ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, May 14, 2020, 4:54 PM IST
ವಿಜಯಪುರ: ಗ್ರಾಮೀಣ ಬ್ಯಾಂಕ್ ನೌಕರರು ನಗರದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ವಿಜಯಪುರ: ಕೋವಿಡ್ ಸಂಕಷ್ಟದಲ್ಲಿ ವಾಣಿಜ್ಯ ಬ್ಯಾಂಕ್ ಸಿಬ್ಬಂದಿಗೆ ನೀಡಿರುವ ವಿಶೇಷ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕುಗಳ ನೌಕರರಿಗೂ ವಿಸ್ತರಿಸುವಂತೆ ಆಗ್ರಹಿಸಿ ಗ್ರಾಮೀಣ ಬ್ಯಾಂಕ್ ನೌಕರರ-ಅಧಿಕಾರಿ ಸಂಘಟನೆಯ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನೌಕರರು ಕೈಗೆ ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸಿ ಪ್ರತಿಭಟಿಸಿದರು.
ಸಂಘಟನೆ ಪ್ರಮುಖರು ಮಾತನಾಡಿ, ಕಪ್ಪು ಪಟ್ಟಿ ಧರಿಸಿ ನಡೆಸುತ್ತಿರುವ ಪ್ರತಿಭಟನೆ ಮೇ 16 ರ ವರೆಗೂ ಮುಂದುವರಿಯಲಿದೆ. ಮೇ ತಿಂಗಳ ಕೊನೆ ವಾರದಲ್ಲಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಅಭಿಯಾನ ಕೈಗೊಳ್ಳುವುದಾಗಿ ತಿಳಿಸಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸರ್ಕಾರ ವಾಣಿಜ್ಯ ಬ್ಯಾಂಕ್ ಸಿಬ್ಬಂದಿಗೆ ಮಾತ್ರ ಕೆಲವೊಂದು ಸೌಲಭ್ಯ ನೀಡಿದ್ದು, ಅನೇಕ ಸೌಲಭ್ಯಗಳಿಂದ ಗ್ರಾಮೀಣ ಬ್ಯಾಂಕ್ ನೌಕರರನ್ನು ಕಡೆಗಣಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.
ವಾಣಿಜ್ಯ ಬ್ಯಾಂಕ್ ಸಿಬ್ಬಂದಿ ಒಂದು ದಿನ ಬಿಟ್ಟು ದಿನ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಲಾಕ್ಡೌನ್ ಸಮಯದಲ್ಲಿನ 6 ದಿನದ ಕೆಲಸಕ್ಕೆ 1 ದಿನದ ಹೆಚ್ಚಿನ ಸಂಬಳ ಕೊಡುವುದು, ಕೋವಿಡ್ ರೋಗದ ಅವಧಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲ ಸಿಬ್ಬಂದಿಗೆ 30 ಲಕ್ಷ ರೂ. ವಿಮೆ ಸೌಲಭ್ಯ ನೀಡಬೇಕು. ಗರ್ಭಿಣಿ-ಅಂಗವಿಕಲ ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಅವಕಾಶ ನೀಡಬೇಕು. ಗ್ರಾಮೀಣ ಬ್ಯಾಂಕ್ಗಳ ವಿಲೀನಪೂರ್ವ ಸೌಲಭ್ಯಗಳನ್ನೇ ವಿಲೀನೋತ್ತರವೂ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಡಿ.ಎನ್. ತ್ರಿವೇದಿ, ಸಿ.ಎ. ಗಂಟೆಪ್ಪಗೋಳ, ಶಿವಾಜಿ ಇನಾಮದಾರ, ಕಲ್ಲಪ್ಪ ಪರಶೆಟ್ಟಿ, ಗೋಪಾಲ ಕಾಂಬಳೆ, ಸಾಯಬಣ್ಣ ಬೆಳಗಾವಿ, ಪ್ರೇಮಾ, ಕವಿತಾ, ವೀಣಾ, ವಿಜಯಾ ಪರವತಿಕರ, ಅರುಣ ರೆಡ್ಡಿ, ಸವಿತಾ ಕೋರಿ, ಸಿದ್ದು ಗವಾರ, ಸುನೀಲ ನಾಯಕ ಇತರರು ಇದ್ದರು.