ಅನಧಿಕೃತ ಕ್ಲಿನಿಕ್ಗಳ ಮೇಲೆ ಕ್ರಮ ಕೈಗೊಳ್ಳಿ
Team Udayavani, Mar 10, 2018, 3:45 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿನ ಅನಧಿಕೃತ ಕ್ಲಿನಿಕ್ಗಳ ಮೇಲೆ ಕ್ರಮ ಕೈಗೊಂಡು, ನಕಲಿ ವೈದ್ಯರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ನಡೆದ ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ನಕಲಿ ವೈದ್ಯರಿಂದ ತೊಂದರೆ: ಸಭೆಯಲ್ಲಿ ಸದಸ್ಯ ಸುನಿಲ್ಕುಮಾರ್ ಮಾತನಾಡಿ, ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ತಾಲೂಕಿನಲ್ಲಿ 14 ಅನಧಿಕೃತ ಕ್ಲಿನಿಕ್ಗಳೇ ಇವೆ ಎಂದು ಆರೋಗ್ಯ ಇಲಾಖೆಯೇ ಮಾಹಿತಿ ನೀಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ತಾವು ಹೇಳಿದ ಸ್ಥಳಗಳಲ್ಲಿ ದಾಳಿ ನಡೆಸಿಲ್ಲ. ರೋಗಿಗಳಿಗೆ ನಕಲಿ ವ್ಯದ್ಯರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನಿರ್ದಾಕ್ಷಿಣ್ಯ ಕ್ರಮ: ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಶರ್ಮಿಳಾ ಹೆಡೆ, ದೂರು ಬಂದಿರುವ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದ್ದೇವೆ. 14 ಅನಧಿಕೃತ ಕ್ಲಿನಿಕ್ಗಳಲ್ಲಿ ಬಿಎಂಎಸ್ ವೈದ್ಯರಿದ್ದಾರೆ.
7 ಮಂದಿಗೆ ಪರವಾನಗಿ ಇಲ್ಲ. ಇವೆಲ್ಲಾ ಇಲಾಖೆ ಗಮನಕ್ಕೆ ಬಂದಿದ್ದು, ಅಂತಹ ಯಾವುದೇ ಕ್ಲಿನಿಕ್ ಕಂಡು ಬಂದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಕೆಲವು ಕ್ಲಿನಿಕ್ಗಳ ಮೇಲೆ ಅವಲಂಬಿತವಾಗಿರುವ ಫಾರ್ಮಾಸಿಗಳು ನಮ್ಮ
ಮೇಲೆ ಧಮ್ಕಿ ಹಾಕುತ್ತಿವೆ ಎಂದು ದೂರಿದರು.
ಕೇಂದ್ರದಲ್ಲಿ ವೈದ್ಯರಿಲ್ಲ: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪಲೋಹರ್ ಮಾತನಾಡಿ, ಈ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಅನಧಿಕೃತ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಲು ತಾಲೂಕು ಆಡಳಿತದ ಸಹಕಾರವಿದೆ ಎಂದರು. ಆರೂಢಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಈ ಬಗ್ಗೆ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸದಸ್ಯೆ ಮುತ್ತುಲಕ್ಷ್ಮೀ ದೂರಿದಾಗ, ವೈದ್ಯರು ವರ್ಗಾವಣೆ ಯಾಗಿದ್ದು, ಬೇರೆ ಕಡೆಯಿಂದ ವೈದ್ಯರನ್ನು ನೀಯೋಜಿಸಲಾಗಿದೆ ಎಂದು ಡಾ. ಶರ್ಮಿಳಾ ಹೆಡೆ ಉತ್ತರಿಸಿದರು.
ಇತ್ತೀಚೆಗೆ ನಡೆದ ರೇಷ್ಮೆ ಬೆಳೆಗಾರರ ಸಮಾವೇಶ ದಲ್ಲಿ ತಾಲೂಕು ಪಂಚಾಯಿತಿ ಮಹಿಳಾ ಸದಸ್ಯ ರನ್ನು ವೇದಿಕೆಗೆ ಆಹ್ವಾನಿಸದೇ ಅಗೌರವ ತೋರಲಾಗಿದೆ. ಆಹ್ವಾನ ಪತ್ರಿಕೆ ನೀಡಿ ಕೈತೊಳೆದುಕೊಳ್ಳುವ ಇಲಾಖೆಗಳು, ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಲು ಕಲಿಯಬೇಕಿದೆ. ಇಲ್ಲವಾದಲ್ಲಿ ಅಂಥ ಸಮಾರಂಭಗಳನ್ನು ಬಹಿಷ್ಕರಿಸಲಾಗುವುದು ಎಂದು ಸದಸ್ಯೆ ಅನ್ನಪೂರ್ಣಮ್ಮ ದೂರಿದರು.
