ಮಳೆ ನೀರು ನಮ್ಮದೆನ್ನುವ ಭಾವನೆ ಇರಲಿ
Team Udayavani, Jul 1, 2019, 3:00 AM IST
ಚಿಂತಾಮಣಿ: ಮಳೆ ನೀರು ನಮ್ಮದು ಎನ್ನುವ ಭಾವನೆ ಜನರಲ್ಲಿ ಉಂಟಾಗಬೇಕು. ಮಳೆ ನೀರು ಲಕ್ಷ್ಮೀ ಇದ್ದಂತೆ, ಹರಿಯಬಿಡಬಾರದು ಎಂದು ಕೆರೆ ಮತ್ತು ಕೊಳವೆ ಬಾವಿ ಜಲ ಮರುಪೂರಣದ ಮೂಲಕ ವಿಶ್ವದಾಖಲೆ ಹೊಂದಿರುವ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿರುವ ಅಯ್ಯಪ್ಪ ಮಸಗಿ ಅಭಿಪ್ರಾಯಪಟ್ಟರು.
ಕೈವಾರದ ಯೋಗಿನಾರೇಯಣ ಮಠದಲ್ಲಿ ಬೆಂಗಳೂರಿನ ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿರುವ “ಗ್ರಾಮೀಣ ಭಾರತಕ್ಕೆ ವಿಜ್ಞಾನ, ಶಿಕ್ಷಣ ಮತ್ತು ತಂತ್ರಜ್ಞಾನ” ವಿಷಯದ ಬಗ್ಗೆ ಏಳು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪರಂಪರೆಗೆ ಪೆಟ್ಟು: ಹಿಂದೆ ಗ್ರಾಮಗಳಿಂದ ಶೇ.10 ರಷ್ಟು ಜನ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದರು. ಈಗ ಕೃಷಿಯಿಂದ ವಿಮುಖರಾಗಿ ಶೇ. 50% ಕೃಷಿಕರು ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ರಾಜರಂತೆ ಬಾಳಿದ ಕೃಷಿಕರು ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದೊಂದು ದುರಂತವಷ್ಟೇ ಅಲ್ಲ, ಕೃಷಿ ಪರಂಪರೆಗೆ ದೊಡ್ಡ ಪೆಟ್ಟು. ಉತ್ತಮ ಮಳೆಯಾದರೆ, ಆ ಮಳೆಯನ್ನು ಹಿಡಿದಿಟ್ಟುಕೊಂಡು ಕೃಷಿ ಮಾಡುವ ಪದ್ಧತಿಯನ್ನು ಬೆಳೆಸಬೇಕು. 900 ಕಡೆಗಳಲ್ಲಿ ಈ ರೀತಿಯ ಪದ್ಧತಿಯನ್ನು ಅಳವಡಿಸಿ ಯಶಸ್ವಿಯಾಗಿದ್ದೇನೆ ಎಂದರು.
ಪರಿಹಾರೋಪಾಯಕ್ಕೆ ಒತ್ತಾಯ: ಮುಂಬರುವ ಎಲ್ಲಾ ಕೃಷಿ ಕಾರ್ಯಕ್ರಮಗಳು ಸಣ್ಣ, ಅತಿ ಸಣ್ಣ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಬೇಕು. ಒಣ ಬೇಸಾಯ ಪ್ರದೇಶವನ್ನು ಅಲಕ್ಷ್ಯ ಮಾಡಕೂಡದು. ಮಳೆಯಾಶ್ರಿತ ಪ್ರದೇಶಕ್ಕೆ ವಿಶೇಷ ತಂತ್ರಜ್ಞಾನ ಬಳಕೆಗೆ ಒತ್ತು ಕೊಡಬೇಕು. ಕೂಲಿಯಾಳಿನ ಸಮಸ್ಯೆ, ಮಾರುಕಟ್ಟೆ ಬೆಲೆ ಅನಿಶ್ಚಿತತೆಗೆ ಪರಿಹಾರೋಪಾಯಗಳನ್ನು ರಾಜ್ಯ-ಕೇಂದ್ರ ಸರ್ಕಾರಗಳು ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದರು.
ದೇಶದೆಲ್ಲೆಡೆ ಸರಬರಾಜು ಆಗಲಿ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮೀಣ ಸ್ವರಾಜ್ ಪ್ರತಿಪಾದಕ ಗುಜರಾತ್ನ ವೇಲ್ಜೀಬಾಯ್ ದೇಸಾಯಿ ಮಾತನಾಡಿ, ಮಾನವನು ಬಳಸುವ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಕೇಂದ್ರಗಳನ್ನು ವಿಕೇಂದ್ರಿಕರಣಗೊಳಿಸಬೇಕು. ಕೋಟ್ಯಂತರ ರೂ.ಗಳನ್ನು ಒಂದೆಡೆ ಹಾಕಿ ಅಲ್ಲಿಂದ ಉತ್ಪಾದಿಸಿದ ಸಾಮಗ್ರಿಗಳನ್ನು ದೇಶದೆಲ್ಲೆಡೆ ಸರಬರಾಜು ಮಾಡುವುದು ತಪ್ಪು.
ಎಲ್ಲಾ ಗ್ರಾಮಗಳಲ್ಲಿ ಉತ್ಪನ್ನಗಳನ್ನು ಮನೆ ಮನೆಗಳಲ್ಲಿ ತಯಾರಿಸುವಂತೆ ಆಗಬೇಕು. ಇದೇ ಕೆಲಸವನ್ನು ನಾನು ನನ್ನ ಗ್ರಾಮದಲ್ಲಿ ಮಾಡುತ್ತಿದ್ದು, ದಕ್ಷಿಣ ಆಫ್ರಿಕಾಕ್ಕೆ ನಾವು ತಯಾರಿಸುವ ವಸ್ತುಗಳನ್ನು ರಫ್ತು ಮಾಡುತ್ತಿದ್ದೇನೆ.
