ಅರಂತೋಡು: ಹೊಳೆ ತೋಡಿನಲ್ಲಿ ಕುಸಿದ ನೀರಿನ ಪ್ರಮಾಣ
Team Udayavani, Nov 8, 2018, 10:22 AM IST
ಅರಂತೋಡು: ಕಳೆದ ವರ್ಷಕ್ಕೆ ಹೋಲಿಸಿದರೆ ಸುಳ್ಯ ತಾಲೂಕಿನ ಹೊಳೆ ತೋಡಿನಲ್ಲಿ ನೀರಿನ ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿತಗೊಂಡಿದೆ. ಬೇಸಗೆಯಲ್ಲಿ ರೈತರಿಗೆ ನೀರಿಗೆ ಬರ ಎದುರಾಗುವ ಆತಂಕ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟು, ಸಾಂಪ್ರದಾಯಿಕ ಕಟ್ಟದ ಮೂಲಕ ರೈತರು ನೀರು ಸಂಗ್ರಹಿಸಲು ಮುಂದಾಗಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನ ಕೊನೆಯಲ್ಲಿ ಕಿಂಡಿ ಅಣೆಕಟ್ಟು, ಇತರೆ ಸಾಂಪ್ರದಾಯಿಕ ಅಣೆಕಟ್ಟಿನ ಮೂಲಕ ರೈತರು ನೀರು ಸಂಗ್ರಹಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ವರ್ಷ ಒಂದೂವರೆ ತಿಂಗಳಿಗೆ ಮೊದಲೇ ನೀರು ಸಂಗ್ರಹಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಅರಂತೋಡು ಗ್ರಾಮದ ಅಂಗಡಿಮಜಲಿನಲ್ಲಿ ನೂತನವಾಗಿ ನಿರ್ಮಿಸಿದ ಕಿರು ಕಿಂಡಿ ಅಣೆಕಟ್ಟಿನಲ್ಲಿ ಈಗ ನೀರು ಸಂಗ್ರಹಿಸಲಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ ಪೂರ್ಣಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು, ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಬೀರಿದೆ. ಸುಮಾರು 8 ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಮೂರು ಕಿಂಡಿ ಅಣೆಕಟ್ಟು
2017-18ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ನ ಪ್ರೋತ್ಸಾಹದಿಂದ ಅರಂತೋಡು ಗ್ರಾಮ ಪಂಚಾಯತ್ನ ವತಿಯಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿಗೆ ನೀರು ಒದಗಿಸುವ ದೃಷ್ಟಿಯಿಂದ ಹಾಗೂ ಅಂತರ್ಜಲ ಮಟ್ಟ ಏರಿಕೆ ಉದ್ದೇಶ ಇರಿಸಿಕೊಂಡು ಮೂರು ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂದು ಅಂಗಡಿಮಜಲಿನಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು. ಇನ್ನೆರಡನ್ನು ತೊಡಿಕಾನ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ.
ಉದ್ಯೋಗ ಖಾತರಿಯಲ್ಲಿ ಅವಕಾಶ
ಅರಂತೋಡು ಗ್ರಾ.ಪಂ. ವತಿಯಿಂದ ಖಾಸಗಿಯಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವವರು ಇದ್ದರೆ ಅವರಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಅಂಗಡಿ ಮಜಲು ಕಿಂಡಿ ಅಣೆಕಟ್ಟನ್ನು ಜಿಲ್ಲಾ ಪಂ.ನ ಸಹಕಾರದೊಂದಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಈಗ ನೀರು ಸಂಗ್ರಹಗೊಂಡಿದೆ. ಇದೊಂದು ಮಾದರಿ ಕಾಮಗಾರಿಯಾಗಿದೆ.
– ಶಿವಾನಂದ ಕುಕ್ಕುಂಬಳ ಉಪಾಧ್ಯಕ್ಷರು,
ಅರಂತೋಡು ಗ್ರಾ.ಪಂ.
ತೇಜೇಶ್ವರ್ ಕುಂದಲ್ಪಾಡಿ