ಭಗವದ್ಗೀತೆ ಸಾರ್ವಕಾಲಿಕ ಸತ್ಯ
ವಿಎಚ್ಪಿ ಸಂಸ್ಥಾಪನಾ ದಿನ, ಮೊಸರು ಕುಡಿಕೆ ಉತ್ಸವದಲ್ಲಿ ಚಂದ್ರಶೇಖರ ಸ್ವಾಮೀಜಿ ಅಭಿಮತ
Team Udayavani, Aug 26, 2019, 12:13 PM IST
ಚಿಕ್ಕಮಗಳೂರು: ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಏರ್ಪಡಿಸಿದ್ದ ಮೊಸರು ಕುಡಿಕೆ ಉತ್ಸವದಲ್ಲಿಭಾಗವಹಿಸಿದ್ದ ಯುವಪಡೆ.
ಚಿಕ್ಕಮಗಳೂರು: ಶ್ರೀ ಕೃಷ್ಣನ ಉಪದೇಶಾಮೃತವಾದ ಭಗವದ್ಗೀತೆ ಸಾರ್ವಕಾಲಿಕ ಸತ್ಯ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ನಗರದ ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ವಿಶ್ವಹಿಂದೂ ಪರಿಷತ್ತು ಮತ್ತು ಭಜರಂಗದಳದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಮೊಸರು ಕುಡಿಕೆ ಉತ್ಸವ, ವಿಎಚ್ಪಿ ಸಂಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಛದ್ಮವೇಷಧಾರಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಕೃಷ್ಣ ಗೋವಿನಲ್ಲಿ ಸರ್ವಸ್ವವನ್ನು ಕಂಡಿದ್ದ, ದುರಾದೃಷ್ಟ ಈಗ ಗೋ ತಳಿಯೇ ಅಳಿವಿನಂಚಿಗೆ ಹೋಗಿದೆ. ಇದಕ್ಕೆ ನಾವೇ ಕಾರಣರಾಗಿದ್ದೇವೆ. ವಿನಾಶದತ್ತ ಹೋಗುತ್ತಿರುವ ಗೋ ರಕ್ಷಣೆಗಾಗಿ ಮತ್ತೂಮ್ಮೆ ಶ್ರೀಕೃಷ್ಣ ಅವತಾರ ತಾಳಿ ಈ ಲೋಕಕ್ಕೆ ಬರಬೇಕಿದೆ ಎಂದು ಅಭಿಪ್ರಾಯಿಸಿದರು.
ಭಜರಂಗದಳ ಜಿಲ್ಲಾ ಸಂಚಾಲಕ ತುಡಿಕೂರು ಮಂಜು ಮಾತನಾಡಿ, ಶ್ರೀಕೃಷ್ಣನ ಅವತಾರವೇ ವಿಸ್ಮಯಕಾರಿ. ಆತನ ಜನ್ಮ ಚರಿತ್ರೆ ರೋಮಾಂಚಕ. ಕಂಸನ ಸಂಹಾರಕ್ಕಾಗಿಯೇ ಅವತಾರ ಎತ್ತಿ ಬಂದ ಶ್ರೀಕೃಷ್ಣ ಶಿಷ್ಟರ ರಕ್ಷಣೆ, ದುಷ್ಟರ ಸಂಹಾರ ಮಾಡಿದ್ದಾನೆ ಎಂದು ತಿಳಿಸಿದರು.
ವಿಎಚ್ಪಿ, ಭಜರಂಗದಳ ಮುಖಂಡರಾದ ಯೋಗೀಶ್ರಾಜ ಅರಸ್, ಪ್ರೇಮ್ಕಿರಣ್, ಮುರುಳೀಧರಕಿಣಿ, ಗದ್ದೆಮನೆ ಪೂರ್ಣೇಶ್, ಜಾನಕಿರಾಮ್ ಮತ್ತಿತರರು ಹಾಜರಿದ್ದರು.
ಮೊಸರು ಕುಡಿಕೆ ಉತ್ಸವ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ತಾಲೂಕಿ ವಿವಿಧ ಹಳ್ಳಿ ಹಾಗೂ ಪಟ್ಟಣದ ನಾನಾ ಭಾಗದಿಂದ ಯುವ ಪಡೆಗಳು ಭಾಗವಹಿಸಿದ್ದವು. 2 ಕಂಬ ನೆಟ್ಟು ಅಂದಾಜು 20 ಅಡಿ ಎತ್ತರದಲ್ಲಿ ಕಟ್ಟಿದ್ದ ಮೊಸರು ಕುಡಿಕೆಯನ್ನು ಒಡೆಯುವುದು ಯುವಕರಿಗೆ ಸವಾಲಾಗಿತ್ತು. ಪಿರಮಿಡ್ ಮಾದರಿಯಲ್ಲಿ ಒಬ್ಬರ ಭುಜದ ಮೇಲೆ ಮತ್ತೂಬ್ಬರು ಹತ್ತಿ ಇನ್ನೇನು ಮಡಿಕೆ ಒಡೆಯಬೇಕು ಎನ್ನುವಷ್ಟರಲ್ಲಿ ಪಿರಮಿಡ್ಡೇ ಕುಸಿದು ಬೀಳುತ್ತಿತ್ತು. ಯುವಕರ ಉತ್ಸಾಹಕ್ಕೆ ಸಹಪಾಠಿಗಳು ತಣ್ಣೀರೆರಚಿ ಮತ್ತಷ್ಟು ಹುಮ್ಮಸ್ಸು ತುಂಬುತ್ತಿದ್ದರೆ, ಬ್ಯಾಂಡ್ ವಾದನದ ಮೂಲಕ ಯುವಕರ ಕೆಚ್ಚನ್ನು ಮತ್ತಷ್ಟು ಬಡಿದೆಬ್ಬಿಸಲಾಗುತ್ತಿತ್ತು.
ವಿಜಯಪುರದ ವಾಯುಪುತ್ರ, ಕಿಂಗ್ಬಾಯ್, ವೀರಕೇಸರಿ, ಶ್ರೀದತ್ತಾ, ಎಬಿವಿಪಿ ಗುಂಪುಗಳು ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶ್ರೀಕೃಷ್ಣ ವೇಷಧಾರಿಗಳಾಗಿದ್ದ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು.