‘ಗ್ರಾಮಗಳ ಸ್ವಚ್ಛತೆಯಿಂದ ದೇಶದ ಸ್ವಚ್ಛತೆ’
Team Udayavani, Sep 16, 2018, 11:09 AM IST
ಬಜಪೆ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸು ನನಸಾಗಲು ಗ್ರಾಮ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತಾ ಅಭಿಯಾನಕ್ಕೆ 4ವರ್ಷ ಗಳಾಗಿವೆ. ಸ್ವಚ್ಛತೆ ಕೇವಲ ಕಾಟಾಚಾರಕ್ಕೆ ಮಾತ್ರ ಇರಬಾರದು. ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸ್ವಚ್ಛತೆ ಅಗತ್ಯವಾಗಿದೆ. ದೇಶದಲ್ಲಿ ಶೇ.90ರಷ್ಟು ಶೌಚಾಲಯಗಳು ಕೇಂದ್ರದ ಯೋಜನೆಯಡಿ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಧ್ಯಾನತೆ ನೀಡಬೇಕಾಗಿದೆ ಎಂದು ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಶನಿವಾರದಂದು ಬಜಪೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಜತೆ ಬಜಪೆ ಶ್ರೀ ವಿಜಯ ವಿಠಲ ಭಜನ ಮಂದಿರದಿಂದ ಬಜಪೆ ಪೇಟೆಯವರಿಗೆ ರಸ್ತೆಯ ಬದಿಯ ಕಸತ್ಯಾಜ್ಯವನ್ನು ಗುಡಿಸಿ, ಹೆಕ್ಕಿ ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಜಿ. ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡಬಿದಿರೆ ಮಂಡಲ ಬಿಜೆಪಿ ಅಧ್ಯಕ್ಷ ಈಶ್ವರ್ ಕಟೀಲ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ , ಜಿಲ್ಲಾ ಪಂಚಾಯತ್ ಸದಸ್ಯೆ ವಸಂತಿ ಕಿಶೋರ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಮಾನಾಥ ಅತ್ತಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಜೋಕಿಂ ಡಿ’ಕೋಸ್ತಾ, ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ, ಪೆರ್ಮುದೆ ಗ್ರಾ. ಪಂ. ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಕಿಶೋರ್ ಕೋಟ್ಯಾನ್, ಬಜಪೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್ ಪೂಜಾರಿ, ಉಮೇಶ್ ಮೂಡುಶೆಡ್ಡೆ, ಜಯಂತ್ ತೋಕೂರು, ವಿಜಯ ಕುಮಾರ್ ಕಾನ, ಬಜಪೆ ಹಾಗೂ ಮಳವೂರು ಗ್ರಾ.ಪಂ. ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.