ಕಾಂಗ್ರೆಸ್ ಸಭಾತ್ಯಾಗ ನಡುವೆ ಎಸ್ಐಆರ್ ವಿಧೇಯಕ ಅಂಗೀಕಾರ
Team Udayavani, Dec 29, 2022, 9:30 PM IST
ಸುವರ್ಣ ವಿಧಾನಸೌಧ: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕಕ್ಕೆ ಪರಿಷತ್ನಲ್ಲಿ ಅಂಗೀಕಾರ ನೀಡಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ಅವರು ಗುರುವಾರ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮಂಡನೆ ಮಾಡಿ ಮಾತನಾಡಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿನಲ್ಲಿ 2013ರಲ್ಲಿ ವಿಶೇಷ ಹೂಡಿಕೆ ಪ್ರದೇಶ(ಎಸ್ಐಆರ್)ವನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿತ್ತು. ಅಲ್ಲಿನ ಯಶಸ್ಸು ಹಿನ್ನೆಲೆಯಲ್ಲಿ ಅದನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 189 ಕೈಗಾರಿಕಾ ಪ್ರದೇಶಗಳಿವೆ. ಇದರಲ್ಲಿ 1,250 ಎಕರೆಗಿಂತ ಹೆಚ್ಚಿನ ಪ್ರದೇಶ ಹೊಂದಿದ 16 ಕೈಗಾರಿಕಾ ಪ್ರದೇಶಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಇನ್ನು ಮುಂದೆ 2,500 ಎಕರೆಗಿಂತ ಹೆಚ್ಚಿನ ಪ್ರದೇಶದ ಕೈಗಾರಿಕೆಗಳಲ್ಲಿ ಎಸ್ಐಆರ್ ಜಾರಿಗೊಳಿಸಲಾಗುವುದು. ಕೈಗಾರಿಕಾ ಪ್ರದೇಶಗಳಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಶೇ.70ರಷ್ಟು ಹಣ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು, ಉಳಿದ ಶೇ.30 ಹಣ ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಲಾಗುವುದು. ಶೇ.80 ಕೈಗಾರಿಕಾ ಪ್ರದೇಶ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಎಸ್ಐಆರ್ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಪ್ಪಿಗೆ ನೀಡಿದೆ ಎಂದರು.
ವಿಧೇಯಕದ ಮೇಲೆ ಮಾತನಾಡಿದ ವಿಪಕ್ಷ ನಾಯಕ ಹರಿಪ್ರಸಾದ್, ಕೆಲವರು ದೇಶಕ್ಕೆ 2014ರಲ್ಲಿ ಸ್ವಾತಂತ್ರÂ ಬಂತು ಎಂಬ ಮನೋಭಾವದಲ್ಲಿದ್ದಾರೆ ಅವರ ಬಗ್ಗೆ ಏನೂ ಹೇಳಲಾಗದು. ಎಲೆಕ್ಟ್ರಾನಿಕ್ ಸಿಟಿ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಆಗಿತ್ತು. ಯುಪಿಎ ಸರ್ಕಾರ ಎಸ್ಇಝಡ್, ಜವಳಿ ಪಾರ್ಕ್ಗಳನ್ನು ಜಾರಿಗೊಳಿಸಿತ್ತು. ಎಸ್ಐಆರ್ ಕಾಯ್ದೆಯಡಿ ಸ್ಥಳೀಯ ಆಡಳಿತ ಸಂಸ್ಥೆ ದೂರ ಮಾಡುವ, ಫಲವತ್ತಾದ ಕೃಷಿ ಭೂಮಿಯನ್ನು ಸುಲಭ ಸ್ವಾಧೀನಕ್ಕೆ ಬಲ ನೀಡುವ ಕಾಯ್ದೆ ಇದಾಗಲಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಚುನಾವಣೆ ಕಾಲದಲ್ಲಿ ನೀವು ತರಾತುರಿಯಲ್ಲಿ ತರುವುದು ನೋಡಿದರೆ, ಭೂ ಮಾಫಿಯಾಕ್ಕೆ ಲಾಭ ಮಾಡಿಕೊಡುವಂತಿದೆ. ಉದ್ಯಮಿಯಾಗಿದ್ದವರು ಕೈಗಾರಿಕೆಗೆ ಸಂಬಂಧಿಸಿದ ವಿಧೇಯಕ ಮಂಡಿಸುವಂತಿಲ್ಲ ಎಂಬ ನಿಯಮ ಸಂಸತ್ತಿನಲ್ಲಿ ಇದೆ. ಕೆಐಎಡಿಬಿ ಅಧಿಕಾರ ಮೊಟಕುಗೊಳಿಸಿ, ಸ್ಥಳೀಯ ಆಡಳಿತ ಸಂಸ್ಥೆಗಳ ಆದಾಯಕ್ಕೆ ಕೊಕ್ಕೆ ಹಾಕಲಾಗುತ್ತಿದೆ ಎಂದರು.