ಇದಕ್ಕೆ ಸದಸ್ಯ ಡಿ.ಸಿ.ಶಶಿಧರ್ ದನಿಗೂಡಿಸಿ, ಸದಸ್ಯರಿಗೆ ಗೌರವ ನೀಡಬೇಕು ಎಂದರು. ಮುಂದೆ ಹೀಗಾಗಂದತೆ ಎಚ್ಚರ ವಹಿಸಿ ಎಂದು ಅಧ್ಯಕ್ಷ ಶ್ರೀವತ್ಸ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಏಜೆನ್ಸಿಗಳಿಗೆ ಗುತ್ತಿಗೆ: ದರ್ಗಾಜೋಗಿಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕರ್ ಕಟ್ಟಿಸಿದ್ದರೂ ನೀರು ಬಿಡುತ್ತಿಲ್ಲ. ಹಲವಾರು ಗ್ರಾಮಗಳಲ್ಲಿಯೂ ಇದೇ ಸಮಸ್ಯೆಯಾಗಿದೆ ಎಂದು ಸದಸ್ಯೆ ಅನ್ನಪೂರ್ಣಮ್ಮ ಸಭೆ ಗಮನಕ್ಕೆ ತಂದಾಗ, ನೀರಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಿ. ಚುನಾವಣೆ ನೀತಿ ಸಂಹಿತೆ ಜಾರಿ ಯಾದರೂ ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ತೊಂದರೆಯಿಲ್ಲ. ಈ ಬಗ್ಗೆ ಬಾಕಿ ಇರುವ ಅನುದಾನಗಳನ್ನು ಶೀಘ್ರ ಬಿಡುಗಡೆ ಮಾಡಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮಸ್ಯೆಯ ದೂರುಗಳು
ಬರುತ್ತಿದ್ದು, ಘಟಕಗಳನ್ನು ನಿರ್ವಹಿಸಲು ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಅಧ್ಯಕ್ಷ ಶ್ರೀವತ್ಸ ಹೇಳಿದರು.
ಸಿಡಿಪಿಒ ಜಯಲಕ್ಷ್ಮೀ ಮಾತನಾಡಿ, ಮಾತೃ ಪೂರ್ಣ ಯೋಜನೆ ತಾಲೂಕಿನಲ್ಲಿ ಯಶ್ವಸಿಯಾಗಿ ನಡೆಯುತ್ತಿದೆ. ಆದರೆ ಗರ್ಭಿಣಿಯರು ಕೇಂದ್ರಕ್ಕೆ ಬಂದು ಆಹಾರ ಸ್ವೀಕರಿಸಬೇಕು. ಕೆಲವು ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇದೆ. ತಾಲೂಕು ಆಡಳಿತ ನೆರವು ನೀಡಿದರೆ, ವಾಹನ ವ್ಯವಸ್ಥೆ ಮಾಡಿ ಗರ್ಭಿಣಿಯರ ಬಳಿಗೆ ಆಹಾರ ನೀಡಲಾಗುವುದು ಎಂದರು.
ಸಹಾಯಧನ: ಕೃಷಿ ಇಲಾಖೆ ಅಧಿಕಾರಿ ರೂಪಾ ಕೃಷಿ ಬಗ್ಗೆ ಮಾಹಿತಿ ನೀಡಿ, ತಾಲೂಕಿನಲ್ಲಿ ಮಳೆಗಾಲ ಮುಗಿದಿದ್ದು, ಹಿಂಗಾರು ಹಂಗಾಮಿನ 150 ಎಕರೆ ಗುರಿ ಮುಟ್ಟಿದೆ. ರಾಗಿ, ಜೋಳ, ನೆಲಗಡಲೆಗಳನ್ನು ರೈತರು ಬೆಳೆದಿದ್ದು, ಈಗ
ತರಕಾರಿ ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆ ಎಲ್ಲಾ ಅನುದಾನ ಬಳಸಿಕೊಳ್ಳಲಾಗಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ಹೊಂಡಗಳನ್ನು ನಿರ್ಮಿಸಿ ಕೊಳ್ಳಲು ಈಗ ಅನುದಾನವಿಲ್ಲ. ಅಂಥವರಿಗೆ ಜೂನ್ ಅಥವಾ ಜುಲೈನಲ್ಲಿ ಅನುದಾನ
ನೀಡಲಾಗುವುದು. ಜಂಟಿ ಖಾತೆಗಳಲ್ಲಿನ ಪಹಣಿ ಬಗ್ಗೆ ಇರುವ ಗೊಂದಲ ಸಿರಿಪಡಿಸಿ, ಇನ್ನೊಬ್ಬರಿಂದ ನಿರಾಪೇಕ್ಷಣೆ ಪತ್ರ ತಂದರೆ, ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ , ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ತಾಲೂಕಿನಲ್ಲಿ 14 ಅನಧಿಕೃತ ಕ್ಲಿನಿಕ್ಗಳೇ ಇವೆ ಎಂದು ಆರೋಗ್ಯ ಇಲಾಖೆಯೇ ಮಾಹಿತಿ
ಕೆಲವು ಕ್ಲಿನಿಕ್ಗಳ ಮೇಲೆ ಅವಲಂಬಿತವಾಗಿರುವ ಫಾರ್ಮಾಸಿಗಳು ಅಧಿಕಾರಿಗಳ ಮೇಲೆ ಧಮ್ಕಿ
ಚುನಾವಣೆ ನೀತಿ ಸಂಹಿತೆ ಜಾರಿಯಾದರೂ ಕುಡಿವ ನೀರಿನ ಯೋಜನೆಗಳಿಗೆ ತೊಂದರೆಯಿಲ
ರೇಷ್ಮೆ ಇಲಾಖೆಯಲ್ಲಿ ಹಿಪ್ಪುನೇರಳೆ ಬೇಸಾಯ ಪ್ರಗತಿಯಲ್ಲಿದ್ದು, ತಾಲೂಕಿನ ಇಬ್ಬರು ರೈತರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ.
ಆಂಜಿನ ಮೂರ್ತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