ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆ ಸರಳ ಶಿಕ್ಷಕರ ದಿನಾಚರಣೆ
Team Udayavani, Sep 6, 2020, 12:25 PM IST
ದೊಡ್ಡಬಳ್ಳಾಪುರ: ನಗರದ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಕೋವಿಡ್-19 ತಡೆಗಟ್ಟಲು ಘೋಷಿಸಲಾದ ಲಾಕ್ಡೌನ್ ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಸರ್ಕಾರದ ಧೋರಣೆಯನ್ನು ಶಾಲಾ ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಧರಿಸಿ ಖಂಡಿಸಿದರು. ಶಾಲೆ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಪ್ರಾಂಶುಪಾಲರು, ಸಹ ಶಿಕ್ಷಕರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಶಿಕ್ಷಕ ದಂಪತಿಗಳಾದ ವಿ.ವಿಮಲಮ್ಮ, ಬಿ.ಎಲ್.ರಾಮಕೃಷ್ಣ ಅವರನ್ನು ಸೋಮೇಶ್ವರ ಬಡಾವಣೆ ಅವರ ನಿವಾಸದಲ್ಲಿ ಸನ್ಮಾನಿಸುವ ಮೂಲಕ ಆಚರಿಸಲಾಯಿತು.
ನಿವೃತ್ತ ಶಿಕ್ಷಕ ಬಿ.ಎಲ್.ರಾಮಕೃಷ್ಣ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಾವು ಮಾಡುವ ಸಾಮಾಜಿಕ ಸೇವೆಗಳಿಂದ ಸಿಗುವ ಆತ್ಮತೃಪ್ತಿಯೇ ನಮಗೆ ಬಹುದೊಡ್ಡ ಬಹುಮಾನ. ತಾನು ಕನ್ನಡ ಭಾಷಾ ವಿದ್ಯಾರ್ಥಿಯಾಗಿದ್ದಾಗ ನಡೆದ ಅವಮಾನ, ನಿಂದನೆ, ನೋವು ಮರೆಯುವಂತೆ ಮಾಡಿದೆ ಎಂದರು. ಕೆಎನ್ಎಸ್ ಟ್ಯುಟೋರಿಯಲ್ಸ್ ಶ್ರೀನಿವಾಸಮೂರ್ತಿ, ಕಸಾಪ ಅಧ್ಯಕ್ಷೆ ಪ್ರಮೀಳಾ, ಕಸಾಪ ನಗರ ಅಧ್ಯಕ್ಷ ಬಿ.ಪಿ.ಹರಿಕುಮಾರ್, ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನ.ಮಹಾದೇವ್, ಕೊತ್ತೂರಪ್ಪ, ಪ್ರವೀಣ್ ಕುಮಾರ್ ಮತ್ತಿತರರಿದ್ದರು.
ಎಸ್ಜೆಸಿಆರ್ ವಿದ್ಯಾನಿಕೇತನ: ತಾಲೂಕಿನ ಮೆಳೇಕೋಟೆ ಕ್ರಾಸ್ ಎಸ್ಜೆಸಿಆರ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯೋ ಪಾಧ್ಯಾಯರಾದ ಎಚ್.ಎಲ್.ವಿಜಯ್ ಕುಮಾರ್, ಅಕಾಡೆಮಿಕ್ ಅಡ್ವೆ„ಸರ್ ಎಸ್. ವೆಂಕಟೇಶಪ್ಪ, ಶಿಕ್ಷಕ ವೃಂದವಿತ್ತು.