ಆಡಳಿತ ಮತ್ತು ವಿಪಕ್ಷ ಸದಸ್ಯರಾದ ರಮೇಶ, ಪ್ರಕಾಶ ರಾಠೊಡ್, ಕೆ.ಎ.ತಿಪ್ಪೇಸ್ವಾಮಿ, ಕೇಶವ ಪ್ರಸಾದ, ಮರಿತಿಬ್ಬೇಗೌಡ, ಶಶೀಲ ನಮೋಶಿ, ಎಂ.ನಾಗರಾಜ ಯಾದವ, ಪ್ರಕಾಶ ಹುಕ್ಕೇರಿ ಇನ್ನಿತರರು ಮಾತನಾಡಿದರು.
ಆಡಳಿತ ಪಕ್ಷದವರು ವಿಧೇಯಕ ಉತ್ತಮವಾಗಿದೆ ಇದು ಕೈಗಾರಿಕಾಭಿವೃದ್ಧಿಗೆ ಪೂರಕವಾಗಿದೆ ಎಂದರೆ, ವಿಪಕ್ಷ ಸದಸ್ಯರು, ಇದೊಂದು ಸಂವಿಧಾನ ನಿಯಮ ಹಾಗೂ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ, ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಕುಟುಂಬದವರ ಹೆಸರಲ್ಲಿ 5-10 ನಿವೇಶನಗಳನ್ನು ಹೊಂದಿದ್ದು, ಕೈಗಾರಿಕೆ ಮಾಡಬೇಕೆಂಬುವವರಿಗೆ ನಿವೇಶನ ಇಲ್ಲವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಬಲಾಡ್ಯರಿಗೆ ಅವಕಾಶ ದೊರೆಯುತ್ತಿದ್ದು, ಅದೇ ಸಮುದಾಯದ ಧ್ವನಿ ಇಲ್ಲದವರಿಗೆ ಅವಕಾಶ ನೀಡಬೇಕು ಹಾಗೂ ಮಹಿಳಾ ಉದ್ಯಮಿಗಳಿಗೆ ಶೇ.75ರಷ್ಟು ಸಬ್ಸಿಡಿಯಡಿ 2 ಎಕರೆ ಜಮೀನು ನೀಡಬೇಕೆಂದು ಒತ್ತಾಯಿಸಿದರು. ವಿಧೇಯಕ ವಿರೋಧಿಸಿ ಸಭಾತ್ಯಾಗ ಮಾಡುವುದಾಗಿ ಹೇಳಿ ಕಾಂಗ್ರೆಸ್ ಸದಸ್ಯರು ಹೊರ ನಡೆದರು. ಕಾಂಗ್ರೆಸ್ ಸಭಾತ್ಯಾಗದ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಧರ್ಮಪತ್ನಿಯರಿಂದ ಸೊಂಟ ಮುರಿಸಬೇಕಾದೀತು:
ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮೇಲಿನ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು, ಅನೇಕ ಅಧಿಕಾರಿಗಳು, ಬಲಾಡ್ಯರು ತಮ್ಮ ಉಪ ಪತ್ನಿಯರ ಹೆಸರಿನಲ್ಲಿ ಕೈಗಾರಿಕಾ ನಿವೇಶನಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ಕೇವಲ ಉಪಪತ್ನಿ ಎಂದು ಯಾಕೆ ಹೇಳುತ್ತೀರಿ? ಬಿಟ್ಟು ಬಿಡಿ ಎಂದರು. ಮಾತು ಮುಂದುವರಿಸಿದ ಮರಿತಿಬ್ಬೇಗೌಡರು ಮತ್ತೆ ಪದ ಬಳಕೆ ಮಾಡಿದರು.
