ಕೋವಿಡ್ ವಾರಿಯರ್ಸ್ ನಿಜವಾದ ದೇವರು
Team Udayavani, Jul 8, 2020, 4:33 PM IST
ಇಂಡಿ: ಅನೇಕ ಕಾರಣಾಂತರಗಳಿಂದ ನೂತನ ಬಸ್ ಡಿಪೋ ಉದ್ಘಾಟನೆಯಾಗಿರಲಿಲ್ಲ. ದಿ| ಡಿ.ದೇವರಾಜ ಅರಸರ ಭವನ ಹಾಗೂ ಬಸ್ ಡಿಪೋ ಲೋಕಾರ್ಪಣೆ, ಕೋವಿಡ್-19 ನಿಮಿತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಪುರಸ್ಕಾರ ನೀಡುತ್ತಿರುವುದು ಅತೀವ ಸಂತೋಷವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಹಂಜಗಿ ರಸ್ತೆಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನೂತನ ಬಸ್ ಡಿಪೋ ಮತ್ತು ದೇವರಾಜ ಅರಸು ಭವನ ಲೋಕಾರ್ಪಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋವಿಡ್-19 ಮಹಾಮಾರಿ ಇಡೀ ವಿಶ್ವದ ಮಾನವ ಕುಲಕೋಟಿಗೆ ಆಪತ್ತು ತಂದಿದೆ. ಕೋವಿಡ್ ಮಹಾರೋಗದ ವಿರುದ್ಧ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಶ್ರಮಿಸಿದ್ದಾರೆ. ಕಷ್ಟದಲ್ಲಿದ್ದಾಗ ಸಾರ್ವಜನಿಕರ ಸೇವೆ ಮಾಡಿದವರೇ ನಿಜವಾದ ದೇವರು ಎಂದರು.
ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲೂಕು ಇಂಡಿ ಪಟ್ಟಣವಾಗಿದೆ. ಮುಂದೊಂದು ದಿನ ನಗರಸಭೆಯಾಗುವ ವಾತಾವರಣ ಬರಲಿದೆ. ಒಬ್ಬ ಜನಪ್ರತಿನಿಧಿಗೆ ಮುಂದಾಲೋಚನೆ ಇರಬೇಕು. ಇಂಡಿ ತಾಲೂಕಿನ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, 1 ಕೋಟಿ ರೂ. ಯೋಜನೆ ಮತ್ತು ಶೈಕ್ಷಣಿಕ ಪ್ರಗತಿಗೆ ಐಟಿಐ, ಡಿಗ್ರಿ ಕಾಲೇಜು, ಡಿಪ್ಲೊಮಾ, ಎಲ್ಲಾ ಕಟ್ಟಡಗಳ ಉದ್ಘಾಟನೆಯಾಗಬೇಕಾಗಿತ್ತು. ಆದರೆ ಕೋವಿಡ್-19 ಕಾರಣದಿಂದ ಮುಂದೂಡಲಾಗಿದೆ ಎಂದರು.
ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಜಿಪಂ ಸದಸ್ಯ ಹಣಮಂತ ಖಂಡೇಕಾರ, ರಾಮು ರಾಠೊಡ, ಕೆ.ಎಂ.ಎಫ್ ಸಾಂಬಾಜಿರಾವ ಮಿಸಾಳೆ, ಡಿ.ಟಿ.ಒ ಬಿರಾದಾರ, ಕೆಎಸ್ಆರ್ಟಿಸಿ ಅಧಿಕಾರಿ ಗಂಗಾಧರ, ಎಸ್.ಆರ್. ಆಲಗೂರ, ವಿಜಯಕುಮಾರ ಕವಲಗಿ ಇದ್ದರು.