ಎಲ್ಲರೂ ಶಿಷ್ಟಮಾರ್ಗದಲ್ಲಿ ಸಾಗೋಣ
Team Udayavani, Jan 13, 2021, 7:57 PM IST
ಸಂಡೂರು: ಪ್ರತಿಯೊಬ್ಬ ವ್ಯಕ್ತಿಯಧಾರ್ಮಿಕ ಭಾವ ಹೊಂದುವ ಮೂಲಕ ಮುಕ್ತಿ ಪಡೆಯಬೇಕು. ಅದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದು ಶಾಸಕ ಈ. ತುಕಾರಾಂ ಅಭಿಪ್ರಾಯಿಸಿದರು.
ಅವರು ತಾಲೂಕಿನ ಮುರಾರಿಪುರ ಗ್ರಾಮದಲ್ಲಿ ನೂತನ ಕೊಲ್ಲಾರಮ್ಮ ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ದುಷ್ಟ ಸಂಹಾರ ಶಿಷ್ಟ ರಕ್ಷಣೆ ದೇವಿಯ ಪ್ರಮುಖ ಕಾರ್ಯವಾಗಿದ್ದು ನಾವು ಇಂದು ನೂತನ ದೇವಸ್ಥಾನದ ಸ್ಥಾಪಿಸುವುದರ ಜೊತೆಗೆ ದುಷ್ಟ ಗುಣಗಳನ್ನು ಸಂಹಾರ ಮಾಡಿಕೊಂಡು ಶಿಷ್ಟ ಮಾರ್ಗದಲ್ಲಿ ಸಾಗೋಣ. ಸಮಾಜದಲ್ಲಿ ಪ್ರತಿಯೊಂದು ಮಗುವು ಸಹ ಶಿಕ್ಷಣ ಪಡೆಯುವ ಮೂಲಕ ಮನದಲ್ಲಿಯ ದುಷ್ಟಗುಣ ದೂರವಾಗುತ್ತವೆ. ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿ ಸುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯನ್ನು ಸಾಧಿಸಿ ನಮ್ಮ ಮನದಲ್ಲಿಯ ಮೌಡ್ಯಗಳನ್ನು ದೂರಮಾಡಿಕೊಳ್ಳೋಣ. ಈ ದೇವಸ್ಥಾನ ಬರೀ ಒಬ್ಬರ ಆಸ್ತಿಯಲ್ಲ. ಸಮಾಜದ ಆಸ್ತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ಇದನ್ನು ಸ್ವತ್ಛವಾಗಿಡುವ ಕಾರ್ಯವನ್ನು, ರಕ್ಷಿಸುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡ ಬಿ.ಜಿ. ಸಿದ್ದೇಶ್ ಅವರು ಮಾತನಾಡಿ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಶ್ರದ್ಧಾಕೇಂದ್ರಗಳು, ಇದರಿಂದ ನಮ್ಮ ಮನದಲ್ಲಿಯ ಮಲೀನ, ಮೌಡ್ಯತೆ ತೊಡೆದು ಹಾಕಿ ನೆಮ್ಮದಿಯ ಬದುಕನ್ನು ಸಾಗಿಸೋಣ ಎಂದರು. ಕಾರ್ಯಕ್ರಮದಲ್ಲಿ ಮಹಿಳೆಯರು ಗಂಗೆ ತರುವ ಮೂಲಕ ದೇವಿಯ ಎಲ್ಲ ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಿದರು. ಇಡೀ ಗ್ರಾಮವೇ ದೇವಿಯ ದರ್ಶನಕ್ಕೆ ಆಗಮಿಸಿ, ಪೂಜಿಸಿ ದೇವಿ ಕೃಪೆಗೆ ಪಾತ್ರರಾದರು. ಸಾಮೂಹಿಕ ದಾಸೋಹ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಮುಖಂಡರಾದ ಅನಂದಪ್ಪ ಅನೇಕರಿದ್ದರು.