ಗ್ರಾಮ ಕೈಗಾರಿಕೆ, ಗುಡಿ ಕೈಗಾರಿಕೆಗಳನ್ನು ಬೆಳೆಸಬೇಕು ಎನ್ನುವುದು ಮಹಾತ್ಮ ಗಾಂಧೀಜಿರವರ ಕನಸು. ಸ್ವಂತವಾಗಿ ಉತ್ಪಾದಿಸಬೇಕು, ಸ್ವಂತವಾಗಿ ಬಳಸಬೇಕು. ಗಾಂಧೀಜಿಯವರು ಇದನ್ನು ದೈವಿ ಸಂತೋಷ ಎಂದು ಕರೆದಿದ್ದಾರೆ. ಮಾನವನು ಸಂತೋಷಕ್ಕಾಗಿ ಬದುಕಬೇಕಾಗಿದೆ. ಕಬ್ಬಿನಹಾಲು ರಾಷ್ಟ್ರೀಯ ಪಾನೀಯವಾಗಬೇಕೆಂದು ಬಯಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ರಾಮಯ್ಯ ತಾಂತ್ರಿಕ ವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಸಿ.ಜಿ.ಪುಟ್ಟಪ್ಪ, ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ತಲ್ಲಂ ವೆಂಕಟೇಶ್, ಡಾ.ರಾಜೀ ಜಾರ್ಚ್, ಕಾರ್ಯಾಗಾರದ ಸಂಯೋಜಕರಾದ ಡಾ.ಬಿ.ಪಿ.ಹರಿಚಂದ್ರ, ಡಾ.ದಿನೇಶ್, ಡಾ.ನಾಗಭೂಷಣ್ ಉಪಸ್ಥಿತರಿದ್ದರು.
ಡಾ.ರಾಜೀ ಜಾರ್ಚ್ ಸ್ವಾಗತಿಸಿ, ಡಾ.ಎನ್.ಎಲ್.ರಮೇಶ್ ವಂದಿಸಿದರು. ಕಾರ್ಯಾಗಾರದಲ್ಲಿ ಕರ್ನಾಟಕ, ಮಧ್ಯಪ್ರದೇಶ, ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಮುಂತಾದ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಒಂದು ವಾರಗಳ ಕಾಲ ಈ ಕಾರ್ಯಾಗಾರವು ನಡೆಯಲಿದೆ.
ಪ್ರಕೃತಿಯ ಧರ್ಮ ಶ್ರೇಷ್ಠ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಪ್ರಕೃತಿಯ ಧರ್ಮ ಶ್ರೇಷ್ಠವಾದುದು. ಮಾನವರು ಪ್ರಕೃತಿಯ ಧರ್ಮವನ್ನು ನಾಶಮಾಡಿ ಕಷ್ಟಗಳನ್ನು ಇಂದಿನ ದಿನಗಳಲ್ಲಿ ಅನುಭವಿಸುವಂತಾಗಿದೆ.
ಅನೇಕ ವರ್ಷಗಳಿಂದ ಪೂರ್ವಜರು ಕಾಪಾಡಿಕೊಂಡು ಬಂದಿದ್ದ ಪ್ರಾಕೃತಿಕ ಸಂಪತ್ತನ್ನು ಕೇವಲ 200 ವರ್ಷಗಳಲ್ಲಿ ಹಾಳಾಗಿರುವುದು ದುರಂತ. ಈ ಬಗ್ಗೆ ಚಿಂತನೆ ನಡೆಸಿ ಸಮಾಜಮುಖೀಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಪ್ರಸ್ತುತ ವಿಜ್ಞಾನವನ್ನು ಪ್ರತಿಪಾದಿಸುತ್ತಿರುವ ವಿಧಾನವನ್ನು ಸರಿಪಡಿಸಿಕೊಳ್ಳಬೇಕು. ವಿಜ್ಞಾನವು ಮಾನವನ ಎಲ್ಲಾ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ವಿಜ್ಞಾನದ ಸಹಾಯವಿಲ್ಲದೇ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ದೇವಾಲಯಗಳನ್ನು ಕಬ್ಬಿಣದ ಸಹಾಯದಿಂದ ಕಟ್ಟಿದ್ದಾರೆ.
ಅವುಗಳಲ್ಲಿ ಒರಿಸ್ಸಾ ಕೋನಾರ್ಕ್ನ ಸೂರ್ಯ ದೇವಾಲಯವು ಒಂದು ಎಂದರು. ಇಡೀ ವಿಶ್ವಕ್ಕೆ ಹವಾಮಾನ ವೈಪರೀತ್ಯ ಸವಾಲಾಗಿ ಪರಿಣಮಿಸಿದೆ. ಸ್ವಾಭಾವಿಕ ಅರಣ್ಯದಿಂದ, ಕಾಂಕ್ರೀಟ್ ಅರಣ್ಯವನ್ನು ನಿರ್ಮಿಸುತ್ತಿರುವುದೇ ಇದೆಲ್ಲಕ್ಕೂ ಮೂಲ ಕಾರಣವಾಗಿದೆ. ಪ್ರಕೃತಿಯನ್ನು ದುರುಪಯೋಗ ಪಡಿಸಿಕೊಳ್ಳದೆ ರಕ್ಷಿಸಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