ಬೆಳಗಾವಿ:ಜಿಲ್ಲಾಧಿಕಾರಿ ನಿವಾಸಕ್ಕೆ ಭದ್ರತೆಗಿದ್ದ ಪೊಲೀಸ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Team Udayavani, May 6, 2020, 9:40 AM IST
ಬೆಳಗಾವಿ: ಜಿಲ್ಲಾಧಿಕಾರಿ ನಿವಾಸದಲ್ಲಿ ಭದ್ರತೆಯಲ್ಲಿದ್ದ ನಗರ ಮೀಸಲು ಪಡೆ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ನಗರ ಮೀಸಲು ಪಡೆಯ ಪೇದೆ ಪ್ರಕಾಶ ಗುರಮಠ (32) ಎಂಬ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತನ ದೇಹದಲ್ಲಿ ಎರಡು ಗುಂಡುಗಳು ಹೊಕ್ಕಿವೆ. ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕಾರಣ ತಿಳಿದು ಬಂದಿಲ್ಲ. ಮುಂಜಾನೆ ವೇಳೆ ಘಟನೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರ ನಿವಾಸಕ್ಕೆ ಭದ್ರತೆಯಲ್ಲಿದ್ದ ಪ್ರಕಾಶ ಗುರಮಠ ಮೂಲತಃ ಎಂ.ಕೆ. ಹುಬ್ಬಳ್ಳಿ ಬಳಿಯ ಅಂಬಡಗಟ್ಟಿ ಗ್ರಾಮದವರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ತಂದೆ-ತಾಯಿ ಇದ್ದು, ಸಹೋದರ ಇಂಜಿನಿಯರಿಂಗ್ ಓದುತ್ತಿದ್ದಾನೆ. 2012ರಲ್ಲಿ ಬೆಂಗಳೂರಿನಲ್ಲಿ ಭರ್ತಿ ಆಗಿದ್ದರು. . ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ವರ್ಗಾವಣೆ ಮಾಡಿಕೊಂಡು ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು.