ಕೆಂಪೇಗೌಡ ಹೆಸರಲ್ಲಿ ಎರಡು ಸಾವಿರ ಸಸಿ ನಾಟಿ
Team Udayavani, Jun 28, 2019, 3:07 PM IST
ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ದಿನದಂದು ಕಾರಹಳ್ಳಿ ಗ್ರಾಪಂ ವತಿಯಿಂದ ಕೆರೆಯ ಅಂಗಳದಲ್ಲಿ ಎರಡು ಸಾವಿರ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಮೂಲಕ ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಗ್ರಾಪಂನಿಂದ ಕೆಂಪೇಗೌಡರ ಜಯಂತಿಯ ಅಂಗವಾಗಿ ಕೆರೆ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರು ಉಣಿಸುವುದರ ಮೂಲಕ ಚಾಲನೆ ನೀಡಿದರು. ಪ್ರತಿ ಗ್ರಾಮದಲ್ಲಿರುವ ಕೆರೆಗಳಲ್ಲಿ ನೀರು ನಿಂತರೆ ಆ ಭಾಗದ ರೈತಾಪಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದರ ಜೊತೆಯಲ್ಲಿ ಪರಿಸರ ಸಂರಕ್ಷಣೆಯೂ ಸಹ ಮಾಡಿದರೆ ಸಮೃದ್ಧವಾದ ವಾತಾವರಣ ಸೃಷ್ಟಿಯಾಗುತ್ತದೆ. ಕೆರೆಗಳ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ 35 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಗೊಳಿಸಲಾಗಿದೆ. ಕಾರಹಳ್ಳಿ ಕೆರೆ ಅಭಿವೃದ್ಧಿಗಾಗಿ ಸುಮಾರು 1ಕೋಟಿ 45ಲಕ್ಷ ರೂ.ಗಳನ್ನು ಮಂಜೂರಿ ಮಾಡಲಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿಯುತ್ತಾ ಹೋದರೆ ಪರಿಸರ ನಾಶ ವಾಗುವುದು ಎಂದರು.
ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಎ.ದೇವರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಗ್ರಾಮಗಳು ಅಭಿವೃದ್ಧಿ ಹೊಂದಬೇಕು. ಪ್ರತಿ ಹಂತದಲ್ಲೂ ಪ್ರಕೃತಿ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಕಾರಹಳ್ಳಿ ಕೆರೆಯ ಅಂಗಳದಲ್ಲಿ ಬದುಗಳ ನಿರ್ಮಾಣ ಮಾಡಿ ಪ್ರತಿ 3 ಅಡಿಗಳಿಗೆ ಒಂದು ಬದುವಿನಂತೆ ಸುಮಾರು 2ಸಾವಿರ ಬದುಗಳ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಈಗಾಗಲೇ ಸಾವಿರ ಸಸಿಗಳನ್ನು ತರೆಸಿಕೊಳ್ಳಲಾಗಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಾದ್ಯಕ್ಷ ಆರ್.ಮುನೇಗೌಡ ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಎಸ್.ಮಹೇಶ್, ಕೃಷಿಕ ಸಮಾಜದ ಮಾಜಿ ನಿರ್ದೇಶಕ ಜಯರಾಮ್, ಎಪಿಎಂಸಿ ನಾಮಿನಿ ಮಾಜಿ ನಿರ್ದೇಶಕ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ಮುನಿಕೃಷ್ಣಪ್ಪ, ಭೈರೇಗೌಡ, ಮಂಜುನಾಥ್, ಅಶೋಕ್, ರಾಜಸ್ವ ನಿರೀಕ್ಷಕ ರಮೇಶ್ ಇತರರು ಹಾಜರಿದ್ದರು.