ನೀರು, ಅನ್ನ , ಬಟ್ಟೆ ಒದಗಿಸಲು ಅಕ್ಷಯ ಧಾಮ
Team Udayavani, Apr 1, 2018, 10:14 AM IST
ಮಹಾನಗರ: ಕೊಡಿಯಾಲಬೈಲ್ನ ಬಿಷಪ್ಸ್ ಹೌಸ್ ಆವರಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಕೆಲವು ವರ್ಷಗಳಿಂದ ಇದ್ದು, ಈಗ ಉಚಿತ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಈಸ್ಟರ್ ಹಬ್ಬದ ಕೊಡುಗೆಯಾಗಿ ಎ. 1ರಂದು ಇದು ಉದ್ಘಾಟನೆಗೊಳ್ಳಲಿದೆ.
ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ರವಿವಾರ ಈ ಸೌಲಭ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ವ್ಯವಸ್ಥೆಯನ್ನು ‘ಮಂಗಳೂರು ಧರ್ಮ ಪ್ರಾಂತ ಅಕ್ಷಯ ಧಾಮ’ ಎಂದು ಹೆಸರಿಸಲಾಗಿದೆ.
ಕಪಾಟಿನ ವ್ಯವಸ್ಥೆ
ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಸೌಲಭ್ಯವನ್ನು 2015ರಲ್ಲಿ ಇಲ್ಲಿ ಆರಂಭಿಸಲಾಗಿದ್ದು, ಪ್ರತಿದಿನ ನೂರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ಅಲ್ಲಿರುವ ಪ್ರಾರ್ಥನ ಮಂದಿರದ ಮುಂಭಾಗದ ಮೂಲೆಯಲ್ಲಿ ಫ್ರಿಜ್ ಇಟ್ಟು ಹಸಿದವರಿಗೆ ಅನ್ನ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹೊಸ ಬಟ್ಟೆಗಳನ್ನು ಕೂಡ ಒದಗಿಸಲು ಕಪಾಟಿನ ವ್ಯವಸ್ಥೆ ಮಾಡಲಾಗಿದೆ.
ಅನ್ನದಾನ ಮಾಡಲು ಬಯಸುವವರು ದಾನ ಮಾಡುವುದಕ್ಕಾಗಿಯೇ ತಯಾರಿಸಿದ ತಾಜಾ ಅನ್ನ ಮತ್ತು ಸಾಂಬಾರನ್ನು ಈ ಫ್ರಿಜ್ನಲ್ಲಿ ಹಾಗೂ ವಸ್ತ್ರ ದಾನ ಮಾಡಲು ಬಯಸುವರು ಹೊಸ ಬಟ್ಟೆಗಳನ್ನು ಮಾತ್ರ ಇಲ್ಲಿರುವ ಕಪಾಟಿನಲ್ಲಿ ಇರಿಸಬಹುದಾಗಿದೆ. 2017ರ ಡಿಸೆಂಬರ್ನಲ್ಲಿ ಬಿಷಪ್ಸ್ ಹೌಸ್ನಲ್ಲಿ ಮಾಧ್ಯಮದವರ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಬಿಷಪ್ ಅವರು ಈ ಅಕ್ಷಯ ಧಾಮ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದರು.