ್ವಚ್ಛ ಭಾರತ ಪರಿಕಲ್ಪನೆ ಮೂಲಕ ದೇಶದಲ್ಲಿ ಬದಲಾವಣೆ ತರಲು ಪ್ರಧಾನಿ ಮೋದಿ ಮುಂದಾಗಿದ್ದಾರೆಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು. ಸರ್ಜಾಪುರದಲ್ಲಿ ಹೊರ ವರ್ತುಲ ರಸ್ತೆ ಪ್ರಾಧಿ ಕಾರದ ಅಧ್ಯಕ್ಷ ಸಿ.ಮುನಿರಾಜು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರ್ಜಾಪುರ ವ್ಯಾಪ್ತಿಯ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ವೃದ್ಧಾಪ್ಯ ವೇತನವೂ ಬಡವರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಇಂದು ಬಟನ್ ಒತ್ತುವ ಮೂಲಕ ಸರ್ಕಾರದಿಂದ ಬರುವ ಹಣ ನೇರವಾಗಿ ಅವರ ಖಾತೆಗೆ ಬರುವ ಯೋಜನೆ ಜಾರಿಗೆ ತಂದಿರುವುದು ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವೆಂದರು. 60 ವರ್ಷಗಳಿಂದ ಆಡಳಿತ ನಡೆಸಿದವರಿಗೆ ಈ ಪರಿಕಲ್ಪನೆ ಬಗ್ಗೆ ಆಲೋಚನೆ ಇರಲಿಲ್ಲ. ಅವರಿಗೆ ದೇಶವನ್ನು ಕೊಳ್ಳೆ ಹೊಡೆಯುವುದು ಮಾತ್ರ ಗೊತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬಿಜೆಪಿ ಮಾಧ್ಯಮ ವಕ್ತಾರ ಅಶ್ವತ್ಥನಾರಾಯಣ, ನರೇಂದ್ರ ಮೋದಿಯವರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ರಾಮನಗರ ಜಿಲ್ಲೆಗೆ 87 ಕೋಟಿ, 88 ಲಕ್ಷದ 88 ಸಾವಿರ ರೂ. ನೇರವಾಗಿ ಹೋಗಿದೆ. 932 ಲಕ್ಷ ಆನೇಕಲ್ ತಾಲೂಕಿನ ರೈತರ ಖಾತೆಗೆ ಹೋಗಿದೆ. ಕೇಂದ್ರ ಸರ್ಕಾರ ಪಾರದರ್ಶಕವಾಗಿ ಎಷ್ಟು ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು. ಹೊರ ವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು, ಕಾಂಗ್ರೆಸ್ ಕುತಂತ್ರದಿಂದಾಗಿ ಬಡವರಿಗೆ ತಲುಪ ಬೇಕಾದ ಆಹಾರ ಧಾನ್ಯ ವಿಳಂಬವಾಗಿತ್ತು.
ಹೀಗಾಗಿ ನಾವೆಲ್ಲರೂ ಈ ಭಾಗದಲ್ಲಿನ ಪ್ರತಿಯೊಬ್ಬರಿಗೂ ಆಹಾರ ಧಾನ್ಯ ವಿತರಣೆಗೆ ಮುಂದಾಗಿದ್ದೇವೆಂದರು. ತಾಪಂ ಅಧ್ಯಕ್ಷೆ ಕವಿತಾ, ಬಿಜೆಪಿ ಆನೇಕಲ್ ಮಂಡಲ ಅಧ್ಯಕ್ಷರಾದ ಜಯಪ್ರಕಾಶ್ರೆಡ್ಡಿ, ಎಸ್.ಆರ್.ಟಿ.ಅಶೋಕ್, ದಕ್ಷಿಣ ಕ್ಷೇತ್ರದ ಎಸ್.ಸಿ.ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷೆ ಮುನಿರತ್ನಮ್ಮ, ಬಿಜೆಪಿ ಮಾಜಿ ಅಧ್ಯಕ್ಷರಾದ ಎನ್.ಬಸವರಾಜು, ಕೆ.ವಿ.ಶಿವಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ ಮತ್ತಿತರರಿದ್ದರು