ಕುಡುಕರ ತಾಣವಾದ ವಿದ್ಯಾ ದೇಗುಲ ಆವರಣ!
Team Udayavani, Jun 2, 2020, 6:55 AM IST
ಹೊಳಲ್ಕೆರೆ: ಸರ್ಕಾರಿ ಮಾದರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಎಸೆಯಲಾಗಿರುವ ಮದ್ಯದ ಪ್ಯಾಕೆಟ್ಗಳು.
ಹೊಳಲ್ಕೆರೆ: ಕೋವಿಡ್-19 ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಪುನರಾರಂಭ ಮುಂದಕ್ಕೆ ಹೋಗಿದೆ. ಇದರಿಂದಾಗಿ ಪಟ್ಟಣದ ಸರ್ಕಾರಿ ಶಾಲೆಗಳ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆ ಕೂಡ ಇದರಿಂದ ಹೊರತಾಗಿಲ್ಲ. ಈ ಶಾಲೆಯ ಪಕ್ಕದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಿಆರ್ಸಿ ಕಚೇರಿಗಳಿವೆ. ಹೈಟೆಕ್ ಶಾಲೆಯ ಪಕ್ಕದ ಗಣಪತಿ ರಸ್ತೆ, ಹೊಸದುರ್ಗ ಹಾಗೂ ಶಿವಮೊಗ್ಗ ರಸ್ತೆಯ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುತ್ತದೆ.
ಮದ್ಯ ಸೇನೆ ಮಾಡಿ ವಿಶ್ರಾಂತಿ ಪಡೆಯಲು ಈ ಶಾಲೆ ಆವರಣ ಕುಡುಕರ ಪಾಲಿನ ಆಶ್ರಯ ತಾಣವಾಗಿದೆ. ನಿತ್ಯ ಸಾವಿರಾರು ಕುಡುಕರು ಶಾಲೆಯ ಆವರಣದಲ್ಲಿ ಮದ್ಯ ಸೇವನೆ ಮಾಡಿ ಕವರ್ಗಳನ್ನು ಶಾಲೆಯ ಆವರಣದಲ್ಲೇ ಬಿಸಾಕಿ ಹೋಗುತ್ತಿದ್ದಾರೆ. ಬೆಳಗಿನ ಜಾವ 5ಕ್ಕೆ ಶಾಲೆಯ ಆವರಣಕ್ಕೆ ಹಾಜರಾಗುವ ಕುಡುಕರು ಸಂಜೆ ತನಕ ಅಲ್ಲಿಯೇ ಬೀಡುಬಿಟ್ಟಿರುತ್ತಾರೆ. ಆದರೂ ಗಸ್ತು ತಿರುಗುವ ಪೊಲೀಸರು, ಶಾಲೆಯ ಸಿಬ್ಬಂದಿ ಸೇರಿದಂತೆ ಯಾರೊಬ್ಬರೂ ಈ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಗಣಪತಿ ರಸ್ತೆಯ ಮದ್ಯಂಗಡಿಯಿಂದ ಮದ್ಯ ಖರೀದಿಸುವ ಕುಡುಕರು ಶಾಲೆಯ ಆವರಣಲ್ಲಿ ಕುಳಿತು ಸೇವನೆ ಮಾಡುತ್ತಾರೆ. ಬೆಳಿಗ್ಗೆಯಿಂದ ತಡರಾತ್ರಿ ತನಕ ಮದ್ಯಪಾನ ಮಾಡುತ್ತಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಮಾಪೂಜ್, ಸಾಮಾಜಿಕ ಕಾರ್ಯಕರ್ತ
ಶಾಲೆಯ ಆವರಣವನ್ನು ದುರ್ಬಳಕೆ ಮಾಡಿಕೊಳ್ಳುವ ಯಾವುದೇ ವ್ಯಕ್ತಿಯಾದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕೆ. ನಾಗರಾಜ್, ತಹಶೀಲ್ದಾರ್