ಅಂಬಿಗರ ಚೌಡಯ್ಯರ ತತ್ವಾದರ್ಶ ಪಾಲಿಸಿ
ವಚನ ಸಾಹಿತ್ಯದ ಸಂದೇಶ ಪಾಲನೆಯಿಂದ ಸಾರ್ಥಕ ಬದುಕು: ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ
Team Udayavani, Jan 22, 2021, 6:24 PM IST
ಚಿತ್ರದುರ್ಗ: 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದರು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಸಾಕಷ್ಟು ಶ್ರಮಿಸಿದರು ಎಂದು ಅಪರ ಜಿಲ್ಲಾಧಿ ಕಾರಿ ಬಾಲಕೃಷ್ಣ ಹೇಳಿದರು.
ಜಿಲ್ಲಾ ಧಿಕಾರಿ ಕಚೇರಿ ಸಭಾಗಂಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯನೀಡಿದ ತತ್ವಾದರ್ಶಗಳನ್ನು ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉಜ್ವಲವಾಗಲಿದೆ. ಅವರ ವಚನಗಳ ಸಂದೇಶ, ತತ್ವಾದರ್ಶಗಳನ್ನು ಇಡೀ ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇದನ್ನೂ ಓದಿ : ಮಹಾನಗರ ಪಾಲಿಕೆಯಿಂದ ಕರ ಸಂಗ್ರಹ ಕ್ಯಾಂಪ್ ಆರಂಭ
ಉಪವಿಭಾಗಾ ಧಿಕಾರಿ ಡಾ| ನಾಗರಾಜ್ ಮಾತನಾಡಿ, ಅಂಬಿಗರ ಚೌಡಯ್ಯ ಅಂಬಿಗರ ವೃತ್ತಿಯ ತಮ್ಮ ಅನುಭವದ ಮೇಲೆ ವಚನಗಳನ್ನು ರಚಿಸಿದ್ದಾರೆ. ಬೇರೆ ವಚನಕಾರರು, ಶರಣರಂತೆ ಅಂಬಿಗ ಚೌಡಯ್ಯ ಇಷ್ಟ ದೈವವನ್ನು ಹೊಂದಿರದೆ ತಮ್ಮ ವೃತ್ತಿಯ ಅನುಭವದ ಮೂಲಕ ವಚನ ರಚಿಸಿ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಹಾಗಾಗಿ ಬಸವಣ್ಣನವರು ಅಂಬಿಗರ ಚೌಡಯ್ಯ ಅವರನ್ನುನಿಜಶರಣ ಎಂದು ಕರೆದಿದ್ದಾರೆ ಎಂದು ಹೇಳಿದರು.
ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಎಚ್.ಡಿ. ರಂಗಯ್ಯ ಮಾತನಾಡಿ, ಅಂಬಿಗರ ಚೌಡಯ್ಯ ಜಯಂತಿಯನ್ನು ನಾಡಿನಾದ್ಯಂತ ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಕೋವಿಡ್ ನಡುವೆಯೂ ಸರಳವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ನಿಜಶರಣರನ್ನು ಸ್ಮರಿಸುವ ಕೆಲಸ ಮಾಡಲಾಗಿದೆ. ಸಮಾಜ ಬಾಂಧವರು ಚೌಡಯ್ಯ ಅವರ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಸ್. ಕೃಷ್ಣಮೂರ್ತಿ ಮಾತನಾಡಿ, ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಲು ಯತ್ನಿಸಿದ್ದರು. ಅವರ ವಚನಗಳ ಮೂಲಕ ಸಮಾಜದ ಓರೆ-ಕೋರೆಯನ್ನು ತಿದ್ದಲು ಸಾಧ್ಯವಿದೆ. ನಿಷ್ಠುರ, ನೇರ ನುಡಿಯ ನಿಜಶರಣ ಅಂಬಿಗರ ಚೌಡಯ್ಯ ಜೀವನದಲ್ಲಿ ಮುಕ್ತಿ ಕಾಣುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿ ಕಾರಿ ಅವಿನ್, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ರಂಗನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ ಸೇರಿದಂತೆ ಗಂಗಾಮತ ಸಮಾಜದ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ರೈತರ ಅನುಕೂಲಕ್ಕಾಗಿ ಕ್ವಿಂಟಲ್ ತೊಗರಿಗೆ 6 ಸಾವಿರ ರೂ.