ನರೇಂದ್ರ ಮೋದಿ ಹೊಡೆತಕ್ಕೆ ನಾವೆಲ್ಲ ಒಂದಾಗಿದ್ದೇವೆ: ಸತೀಶ್ ಜಾರಕಿಹೊಳಿ
Team Udayavani, May 25, 2019, 2:12 PM IST
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಲು ಯಾವುದೇ ಔಷಧಿ ನಾಟಿರಲಿಲ್ಲ. ಇದೀಗ ಮೋದಿ ಅವರು ನೀಡಿರೋ ಹೊಡೆತದ ಔಷಧಿ ಫಲ ನೀಡಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂದು ಅರಣ್ಯ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕಾಂಗ್ರೆಸ್-ಜೆಡಿಎಸ್ ರಿವರ್ಸ್ ಆಪರೇಷನ್ ಮಾಡಲು ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೋದಿ ಅಲೆ ಕೆಲಸ ಮಾಡಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಆಗೋ ವಿಚಾರ ಸದ್ಯ ಮುಕ್ತಾಯವಾಗಿದೆ ಎಂದು ತಿಳಿಸಿದರು.
ಇನ್ನು ನಾಲ್ಕು ವರ್ಷ ಲೆಫ್ಟ್, ರೈಟ್ ಅಂತ ಒಂದೇ ದಾರಿಯಲ್ಲಿ ಹೋಗಬೇಕು. ಕಮಾಂಡರ್ ಹೇಳಿದ ಹಾಗೆ ಪರೇಡ್ ಮಾಡೋದು ಅಷ್ಟೇ ಕೆಲಸ ಉಳಿದಿದೆ. ದೇಶದಲ್ಲಿ ಮೋದಿ ಅಲೆ ಇದೆ ಎಂದು ಒಪ್ಪಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಡುಗಡೆಯಾಗದ ಸಿನಿಮಾದ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು.