ಸುಳ್ವಾಡಿ ಪ್ರಸಾದ ವಿಷ ದುರಂತ: ತಬ್ಬಲಿಗಳ ದತ್ತು: ಆಳ್ವಾಸ್ ನಿರ್ಧಾರ
Team Udayavani, Dec 18, 2018, 10:46 AM IST
ಮೂಡುಬಿದಿರೆ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷ ಬೆರೆತ ಪ್ರಸಾದ ಸೇವನೆಯಿಂದ ಮೃತಪಟ್ಟ ಕೃಷ್ಣ ನಾಯ್ಕ- ಮೈಲಿ ಬಾಯಿ ದಂಪತಿಯ ಮೂವರು ಮಕ್ಕಳನ್ನು ದತ್ತು ಸ್ವೀಕರಿಸಲು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಿರ್ಧರಿಸಿದೆ. ಮಕ್ಕಳ ಖಚಿತ ಅಭಿಪ್ರಾಯ ಪಡೆದು ವ್ಯವಸ್ಥೆ ಕಲ್ಪಿಸುವುದಾಗಿ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಮಂಗಳವಾರ ಆಳ್ವಾಸ್ನ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ| ಕುರಿಯನ್ (ಪದವಿ ಕಾಲೇಜು), ಡಾ| ಯತಿಕುಮಾರಸ್ವಾಮಿ ಗೌಡ (ನರ್ಸಿಂಗ್ ಕಾಲೇಜು) ಹಾಗೂ ಪ್ರಶಾಂತ ಎಂ.ಡಿ. (ಪ.ಪೂ. ಕಾಲೇಜು) ಅವರು ಮೂವರು ಮಕ್ಕಳು ಹಾಗೂ ಅವರ ಸಂಬಂಧಿಕರನ್ನು ಭೇಟಿ ಮಾಡಿ, ಅವರಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ದಂಪತಿಯ ಹಿರಿಯ ಮಗಳು ರಾಣಿಬಾಯಿ ಎಸ್ಸಿ, ಎರಡನೇ ಮಗಳು ಪ್ರಿಯಾಬಾಯಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಹಾಗೂ ಮಗ ರಾಜೇಶ್ ನಾಯ್ಕ ಪಿಯುಸಿ ವ್ಯಾಸಂಗವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಮುಂದುವರಿಸುವುದಾದರೆ ಅವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗುವುದು. ವ್ಯಾಸಂಗದ ಬಳಿಕ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಿಭಾಯಿಸಲು ನಿರ್ಧರಿಸಿದೆ ಎಂದು ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.