ಎಲ್ಲ ಸಮುದಾಯಗಳ ಅಭಿವೃದ್ದಿಗೆ ಸರ್ಕಾರದಿಂದ ಅನುದಾನ
Team Udayavani, May 10, 2022, 5:52 PM IST
ತೇರದಾಳ: ನಾಡಿನ ಹಾಗೂ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾಡಿದಾಗ ಮಾತ್ರ ಅನುದಾನ ಸದ್ಬಳಕೆಯಾಗಲು ಸಾಧ್ಯ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಗುರುಕುಲ ಆವರಣದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜೈನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿ ಮಂಜುರಾದ ಜೈನ್ ಸಮುದಾಯ ಭವನ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಿನಸೇನಾಚಾರ್ಯ ವಿದ್ಯಾ ಮಂಡಳದ ಅಧ್ಯಕ್ಷ ಟಿ.ಸಿ. ಪಡಸಲಗಿ, ಕಾರ್ಯಾಧ್ಯಕ್ಷ ಡಿ.ಆರ್. ಪಾಟೀಲ, ಕೋಶಾಧ್ಯಕ್ಷ ಡಾ| ಜೆ.ಬಿ. ಆಲಗೂರ, ಮುಖಂಡರಾದ ಪ್ರವೀಣ ನಾಡಗೌಡ, ಪಿ.ಎನ್. ದೇಸಾಯಿ, ಡಾ| ಎಸ್. ಎ. ಕಾಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಟಕನೂರ, ಅಲ್ಲಪ್ಪ ಬಾಬಗೊಂಡ ಉಪಸ್ಥಿತರಿದ್ದರು.