ಡಿಕೆ ಶಿವಕುಮಾರ್ ಟೆರರಿಸ್ಟಾ? ಐಟಿ ವಿರುದ್ಧ ಪೂಜಾರಿ ವಾಗ್ದಾಳಿ
Team Udayavani, Aug 2, 2017, 6:05 PM IST
ಮಂಗಳೂರು: ಸಿಆರ್ ಪಿಎಫ್ ಯೋಧರನ್ನು ಕರೆದುಕೊಂಡು ಹೋಗಿ 39 ಕಡೆಗಳಲ್ಲಿ ದಾಳಿ ಮಾಡಿದ್ದೀರಿ. ಮಿಲಿಟರಿ ಭಾಗವಾದ ಸಿಆರ್ ಪಿಎಫ್ ಯೋಧರನ್ನು ಕೀಳಾಗಿ ನಡೆಸಿಕೊಂಡಿದ್ದೀರಿ. ಹಾಗಾದರೆ ಮೋದಿ ಅವರನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ವಾ? ಇದು ಕಾಂಗ್ರೆಸ್ ಪ್ರಭಾವಿ ಮುಖಂಡ ಡಿಕೆಶಿ ನಿವಾಸ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಜನಾರ್ದನ ಪೂಜಾರಿ ನಡೆಸಿರುವ ವಾಗ್ದಾಳಿಯ ಪರಿ ಇದು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಏನು ಟೆರರಿಸ್ಟಾ? ಅವರ ಮನೆಗೆ ಸರ್ಪಗಾವಲು ಹಾಕಿದ್ರಲ್ಲ. ಯಾರನ್ನೂ ಪ್ರಶ್ನೆ ಮಾಡಲ್ಲ, ಮೋದಿ ಅವರನ್ನು ಮಾತ್ರ ಪ್ರಶ್ನೆ ಮಾಡ್ತೀನಿ, ಡಿಕೆಶಿ ಮನೆಯಲ್ಲಿ ಹಣ ಏನೂ ಸಿಕ್ಕಿಲ್ಲ ಅಂದ್ರೆ ಯಾಕೆ ದಾಳಿ ಮಾಡಿದ್ರು? ಸರ್ಚ್ ವಾರೆಂಟ್ ಅಥವಾ ಬೇರೆ ನಿಯಮಗಳನ್ನು ಪಾಲನೆ ಮಾಡಿದ್ರಾ, ಶಿವಕುಮಾರ್ ಅವರನ್ನು ಟೆರರಿಸ್ಟ್ ಥರ ಮಾಡಿ ಅವರ ಮನೆಯವ್ರಿಗೆ ಭಯ ಹುಟ್ಟಿಸಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬರಲಿ ಮೋದಿಯವರೇ ಜನ ಉತ್ತರ ಕೊಡ್ತಾರೆ. ಇವತ್ತು ಡಿಕೆ ಶಿವಕುಮಾರ್ ಆದ್ರೆ ನಾಳೆ ಪೂಜಾರಿ, ಸೋನಿಯಾ, ರಾಹುಲ್ ಅವರನ್ನು ಜೈಲಿಗಟ್ಟಲು ಹಿಟ್ಲರ್ ನಂತೆ ಯತ್ನಿಸುತ್ತೀರಾ. ನಾಳೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಬಹುದು ಎಂದು ವಾಗ್ದಾಳಿ ನಡೆಸಿದರು.