ಕಡಲಕೆರೆಯಲ್ಲಿ ದೋಣಿ ವಿಹಾರ ಆರಂಭ
Team Udayavani, Aug 2, 2017, 8:59 PM IST
ಮೂಡಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ಶಾಸಕ ಕೆ.ಅಭಯಚಂದ್ರ ಅವರು ಮಂಗಳವಾರ ದೋಣಿ ವಿಹಾರ ಮಾಡುವ ಮೂಲಕ ಈ ಸಾಲಿನ ದೋಣಿ ವಿಹಾರಕ್ಕೆ ಚಾಲನೆ ನೀಡಿದರು. ‘ಪ್ರಕೃತಿ ಸೌಂದರ್ಯದ ನಡುವೆ ಇರುವ ಜಿಲ್ಲೆಯ ಏಕೈಕ ದೋಣಿ ವಿಹಾರ ತಾಣ ಇದಾಗಿದೆ. ಕಡಲಕೆರೆಯ ನಡುವೆ ಎರಡು ಎಕ್ರೆ ಪ್ರದೇಶದಲ್ಲಿ ಪಕ್ಷಿಧಾಮವಿರುವುದರಿಂದ ವಿಹಾರಾರ್ಥಿಗಳು ಹಕ್ಕಿಗಳ ಕಲರವದೊಂದಿಗೆ ಸಂಭ್ರಮಿಸಬಹುದಾಗಿದೆ. ಪಕ್ಕದಲ್ಲೇ ಇರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣವನ್ನು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಡಿಸೆಂಬರ್ನೊಳಗೆ ರಾಷ್ಟ್ರಮಟ್ಟದ ಕಂಬಳವನ್ನು ಇಲ್ಲಿಯೇ ನಡೆಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ತಹಶೀಲ್ದಾರ್ ಮಹಮ್ಮದ್ ಇಸಾಕ್, ಸ. ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ,ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ‘ಮೂಡಾ’ ಅಧ್ಯಕ್ಷ ಎಚ್. ಸುರೇಶ್ ಪ್ರಭು, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕಾಮತ್, ರೋಟರಿ ಜಿಲ್ಲಾ ಉಪರಾಜ್ಯಪಾಲ ಎ.ಎಂ. ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಪಿ.ಕೆ. ಥೋಮಸ್, ಬೋಟಿಂಗ್ ನಿರ್ವಾಹಕ ಡಾ| ಎಂ.ಎಸ್.ನದೀರ್ ಪುತ್ತೂರು ಉಪಸ್ಥಿತರಿದ್ದರು.