ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ: 3 ಅಂಗಡಿಗಳು ಬೆಂಕಿಗಾಹುತಿ
Team Udayavani, Jun 9, 2022, 11:14 AM IST
ಹನೂರು: ಆಕಸ್ಮಿಕ ಬೆಂಕಿ ತಗುಲಿ 3 ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದ ಮುಡಿಶೆಡ್ನ ಎದುರುಗಡೆಯ ಹನುಮಂತು ಎಂಬುವವರಿಗೆ ಸೇರಿದ 3 ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ದಟ್ಟ ಹೊಗೆ ಆವರಸಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪ್ರಾಧಿಕಾರದ ವಾಟರ್ ಟ್ಯಾಂಕ್ನಲ್ಲಿ ನೀರನ್ನು ತರಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಿಂದಾಗಿ ಹನುಮಂತು ಎಂಬುವವರಿಗೆ ಸೇರಿದ 2 ಬಟ್ಟೆ ಅಂಗಡಿ, 1 ದಿನಸಿ ಸಾಮಾಗ್ರಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಿಂದಾಗಿ ಅಂಗಡಿಯಲ್ಲಿದ್ದ ಬಟ್ಟೆಗಳು, ಜ್ಯೂಸ್ ಬಾಟಲಿಗಳು, ರೆಫ್ರಿಜರೇಟರ್, ದಿನನಿತ್ಯ ಬಳಕೆಯ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ಅಂದಾಜು 10ಲಕ್ಷರೂ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ: ಐವರ ಬಂಧನ
ಶಾಸಕರಿಂದ ಸೂಚನೆ: ಘಟನೆಯ ಬಗ್ಗೆ ಮಾಹಿತಿ ತಿಳಿದ ಶಾಸಕ ನರೇಂದ್ರ, ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಮತ್ತು ಉಪಕಾರ್ಯದರ್ಶಿ ಬಸವರಾಜು ಆವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಸ್ಥಳಕ್ಕೆ ತೆರಳಿ ಘಟನೆಯ ಬಗ್ಗೆ ಪ್ರಾಥಮಿಕ ವರದಿ ನೀಡುವಂತೆ ಮತ್ತು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.