ಸೆಸ್ಕ್ ಕಿರಿಯ ಎಂಜಿನಿಯರ್ ಮೇಲೆ ಪವರ್ಮ್ಯಾನ್ ಮಚ್ಚಿನಿಂದ ಹಲ್ಲೆ
Team Udayavani, Jan 28, 2021, 4:37 PM IST
ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ಪವರ್ಮ್ಯಾನ್ ಓರ್ವರು ಕಿರಿಯ ಎಂಜಿನಿಯರ್ ಅವರಿಗೆ ಕಚೇರಿಯಲ್ಲೇ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬದನಗುಪ್ಪೆಯಲ್ಲಿ ಬುಧವಾರ ಜರುಗಿದೆ.
ಬದನಗುಪ್ಪೆ ಸೆಸ್ಕ್ ಶಾಖಾ ಕಚೇರಿಯ ಶಾಖಾ ಅಧಿಕಾರಿ, ಪ್ರಭಾರ ಕಿರಿಯ ಎಂಜಿನಿಯರ್ ಚಂದ್ರನಾಯಕ ಹಲ್ಲೆ ಗೊಳಗಾದವರು. ಪವರ್ಮ್ಯಾನ್ ಆರ್. ಎಂ. ಮಹದೇವಸ್ವಾಮಿ ಹಲ್ಲೆ ನಡೆಸಿದ ವರಾಗಿದ್ದು, ಆರೋಪಿಯನ್ನು ಪೊಲೀ ಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಚಂದ್ರನಾಯಕ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪವರ್ಮ್ಯಾನ್ ಮಹದೇವಸ್ವಾಮಿಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಅವರು ದುರ್ನಡತೆ, ಅವಿಧೇ ಯತೆ, ಅನಧಿಕೃತ ಗೈರು ಹಾಜರಿ ಮತ್ತು ಕರ್ತವ್ಯ ನಿರತ ಅಧಿಕಾರಿಗೆ ಅಡಚಣೆ ಮಾಡಿದ ಕಾರಣದಿಂದ ಸೇವೆಯಿಂದ ಅಮಾನತು ಗೊಳಿಸಿದ್ದಾರೆ.
ಬದನಗುಪ್ಪೆ ಶಾಖಾ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ಚಂದ್ರನಾಯಕ್ ಹಾಗೂ ಪವರ್ಮ್ಯಾನ್ ಮಹದೇವಸ್ವಾಮಿ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಪದೇ ಪದೆ ಇವರಿಬ್ಬರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯುತ್ತಿತ್ತೆನ್ನಲಾಗಿದೆ. ಜ. 26ರಿಂದ ಮೂರು ದಿವಸ ಚಾಮರಾಜ ನಗರ ಉಪವಿಭಾಗ ಕಚೇರಿಯಲ್ಲಿಕರ್ತವ್ಯ ನಿರ್ವಹಿಸುವಂತೆ ಕಿರಿಯ ಎಂಜಿನಿಯರ್ ಸೂಚಿಸಿದ್ದರು.
ಇದನ್ನೂ ಓದಿ:ಪೊಲೀಸ್ ಪಹರೆಯಲ್ಲಿ ಹಳ್ಳಿ ಸುತ್ತಿದ ಮಾಜಿ ಶಾಸಕ!
ಮಹದೇವಸ್ವಾಮಿ ಜ.26ರಂದು ಒಂದು ದಿನ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಬುಧವಾರ ಬೆಳಿಗ್ಗೆ ಬದನಗುಪ್ಪೆ ಶಾಖಾ ಕಚೇರಿ ಕೆಲಸದಲ್ಲಿ ಬರೆಯುತ್ತಾ ಕುಳಿತಿದ್ದ ಕಿರಿಯ ಎಂಜಿನಿಯರ್ ಚಂದ್ರನಾಯಕ ಅವರ ಬಳಿ ತೆರಳಿದ ಮಹದೇವಸ್ವಾಮಿ ಮಚ್ಚಿನಿಂದ ಅವರ ತಲೆಗೆ, ಕೈಗೆ, ಹೊಡೆದಿದ್ದಾನೆ.
ಅಚಾನಕ್ ಆಗಿ ನಡೆದ ಈ ಘಟನೆ ಕಂಡ ಇತರ ಸಿಬ್ಬಂದಿ ಚಂದ್ರನಾಯಕ್ ಅವರ ರಕ್ಷಣೆಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಲತಃ ಚಾಮರಾಜನಗರ ರಾಮ ಸಮುದ್ರದವರಾದ ಪವರ್ಮ್ಯಾನ್ ಮಹದೇವ ಸ್ವಾಮಿ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೆಸ್ಕ್ ಇಇ ಅವರು ಘಟನೆಯ ಕುರಿತು ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.