ಸಚಿವರು ಉತ್ತರ ನೀಡುವ ವೇಳೆ ಮಹಿಳೆಯರಿಗೆ ಶೇ.75 ಸಬ್ಸಿಡಿಯಲ್ಲಿ 2 ಎಕರೆ ಜಮೀನು ನೀಡುವುದಾಗಿ ಹೇಳುವಾಗ, ಮರಿತಿಬ್ಬೇಗೌಡರು ಉಪ ಪತ್ನಿಯರಿಗೂ ನೀಡಿ ಬಿಡಿ ಎಂದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿನಿ ಗೌಡ, ಪದೇಪದೆ ಉಪಪತ್ನಿ ಎಂದು ಹೇಳಿಸಿದರೆ ಧರ್ಮಪತ್ನಿಯಿಂದ ಸೊಂಟ ಮುರಿಸಬೇಕಾಗುತ್ತದೆ. ಪರಿಷತ್ನಲ್ಲಿ ಇರುವುದೇ ಮೂವರು ಮಹಿಳಾ ಸದಸ್ಯರು. ಇಂತಹ ಮಾತುಗಳು ಹೇಳುವುದು ಸರಿಯಲ್ಲ ಎಂದಾಗ, ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಇದಕ್ಕೆ ಧ್ವನಿಗೂಡಿಸಿದರು.
ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸರಕಾರ ಪ್ರಾತಿನಿಧ್ಯಕ್ಕೆ ಒತ್ತಾಯ :
ಸುವರ್ಣವಿಧಾನಸೌಧ: ರಾಜ್ಯದಲ್ಲಿನ ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸರಕಾರಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಣೆಗೆ ಪೂರಕವಾಗಿ ಕಾನೂನು ರೂಪಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ ರಾಠೊಡ ಒತ್ತಾಯಿಸಿದರು.
ಪರಿಷತ್ನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸಂವಿಧಾನದ 73-74 ತಿದ್ದುಪಡಿಗಳ ಮೇಲೆ ಪಂಚಾಯತ್ರಾಜ್ ವ್ಯವಸ್ಥೆ ತನ್ನದೇ ಜವಾಬ್ದಾರಿ ಹೊಂದಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಹೊಂದಿದೆ. ಆದರೆ, ಪಂಚಾಯತ್ ರಾಜ್ ಕಾನೂನು ಸಮರ್ಪಕವಾಗಿ ಜಾರಿಗೊಳ್ಳದೆ, ಜಿಲ್ಲಾ ಪಂಚಾಯತ್, ತಾಲೂಕು ಹಾಗೂ ಗ್ರಾಮ ಪಂಚಾಯತ್ಗಳು ಸ್ಥಳೀಯ ಸರಕಾರಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕ್ರಮ ಕೈಗೊಳ್ಳುವುದು ಅವಶ್ಯ ಎಂದರು.
ಸಭಾನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ಸದಸ್ಯರ ಆಶಯ ಸರಕಾರದ ಆಶಯವೂ ಆಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ
Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ
Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ
Politics: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್