Lok Sabha Elections: ಸಚಿವರ ಸ್ಪರ್ಧೆಗೆ ಹೈಕಮಾಂಡ್ ಸೂಚಿಸಿಲ್ಲ: ಸತೀಶ ಜಾರಕಿಹೊಳಿ
Team Udayavani, Nov 13, 2023, 7:58 PM IST
ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸಚಿವರು ಸ್ಪರ್ಧಿಸುವಂತೆ ಪಕ್ಷದ ವರಿಷ್ಠರು ಎಲ್ಲಿಯೂ ಸೂಚನೆ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ವೇಳೆ ಆಕಾಂಕ್ಷಿಗಳ ಹೆಸರು ಚರ್ಚೆ ಆಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರು ಸ್ಪರ್ಧಿಸಬಹುದು. ಜನವರಿಯೊಳಗೆ ಅಭ್ಯರ್ಥಿಗಳ ಆಯ್ಕೆಯಾದರೆ ಒಳ್ಳೆಯದು.
ಅಭ್ಯರ್ಥಿ ಆಯ್ಕೆಗೂ ಮುನ್ನ ಅರ್ಜಿ ಕರೆಯುತ್ತೇವೆ. ಅರ್ಜಿಗಳನ್ನು ಉಚಿತವಾಗಿ ತೆಗೆದುಕೊಳ್ಳಲಾಗುವುದು ಎಂದರು.
ಬೆಳಗಾವಿ ಲೋಕಸಭೆಗೆ ಲಿಂಗಾಯತ ಹಾಗೂ ಚಿಕ್ಕೋಡಿ ಲೋಕಸಭೆಗೆ ಕುರುಬ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆದಿದೆ. ಎರಡೂ ಕ್ಷೇತ್ರದ ಆಕಾಂಕ್ಷಿಗಳು ಯಾರೆಂಬುದರ ಬಗ್ಗೆ ಅಧಿವೇಶನ ಮುಗಿದ ಬಳಿಕ ಡಿಸೆಂಬರ್ನಲ್ಲಿ ಚರ್ಚೆ ಆಗಲಿದೆ. ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಟಾಳಕರ ಲೋಕಸಭೆ ಟಿಕೆಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಕಾರ್ಯಕರ್ತರ ಹಂತದಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಬೂತ್ ಮಟ್ಟದಲ್ಲಿ ಕಾರ್ಯರ್ತರನ್ನು ಸಜ್ಜುಗೊಳಿಸುವ ಕೆಲಸ ನಡೆದಿದೆ. ಇನ್ನು ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಆಗಬೇಕಿದೆ. ಚಳಿಗಾಲ ಅಧಿ ವೇಶನ ವೇಳೆ ಸಭೆ ನಡೆಸಿ ತೀರ್ಮಾನಿಸುತ್ತೇವೆ. ಅಭ್ಯರ್ಥಿ ಆಯ್ಕೆಗೆ ಮಾನದಂಡ ಗೆಲ್ಲುವವನು ಆಗಿರಬೇಕು. ಪಕ್ಷ, ಕಾರ್ಯಕರ್ತರ ಬಗ್ಗೆ ಒಲವು, ಸಂಪರ್ಕ ಇರಬೇಕು. ಜಾತಿ ಜತೆಗೆ ಜನಪ್ರಿಯತೆ ಹೊಂದಿರಬೇಕು ಎಂದ ಅವರು, ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್ ಇದೆ ಎಂದರು.
ಸಿದ್ದರಾಮಯ್ಯ ಡೂಪ್ಲಿಕೇಟ್ ಮುಖ್ಯಮಂತ್ರಿ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿ ಇದ್ದು, ಅವರಿಗೆ ಎಲ್ಲ ಮಾತನಾಡಲು ಹಕ್ಕಿದೆ, ಮಾತನಾಡುತ್ತಾರೆ. ಈ ತರಹ ಮಾತನಾಡದಂತೆ ಹೇಳಲು ಆಗಲ್ಲ ಎಂದರು.
ಜಾತಿ ಗಣತಿ ವರದಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ. ನಮಗೆ ಗೊತ್ತಿಲ್ಲದೇ ಇರುವಾಗ ವಿರೋಧ ಮಾಡುವುದು ಸರಿಯಲ್ಲ. ಜಾರಿಗೂ ಮೊದಲು ವರದಿ ಬಗ್ಗೆ ಚರ್ಚೆ ಆಗಬೇಕಿದೆ. ಕ್ಯಾಬಿನೆಟ್ ಮುಂದೆ ಈ ವಿಚಾರ ಬಂದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬರಲ್ಲ ಎಂದು ಅವರು ಹೇಳಿದರು.
ಮುಂದೆ ನೋಡೋಣ..
2028ರಲ್ಲಿ ಮುಖ್ಯಮಂತ್ರಿ ಗಾದಿಗೆ ಕ್ಲೇಮ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ ಜಾರಕಿಹೊಳಿ, ಈಗ ಇದರ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿ ಕಾರಕ್ಕೆ ಬರಲಿ. ಯಾರು ಒನ್, ಟು, ಥ್ರಿ ಇರುತ್ತಾರೋ ಅದರ ಮೇಲೆ 2028ರ ಚುನಾವಣೆ ಗುರಿ ಇರಲಿದೆ. ಡಿಕೆಶಿ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ. ಏನೇಯಾದರೂ ಲೋಕಸಭೆ ಚುನಾವಣೆ ನಂತರ ನೋಡೋಣ. ಈಗಂತೂ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D. K. Shivakumar ಕಾಂಗ್ರೆಸ್ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ
Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು